ಬಂಟ್ವಾಳ: ತುಳು ಲಿಪಿ ನಾಮಫಲಕ ಅನಾವರಣ

(ನ್ಯೂಸ್ ಕಡಬ) Newskadaba.com ಬಂಟ್ವಾಳ, ಅ. 11. ವಿಶ್ವ ತುಳು ಲಿಪಿ ದಿನವಾದ ಅಕ್ಟೋಬರ್ 10 ರಂದು ತಾಲೂಕಿನ ಭಂಡಾರಿಬೆಟ್ಟುವಿನಲ್ಲಿರುವ ಯುವಜನ ವ್ಯಾಯಾಮ ಶಾಲೆಯ ನಾಮಫಲಕವನ್ನು ತುಳು ಲಿಪಿಯಲ್ಲಿ ಹಾಕಲಾಯಿತು. ತುಳು ಲಿಪಿ ಶಿಕ್ಷಕರು ಹಾಗೂ ಜೈ ತುಳುನಾಡ್ (ರಿ.) ಸಂಘಟನೆಯ ಉಪ ಸಂಘಟನಾ ಕಾರ್ಯದರ್ಶಿಯಾದ ಜಗದೀಶ ಗೌಡ ಕಲ್ಕಳ ಇವರು ತುಳು ಲಿಪಿ ನಾಮಫಲಕವನ್ನು ಅನಾವರಣಗೊಳಿಸಿದರು. ಹಾಗೆಯೇ ತುಳು ಲಿಪಿ ದಿನದ ವಿಶೇಷತೆ ಹಾಗೂ ಪುಂಡೂರು ವೆಂಕಟರಾಜ ಪುಣಿಂಚಿತ್ತಾಯ (ಪುವೆಂಪು) ಇವರ ಹುಟ್ಟುಹಬ್ಬವನ್ನು ತುಳು ಲಿಪಿ ದಿನವಾಗಿ ಆಚರಿಸುವುದರ ಬಗ್ಗೆ ಮಾಹಿತಿ ನೀಡಿದರು.


ಈ ಸಂದರ್ಭದಲ್ಲಿ ತುಳು ಲಿಪಿಯಲ್ಲಿ ನಾಮಫಲಕವನ್ನು ಬರೆದ ಜಯ ಆರ್ಟ್ಸ್‌ನ ಜಯರಾಮ, ಯುವಜನ ವ್ಯಾಯಾಮ ಶಾಲೆ ಭಂಡಾರಿಬೆಟ್ಟು ಇದರ ಅಧ್ಯಕ್ಷರಾದ ಹೆನ್ರಿ ಪಿರೇರಾ ಉಪಸ್ಥಿತರಿದ್ದರು. ತುಳುನಾಡ ಯುವಸೇನೆ ಬಂಟ್ವಾಳ ಇದರ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಿತು. ತುಳು ಲಿಪಿ ಶಿಕ್ಷಕರಾದ ಪೃಥ್ವಿ ತುಳುವೆ ಕಾರ್ಯಕ್ರಮವನ್ನು ನಿರೂಪಿಸಿದರು. ನಾಮಫಲಕ ಅನಾವರಣದ ನಂತರ ಜೈ ತುಳುನಾಡ್ (ರಿ.), ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ತುಳುನಾಡ ಯುವಸೇನೆ ಬಂಟ್ವಾಳ ಇವರ ಸಹಭಾಗಿತ್ವದಲ್ಲಿ ನಡೆದ ಬಲೆ ತುಳು ಲಿಪಿ ಕಲ್ಪುಗ ಕಾರ್ಯಾಗಾರದ ತುಳು ಲಿಪಿ ಪರೀಕ್ಷೆ ನಡೆಯಿತು. ತುಳು ಲಿಪಿ ಶಿಕ್ಷಕರಾದ ಜಗದೀಶ್ ಗೌಡ ಕಲ್ಕಳ, ಪೂರ್ಣಿಮಾ ಬಂಟ್ವಾಳ ಮತ್ತು ಪೃಥ್ವಿ ತುಲುವೆ ಪರೀಕ್ಷೆಯನ್ನು ನಡೆಸಿಕೊಟ್ಟರು.

error: Content is protected !!

Join the Group

Join WhatsApp Group