ವಾಹನ ಚಾಲಕರ ಸಂಘದ ವಾರ್ಷಿಕ ಮಹಾಸಭೆ ಹಾಗೂ ನಿವೃತ್ತರಿಗೆ ಸನ್ಮಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 13. ದ.ಕ. ಜಿಲ್ಲಾ ಸರ್ಕಾರಿ ವಾಹನ ಚಾಲಕರ ಕೇಂದ್ರ ಸಂಘ (ರಿ) ಮಂಗಳೂರು ಇದರ ವಾರ್ಷಿಕ ಮಹಾಸಭೆ ಹಾಗೂ ಸರಕಾರಿ ಸೇವೆಯಿಂದ ವಯೋ ನಿವೃತ್ತಿ ಹೊಂದಿದ ವಿವಿಧ ಇಲಾಖೆಗಳ ವಾಹನ ಚಾಲಕರನ್ನು ಸಂಘದ ವತಿಯಿಂದ ಗೌರವಿಸಿ, ಸನ್ಮಾನಿಸುವ ಕಾರ್ಯಕ್ರಮವು ಸಂಘದ ಕಛೇರಿಯಲ್ಲಿ ಜನವರಿ 10 ರಂದು ಸಂಘದ ಅಧ್ಯಕ್ಷ ಅರುಣಕಾಂತರವರ ಅಧ್ಯಕ್ಷತೆಯಲ್ಲಿ ನಡೆಯಿತು.

ನಿವೃತ್ತ ವಾಹನ ಚಾಲಕರಾದ ತೋಟಗಾರಿಕಾ ಇಲಾಖೆಯ ಮೋಹನ್, ಮಂಗಳೂರು ಮಹಾನಗರ ಪಾಲಿಕೆಯ ಕೃಷ್ಣ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿಯ ಪುರುಷೋತ್ತಮ, ಜಿಲ್ಲಾ ತರಬೇತಿ ಇಲಾಖೆಯ ಫೌಲ್ ಡಿ.ಸೋಜ,  ವಾಣಿಜ್ಯ ತೆರಿಗೆ ಇಲಾಖೆಯ ಜಿನ್ನಪ್ಪ ನಾಯ್ಕ್, ಇವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಅರುಣಕಾಂತ  ಮಾತನಾಡುತ್ತಾ ಸರಕಾರದಿಂದ ಹೊಸ ವಾಹನ ಚಾಲಕರ ನೇಮಕಾತಿ ಇಲ್ಲದೇ ಇರುವುದರಿಂದ ಸಂಘದ ಸದಸ್ಯರ ಸಂಖ್ಯೆ ಕಡಿಮೆಯಾಗುತ್ತಿದೆ. ಆದ್ದರಿಂದ ನಿವೃತ್ತ ವಾಹನ ಚಾಲಕರು ಅಜೀವ ಸದಸ್ಯರಾಗಿ ಸಂಘದ ಅಭಿವೃದ್ಧಿಗೆ ಸಹಕರಿಸುವಂತೆ ಮನವಿ ಮಾಡಿದರು. ವೇದಿಕೆಯಲ್ಲಿ ಗೌರವಾಧ್ಯಕ್ಷ ದಯಾನಂದ ಕೆ., ನಿವೇಶನ ಸಮಿತಿ ಅಧ್ಯಕ್ಷ ರೋಬರ್ಟ್ ಫಾಯಸ್, ಮಾಜಿ ಅಧ್ಯಕ್ಷ ವಿಶ್ವನಾಥ ಶೆಟ್ಟಿ ಬಿ.,ಉಪಾಧ್ಯಕ್ಷರಾದ ವೇಣುಗೋಪಾಲ್ ಹಾಗೂ ಸತ್ಯನಾರಾಯಣ ಕಾಮತ್ ಉಪಸ್ಥಿತರಿದ್ದರು.

Scroll to Top