ಕಟ್ಟಿಗೆಯಿಂದ ಹೊಡೆದು ಪತ್ನಿಯ ಕೊಂದ ಪತಿ ಮಹಾಶಯ ➤ ಗಂಡ – ಹೆಂಡತಿ ಜಗಳ ಕೊಲೆಯಲ್ಲಿ ಅಂತ್ಯ

(ನ್ಯೂಸ್ ಕಡಬ) newskadaba.com ಮಂಗಳೂರು, ಆ.19. ಪತ್ನಿಯ ಮೇಲಿನ ಸಂಶಯದಿಂದ ಆಕೆಯನ್ನು ಕಟ್ಟಿಗೆಯಿಂದ ಹೊಡೆದು ಕೊಂದು ಆ ಬಳಿಕ ಮಹಡಿಯಿಂದ ಬಿದ್ದ ಬಗ್ಗೆ ಕಟ್ಟು ಕಥೆ ಕಟ್ಟಿದ ಪತಿ ಮಹಾಶಯನನ್ನು ಪೊಲೀಸರು ಬಂಧಿಸಿದ್ದಾರೆ.

ಮಂಗಳೂರು ನಗರದ ಹೊರವಲಯದ ದರೆಗುಡ್ಡೆ ಎಂಬಲ್ಲಿ ಈ ಕೃತ್ಯ ನಡೆದಿದ್ದು, ದಿನ್ ರಾಜ್ ಎಂಬಾತ ಒಂದೂವರೆ ವರ್ಷದ ಹಿಂದೆ ಸುನಿತಾ ಎಂಬ ಯುವತಿಯನ್ನು ವಿವಾಹವಾಗಿದ್ದ ಎನ್ನಲಾಗಿದೆ. ಆದರೆ ಸುನಿತಾಳ ತಾಯಿ ಮನೆಯಲ್ಲಿ ಒಬ್ಬರೇ ಇರುತ್ತಿದ್ದರಿಂದ, ಮಗಳು ಸುನಿತಾ ಸಹ ತಾಯಿಯೊಂದಿಗೆ ತವರು ಮನೆಯಲ್ಲೇ ಇರುತ್ತಿದ್ದಳು. ಆಕೆಯ ಪತಿ ದಿನ್ ರಾಜ್ ಅಲ್ಲಿಗೆ ನಿತ್ಯವೂ ಬರುತ್ತಿದ್ದು ಪದೇ ಪದೇ ಹೆಂಡತಿಯ ಜೊತೆ ಜಗಳವಾಡುತ್ತಿದ್ದ ಎನ್ನಲಾಗಿದೆ. ದಿನ್ ರಾಜ್ ಮತ್ತು ಸುನಿತಾಳ ನಡುವೆ ಜಗಳ ನಡೆದಿದ್ದು, ಈ ಸಂದರ್ಭದಲ್ಲಿ ಪತಿ ದಿನ್ ರಾಜ್ ಪತ್ನಿಯ ತಲೆಗೆ ಕಟ್ಟಿಗೆಯಿಂದ ಬಲವಾಗಿ ಹೊಡೆದಿದ್ದಾನೆ. ಇದರಿಂದ ಸುನಿತಾಳ ತಲೆ, ಕುತ್ತಿಗೆ ಹಾಗೂ ಮುಖಕ್ಕೆ ಪೆಟ್ಟು ಬಿದ್ದಿದ್ದು, ಇದನ್ನು ಕಂಡು ಸುನಿತಾಳ ತಾಯಿ ಚೀರಿಕೊಂಡಿದ್ದಾರೆ‌‌.

ತಕ್ಷಣವೇ ದಿನ್ ರಾಜ್ ಪತ್ನಿಯನ್ನು ಮೂಡಬಿದ್ರೆ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾನೆ. ಅಲ್ಲಿ ತನ್ನ ಪತ್ನಿ ಮಹಡಿ ಮೇಲಿಂದ ಬಿದ್ದು ಗಾಯಗೊಂಡಿರುವುದಾಗಿ ತಿಳಿಸಿದ್ದು, ಸಂಶಯ ಬಂದ ವೈದ್ಯರು ಮೂಡಬಿದ್ರೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಕೊಲೆ ಕೃತ್ಯ ಬಯಲಿಗೆ ಬಂದಿದ್ದು, ಆರೋಪಿಯನ್ನು ಬಂಧಿಸಲಾಗಿದೆ.

 

 

 

error: Content is protected !!

Join the Group

Join WhatsApp Group