ಉಪ್ಪಿನಂಗಡಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಟಿಎಂ ಕಳವಿಗೆ ಯತ್ನ ➤ ಆರೋಪಿಯ ಬಂಧನ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಮೇ.01. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಉಪ್ಪಿನಂಗಡಿ ಶಾಖೆಯ ಎಟಿಎಂ ಕಳವಿಗೆ ಯತ್ನಿಸಿದ ಆರೋಪಿಯನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಕಡಬ ತಾಲೂಕು ಸವಣೂರು ಗ್ರಾಮದ ಮಾಂತೂರು ನಿವಾಸಿ ಮಹಮ್ಮದ್ ಎಂಬವರ ಪುತ್ರ ಸಮೀರ್ ಯಾನೆ ಅಮ್ಮಿ(23) ಎಂದು ಗುರುತಿಸಲಾಗಿದೆ. ಆರೋಪಿಯು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಉಪ್ಪಿನಂಗಡಿ ಶಾಖೆಯ ಎಟಿಎಂ ಗೆ ನುಗ್ಗಿ ಸಿಸಿ ಕ್ಯಾಮೆರಾ ಸೇರಿದಂತೆ ಎರಡು ಎಟಿಎಂ ಮೆಷಿನ್ ಗಳನ್ನು ಹಾನಿಗೊಳಿಸಿದ ಘಟನೆಯು ಎಪ್ರಿಲ್ 28 ರಂದು ಬೆಳಕಿಗೆ ಬಂದಿತ್ತು. ಪ್ರಕರಣದ ತನಿಖೆ ಕೈಗೆತ್ತಿಕೊಂಡ ಉಪ್ಪಿನಂಗಡಿ ಪೊಲೀಸರು ಜಿಲ್ಲಾ ಎಸ್ಪಿ ರಿಷಿಕೇಶ್ ಸೋನಾವಣೆ ಹಾಗೂ ಹೆಚ್ಚುವರಿ ಎಸ್ಪಿ ಭಾಸ್ಕರ ಒಕ್ಕಲಿಗರವರ ಆದೇಶದ ಮೇರೆಗೆ ಪುತ್ತೂರು ಡಿವೈಎಸ್ಪಿ ಕು| ಗಾನ ಕುಮಾರಿಯವರ ಮಾರ್ಗದರ್ಶನದಲ್ಲಿ ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕ ಉಮೇಶ್ ಉಪ್ಪಳಿಕೆಯವರ ನೇತೃತ್ವದಲ್ಲಿ ಉಪ್ಪಿನಂಗಡಿ ಪಿಎಸ್ಐ ಕುಮಾರ್ ಸಿ. ಕಾಂಬ್ಲೆ, ಪ್ರೊಬೆಷನರಿ ಪಿಎಸ್ಐ ಅನಿಲ್ ಕುಮಾರ್ ಡಿ. ಹಾಗೂ ಸಿಬ್ಬಂದಿಗಳು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

 

 

Scroll to Top