ತೊಕ್ಕೊಟ್ಟು: ರೈಲು ಢಿಕ್ಕಿ ಹೊಡೆದು ಬ್ಯಾಂಕ್ ಉದ್ಯೋಗಿ ಮೃತ್ಯು

(ನ್ಯೂಸ್ ಕಡಬ) newskadaba.com ಉಳ್ಳಾಲ, ಫೆ. 14. ರೈಲು ಢಿಕ್ಕಿ ಹೊಡೆದ ಪರಿಣಾಮ ಬ್ಯಾಂಕ್ ಉದ್ಯೋಗಿಯೋರ್ವರು ದಾರುಣವಾಗಿ ಮೃತಪಟ್ಟ ಘಟನೆ ತೊಕ್ಕೊಟ್ಟು ಬಳಿ ನಡೆದಿದೆ.

ಮೃತರನ್ನು ಕೋಟೆಕಾರು, ಬೀರಿ ಭಂಡಾರಮನೆ ಬಳಿಯ ನಿವಾಸಿ ಸತೀಶ್ಚಂದ್ರ ನಾಯ್ಕ್ (28) ಎಂದು ಗುರುತಿಸಲಾಗಿದೆ. ಮೃತದೇಹವು ರೈಲು ಹಳಿಯಿಂದ ದೂರಕ್ಕೆ ಎಸೆಯಲ್ಪಟ್ಟ ಸ್ಥಿತಿಯಲ್ಲಿದ್ದು, ಮೃತದೇಹದ ಮೈಯಲ್ಲಿದ್ದ ಬಟ್ಟೆ ಹರಿದು ಚಿಂದಿಯಾಗಿದೆ. ಹಳಿ ದಾಟುವಾಗ ರೈಲು ಡಿಕ್ಕಿ ಹೊಡೆದು, ಎಳೆದುಕೊಂಡು ಹೋಗಿರುವ ಶಂಕೆ ವ್ಯಕ್ತವಾಗಿದೆ. ಇವರು ಕೆನರಾ ಬ್ಯಾಂಕ್ ಉದ್ಯೋಗಿಯಾಗಿದ್ದು, ಸಾಲೆತ್ತೂರು ಶಾಖೆಯಿಂದ ಇತ್ತೀಚೆಗೆ ಮಡಿಕೇರಿಗೆ ವರ್ಗಾವಣೆಗೊಂಡಿದ್ದರು. ಇಂದು ವಾರದ ರಜಾ ದಿನವಾಗಿದ್ದರಿಂದ ನಿನ್ನೆ ಮಡಿಕೇರಿಯಿಂದ ಊರಿಗೆ ಬಂದಿದ್ದು, ಶನಿವಾರ ರಾತ್ರಿ 9 ಗಂಟೆಗೆ ಮನೆಗೆ ಬಂದು ತೊಕ್ಕೊಟ್ಟಿಗೆ ಹೋಗಿದ್ದವರು ಹಿಂತಿರುಗಿ ಬಂದಿರಲಿಲ್ಲ ಎಂದು ಮನೆಯವರು ತಿಳಿಸಿದ್ದಾರೆ. ಸತೀಶ್ಚಂದ್ರ ಅವಿವಾಹಿತರಾಗಿದ್ದು, ತೀವ್ರ ಕುಡಿತದ ಚಟ ಹೊಂದಿದ್ದರೆನ್ನಲಾಗಿದೆ. ನಿನ್ನೆ ರಾತ್ರಿ ಗೆಳೆಯರ ಜೊತೆ ಕುಡಿತದ ಪಾರ್ಟಿ ಮಾಡಿದ್ದ ಸತೀಶ್ವಂದ್ರ, ಮನೆಗೆ ತೆರಳಿರಲಿಲ್ಲ. ಕುಡಿತದ ನಶೆಯಲ್ಲಿ ಇಂದು ಬೆಳಗ್ಗೆ ಹಳಿ ದಾಟುವಾಗ ರೈಲು ಡಿಕ್ಕಿಯಾಗಿ ಮೃತಪಟ್ಟಿರುವುದಾಗಿ ಶಂಕಿಸಲಾಗಿದೆ. ಈ ಕುರಿತು ರೈಲ್ವೇ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

error: Content is protected !!

Join the Group

Join WhatsApp Group