ಮಂಗಳೂರು: ತನ್ನ ಸ್ವಂತ ಜಮೀನನ್ನು ಕಾಯ್ದಿರಿಸಿ ಪ್ರಾಣಿ-ಪಕ್ಷಿಗಳಿಗೆ ಆಸರೆಯಾದ ಪುತ್ತೂರಿನ ಕೃಷಿಕ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ.11: ಭಾಷಣಗಳಲ್ಲಿ, ಪತ್ರಿಕೆಗಳಲ್ಲಿ ಪರಿಸರ ದಿನಾಚರಣೆಯಂದು ಪರಿಸರ ಉಳಿವಿನ ಜಾಗೃತಿ ಹೆಚ್ಚೆಚ್ಚು ಕೇಳಿ ಬರುತ್ತದೆ. ಆದರೆ ಈ ಭಾಷಣಗಳು, ಲೇಖನಗಳು ಕೇವಲ ಆ ದಿನಕ್ಕೆ ಮಾತ್ರ ಸೀಮಿತವಾಗುತ್ತವೆ. ಆ ಬಳಿಕ ಮತ್ತೆ ಪರಿಸರ ನಾಶ, ಪರಿಸರ ಮಾಲಿನ್ಯದ ಕೆಲಸದಲ್ಲಿ ಭಾಷಣ ಮಾಡಿದವರು, ಕೇಳಿದವರು, ಲೇಖನ ಬರೆದವರು, ಓದುವವರು ಆ ಬಗ್ಗೆ ಮರೆತೇಬಿಡುವುದು ಸಾಮಾನ್ಯ ವಿಚಾರವೂ ಆಗಿದೆ. ಆದರೆ ದಕ್ಷಿಣಕನ್ನಡ ಜಿಲ್ಲೆಯ ಕೃಷಿಕರೊಬ್ಬರು ಪರಿಸರದ ಉಳಿವಿಗಾಗಿ ತನ್ನ ಜಮೀನನ್ನು ಕಾಯ್ದಿರಿಸಿದ ಅಪ್ಪಟ ಪರಿಸರ ಪ್ರೇಮಿಯಾಗಿ ಹೆಸರುವಾಸಿಯಾಗಿದ್ದಾರೆ. ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಸಂಟ್ಯಾರಿನ ಕೃಷಿಕ ಸದಾಶಿವ ಮರಿಕೆ ತನ್ನದೇ ಸ್ವಂತ ಕಾಡು ಬೆಳೆಸಿದ ಕೃಷಿಕ. ಎಲ್ಲಾ ಕೃಷಿಕರಂತೆ ಅಡಿಕೆ, ತೆಂಗು, ಬಾಳೆ ಹೀಗೆ ವಿವಿಧ ಬೆಳೆಗಳನ್ನು ಬೆಳೆದು ಬದುಕು ಸಾಗಿಸುವುದು ಇವರ ಕಾಯಕ.ವಂಶಪಾರಂಪರ್ಯವಾಗಿ ಬಂದ ಜಮೀನಿನಲ್ಲಿ ಉತ್ತಮ ಕೃಷಿಯನ್ನು ಮಾಡಿಕೊಂಡು ತನ್ನ ಸಂಸಾರವನ್ನು ಸಲಹುತ್ತಿರುವ ಇವರು ತಮ್ಮ ಜೀವನಕ್ಕೆ ಎಷ್ಟು ಬೇಕೋ ಅಷ್ಟನ್ನೇ ಬೆಳೆಯುವವರು.

 

Also Read  ಗುತ್ತಿಗಾರು ಸರಕಾರಿ ಪ್ರೌಢ ಶಾಲೆಯಿಂದ ಕಂಪ್ಯೂಟರ್ ಬ್ಯಾಟರಿ ಕಳವು ➤ ದೂರು ದಾಖಲು

 

