ಬಂಟ್ವಾಳ : ಕೋವಿಡ್ ಪರಿಹಾರ ನೆಪ ಹೇಳಿ ವೃದ್ಧೆಯ ಕಿವಿಯೋಲೆ ದೋಚಿದ ಅಪರಿಚಿತ

(ನ್ಯೂಸ್ ಕಡಬ) newskadaba.com ಬಂಟ್ವಾಳ . 09: ಕೊರೊನಾ ಪರಿಹಾರ ಹಣದ ನೆಪದಲ್ಲಿ ಬಂಟ್ವಾಳದ ವೃದ್ಧೆಯ ಕಿವಿಯೋಲೆಯನ್ನು ಅಪರಿಚಿತ ದೋಚಿದ ಘಟನೆ ನಡೆದಿದೆ. ಇಂದು ಬೆಳಗ್ಗೆ ತಲೆಂಬಿಲ ನಿವಾಸಿ ಜಯಂತಿ ಎಂಬುವ ವೃದ್ಧೆ ಬಿ.ಸಿ ರೋಡಿನ ಮೆಸ್ಕಾಂ ಕಚೇರಿಗೆ ಆಗಮಿಸಿ ವಿದ್ಯುತ್ ಬಿಲ್ ಪಾವತಿಸಿ ಹಿಂತಿರುಗುವಾಗ ಅಪರಿಚಿತನೊಬ್ಬ, ತನ್ನನ್ನು ತಾನು ವೃದ್ಧೆ ಗೆ ಪರಿಚಯಿಸಿಕೊಂಡು. ಕೊರೋನಾ ದಿಂದಾಗಿ ಒಂದೂವರೆ ಲಕ್ಷ ಹಣ ಪರಿಹಾರವಾಗಿ ನಿಮಗೆ ಬಂದಿದೆ ಎಂದಿದ್ದಾನೆ.

ಆ ಹಣವನ್ನು ಪಡೆಯಲು 10 ಸಾವಿರ ಹಣ ಕಟ್ಟಬೇಕು ಎಂದಾಗ , ವೃದ್ಧೆ ತನ್ನ ಬಳಿ ಅಷ್ಟೊಂದು ಹಣವಿಲ್ಲ. ಮಗನ ಬಳಿ ಕೇಳಿ ಕೊಡುವೆ ಎಂದಿದ್ದಾರೆ. “ನಾನು ಈಗಾಗಲೇ ನಿಮ್ಮ ಮಗನ ಬಳಿ ಫೋನಿನಲ್ಲಿ ವಿಚಾರಿಸಿದಾಗ ಅವರಲ್ಲಿ ಅಷ್ಟೊಂದು ಹಣವಿಲ್ಲ ಎಂದ್ದರು. ನೀವು ನಿಮ್ಮ ಕಿವಿಯೋಲೆ ನೀಡಬೇಕಂತೆ ಎಂದಿದ್ದಾರೆ”. ಎಂದು ಅಪರಿಚಿತ ವೃದ್ದೆಯ ಬಳಿ ಹೇಳಿ ನಂಬಿಸಿದ್ದಾನೆ.  ತಕ್ಷಣವೇ ವೃದ್ದೆ ತನ್ನ ಬೆಂಡೋಲೆಯನ್ನು ಆತನ ಕೈಗೆಯಿಟ್ಟಿದ್ದಾರೆ. ಕೂಡಲೇ ಆತ ಅಲ್ಲಿಂದ ಪರಾರಿಯಾಗಿದ್ದಾನೆ. ಇದರಿಂದ ದಂಗಾದ ವೃದ್ಧೆ ಮಿನಿ ವಿಧಾನಸೌಧದ ಕಛೇರಿಯ ಮಹಿಳಾ ಸಿಬ್ಬಂದಿ ಬಳಿ ಮಗನಿಗೆ ಕರೆ ಮಾಡಿಸಿ ನಡೆದ ಘಟನೆ ವಿವರಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ವೃದ್ಧೆಯ ಪುತ್ರ ಈ ಸಂಬಂಧ ಬಂಟ್ವಾಳ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ಧಾರೆ.

 

Scroll to Top