ವಾಣಿ ಕಾಲೇಜು ವಿದ್ಯಾರ್ಥಿಯ ಡಿಬಾರ್ ಪ್ರಕರಣ ➤ ಸಂಘಟನೆ ಹೆಸರು ದುರ್ಬಳಕೆ ಮಾಡಿದ ಪ್ರಾಂಶುಪಾಲರ ನಡೆಗೆ ಪಾಪ್ಯುಲರ್ ಫ್ರಂಟ್ ಖಂಡನೆ ➤➤ ದೂರು ದಾಖಲಿಸಲು ನಿರ್ಧಾರ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ನ. 02. ಇಲ್ಲಿನ ವಾಣಿ ಕಾಲೇಜಿನ ವಿದ್ಯಾರ್ಥಿಯನ್ನು ಡಿಬಾರ್ ಮಾಡಿದ ವಿಚಾರಕ್ಕೆ ಸಂಬಂಧಿಸಿ ಕಾಲೇಜಿನ ಪ್ರಾಂಶುಪಾಲರು ಮಾಧ್ಯಮಕ್ಕೆ ಮಾಹಿತಿ ನೀಡುವ ವೇಳೆ ಪಿಎಫ್ಐ ಸಂಘಟನೆಯ ಹೆಸರನ್ನು ದುರ್ಬಳಕೆ ಮಾಡಿ ಪೂರ್ವಾಗ್ರಹಪೀಡಿತರಾಗಿ ವರ್ತಿಸಿರುವುದನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬೆಳ್ತಂಗಡಿ ಜಿಲ್ಲಾಧ್ಯಕ್ಷ ಮುಸ್ತಫಾ ಜಿ.ಕೆ ತೀವ್ರವಾಗಿ ಖಂಡಿಸಿದ್ದಾರೆ.

ಈ ಮಧ್ಯೆ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಎಂಬ ವಿದ್ಯಾರ್ಥಿ ಸಂಘಟನೆಯಲ್ಲಿ ಸದಸ್ಯತ್ವ ಪಡೆದಿದ್ದಾನೆ ಎಂಬ ಕಾರಣಕ್ಕಾಗಿ ವಿದ್ಯಾರ್ಥಿಯನ್ನು ಡಿಬಾರ್ ಮಾಡಿರುವುದು ಸಂವಿಧಾನ ವಿರೋಧಿ. ಆ ವಿದ್ಯಾರ್ಥಿ ಯಾವುದೇ ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗಿಸಿರುವ ಸಂಘಟನೆಯಲ್ಲಿ ಗುರುತಿಸಿಲ್ಲ. ಬದಲಿಗೆ, ಆತ ವಿದ್ಯಾರ್ಥಿಗಳಲ್ಲಿ ಶಿಕ್ಷಣದ ಅರಿವು ಮೂಡಿಸುವ, ಅರ್ಧದಲ್ಲಿ ಶಾಲೆ ತೊರೆದ ಮಕ್ಕಳಲ್ಲಿ ಜಾಗೃತಿ ಮೂಡಿಸಿ ಅವರನ್ನು ಮರು ಸೇರ್ಪಡೆಗೊಳಿಸುವ, ಶಾಲಾ ಮಕ್ಕಳಲ್ಲಿ ಪರಿಸರ ಕಾಳಜಿ ಮೂಡಿಸುವ ಮೊದಲಾದ ಶಿಕ್ಷಣಸ್ನೇಹಿ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳುತ್ತಾ ಬರುತ್ತಿರುವ ವಿದ್ಯಾರ್ಥಿ ಸಂಘಟನೆಯ ಸದಸ್ಯನಾಗಿದ್ದಾನೆ. ತನ್ನ ಇಚ್ಛೆಯಂತೆ ಆತ ಸಂಘಟನೆಯಲ್ಲಿ ಸೇರಲು ಮುಕ್ತ ಸ್ವಾತಂತ್ರ್ಯ ಹೊಂದಿದ್ದಾನೆ. ಆದರೆ ನಿರ್ದಿಷ್ಟ ವಿದ್ಯಾರ್ಥಿ ಸಂಘಟನೆಗೆ ಸೇರಿದ ಕಾರಣಕ್ಕೆ ದುರುದ್ದೇಶಪೂರಿತವಾಗಿ ಆತನನ್ನು ಕಾಲೇಜಿನಿಂದ ಹೊರಹಾಕಿರುವುದು ಆತನ ಶಿಕ್ಷಣದ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದೆ.

ಪ್ರಾಂಶುಪಾಲರು ತಮ್ಮ ಬೇಜವಾಬ್ದಾರಿಯುತ ನಿಲುವನ್ನು ಬದಲಿಸಿ ವಿದ್ಯಾರ್ಥಿಗೆ ಶಿಕ್ಷಣ ಪಡೆಯಲು ಪೂರಕವಾದ ವಾತಾವರಣವನ್ನು ಕಲ್ಪಿಸಬೇಕು ಮತ್ತು ವಿದ್ಯಾರ್ಥಿಯೊಂದಿಗೆ ತಾರತಮ್ಯ ನಡೆಸುವುದನ್ನು ನಿಲ್ಲಿಸಬೇಕೆಂದು ಒತ್ತಾಯಿಸಿರುವ ಮುಸ್ತಫಾ ಜಿ.ಕೆ, ಪಾಪ್ಯುಲರ್ ಫ್ರಂಟ್ ಸಂಘಟನೆಯ ಹೆಸರು ದುರ್ಬಳಕೆ ಮಾಡಿದ ಪ್ರಾಂಶುಪಾಲರ ವಿರುದ್ಧ ದೂರು ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ಹೇಳಿದ್ದಾರೆ.

Also Read  ಪ್ರಸಿದ್ಧ ದೈವ ನರ್ತಕ ಸಾಧು ಪಾಣಾರ ಮಂಚಿಕೆರೆ ವಿಧಿವಶ

error: Content is protected !!
Scroll to Top