ಕೃಷಿಗೆ ಬೇಕಾದಷ್ಟು ಜಮೀನನ್ನು ಉಳಿಸಿಕೊಂಡು ಉಳಿದ ಜಮೀನಿನಲ್ಲಿ ಇವರು ಪರಿಸರಕ್ಕಾಗಿ ಮೀಸಲಿಟ್ಟವರು. ಸುಮಾರು ಎಕರೆ ಪ್ರದೇಶದಲ್ಲಿ ನೈಸರ್ಗಿಕವಾಗಿ ಬೆಳೆದ ಹಾಗೂ ಇತರ ಕಡೆಗಳಿಂದ ಸಂಗ್ರಹಿಸಿದ ವಿವಿಧ ಜಾತಿಯ ಮರಗಳನ್ನು ಈ ಪ್ರದೇಶದಲ್ಲಿ ಬೆಳೆಯುವ ಮೂಲಕ ಆದರ್ಶಪ್ರಾಯರಾಗಿದ್ದಾರೆ. ಒಂದಿಂಚು ಖಾಲಿ ಜಾಗ ಇದ್ದರೂ ಅದರಲ್ಲಿ ಕಟ್ಟಡವನ್ನೋ, ವಾಣಿಜ್ಯ ಬೆಳೆಗಳನ್ನೋ ಬೆಳೆಯುವ ಜನರಿರುವ ಜನರಿರುವ ಇಂದಿನ ಕಾಲದಲ್ಲಿ ಪರಿಸರಕ್ಕಾಗಿ, ಪ್ರಾಣಿ ಪಕ್ಷಿಗಳಿಗಾಗಿ ಎಕರೆಗಟ್ಟಲೆ ಭೂಮಿಯನ್ನು ಬಳುವಳಿ ನೀಡಿದ ಇವರು ನಿಜಕ್ಕೂ ಓರ್ವ ಪರಿಸರ ರಕ್ಷಕರಾಗಿ ಗುರುತಿಸಿಕೊಂಡಿದ್ದಾರೆ. ಪರಿಸರ ರಕ್ಷಣೆ ಮಾಡಬೇಕಾದ ಸರಕಾರವೇ ಇಂದು ಪರಿಸರ ಮಾಲಿನ್ಯ, ಪರಿಸರ ನಾಶ ಮಾಡುವಂತಹ ವ್ಯಕ್ತಿಗಳ ಜೊತೆ ಕೈ ಜೋಡಿಸಿಕೊಂಡಿದ್ದರೆ, ತನ್ನ ಸ್ವಂತ ಜಮೀನಿನಲ್ಲೇ ಅರಣ್ಯ ಬೆಳೆಯುವ ಮೂಲಕ ಈ ಕೃಷಿಕ ಎಲ್ಲರ ಪ್ರಶಂಶೆಗೂ ಪಾತ್ರರಾಗಿದ್ದಾರೆ. ವರ್ಷಗಳ ಹಿಂದೆ ಈ ರೀತಿಯ ಪರಿಸರವನ್ನು ಬೆಳೆಸಬೇಕು ಎನ್ನುವ ಯೋಜನೆಯನ್ನು ಮಾಡಿದ್ದ ಸದಾಶಿವರು ಇದೀಗ ಗಿಡ-ಮರಗಳ ಜೊತೆಗೆ ನೂರಾರು ಪ್ರಾಣಿ-ಪಕ್ಷಿಗಳಿಗೂ ಆಶ್ರಯದಾತರಾಗಿದ್ದಾರೆ. ಈ ರೀತಿಯ ಕಾಡಿನಿಂದಾಗಿ ತನ್ನ ಜಮೀನು ಮಾತ್ರವಲ್ಲದೆ, ಅಕ್ಕಪಕ್ಕದ ಜಮೀನಿನಲ್ಲೂ ಅಂತರ್ಜಲ ಮಟ್ಟವನ್ನು ಹೆಚ್ಚುವಂತೆಯೂ ಮಾಡಿದ್ದಾರೆ.

 

Also Read  ಕೊರೋನಾ ಸೋಂಕು ವಾಸದ ಪ್ರದೇಶ ಸೀಲ್ ಡೌನ್ ➤ ನೆರೆಮನೆಯವರ ಅವಮಾನಕ್ಕೆ ನೊಂದು ವ್ಯಕ್ತಿ ಆತ್ಮಹತ್ಯೆ... !!!

 

 

error: Content is protected !!
Scroll to Top