ಅಗ್ನಿ ಚಿತ್ರಕಲೆಯ ಮೂಲಕ ವಿಶ್ವ ದಾಖಲೆ ಮಾಡಿದ ಗ್ರಾಮೀಣ ಪ್ರತಿಭೆ ಪರೀಕ್ಷಿತ್‌‌ ನೆಲ್ಯಾಡಿ

(ನ್ಯೂಸ್ ಕಡಬ) newskadaba.com ನೆಲ್ಯಾಡಿ. ಸೆ.02 : ಬೆಂಕಿಯಲ್ಲಿ ಚಿತ್ರ ಬಿಡಿಸುವ ಕೌಶಲ್ಯದಿಂದಾಗಿ ಪರೀಕ್ಷಿತ್‌‌ ನೆಲ್ಯಾಡಿ ಅವರು ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಅಗ್ನಿ ಚಿತ್ರಕಲೆ (ಫೈರ್‌ ಆರ್ಟ್‌)ಯ ಮೂಲಕ ಪರೀಕ್ಷಿತ್‌ ರಚಿಸಿದ ಚಿತ್ರಕಲೆ ವಿಶೇಷ ವಿಶ್ವ ದಾಖಲೆಯ ಅಗ್ನಿ ಚಿತ್ರಕಲೆ ಮನ್ನಣೆ ಗಳಿಸಿದೆ. ಫೈರ್‌ ಆರ್ಟ್‌‌ನ ಅವರ ಕಲಾ ಪಾಂಡಿತ್ಯವನ್ನು ಗಣನೆಗೆ ತೆಗೆದುಕೊಂಡು ಆಗಸ್ಟ್‌ 19ರಂದು ವಿಶ್ವ ದಾಖಲೆ ಘೋಷಿಸಲಾಗಿತ್ತು.

 

ಸ್ವಾಮಿ ವಿವೇಕಾನಂದರ ಚಿತ್ರವನ್ನು ಲೈವ್‌ ಮೂಲಕ ಮಾಡಿ ಸೈ ಎನಿಸಿಕೊಂಡಿದ್ದ ಪರೀಕ್ಷಿತ್‌‌‌ಗೆ ಈ ಮನ್ನಣೆ ದೊರೆತಿದೆ. ಬೆಂಕಿ, ಸುಗಂಧ ದ್ರವ್ಯ, ಲಿಂಬೆ ರಸ ಹಾಗೂ ಬ್ರಶ್‌ ಮೂಲಕ ಬಿಳಿ ಹಾಳೆಯ ಮೇಲೆ 5 ನಿಮಿಷದಲ್ಲಿ ಚಿತ್ರ ಬಿಡಿಸಿದ್ದ ಪರೀಕ್ಷಿತ್‌ ಅವರಿಗೆ ಎಕ್ಸ್‌ಕ್ಲೂಸಿವ್‌‌‌ ವರ್ಲ್ಡ್‌ ರೆಕಾರ್ಡ್ ಸಂಸ್ಥೆ ಪ್ರಮಾಣ ಪತ್ರ ನೀಡಿದೆ. ಪ್ರಪಂಚದಾದ್ಯಂತ ಪ್ರತಿಭಾವಂತ ವ್ಯಕ್ತಿಗಳನ್ನು ಗುರುತಿಸುತ್ತಿರುವ ಎಕ್ಸ್‌ಕ್ಲೂಸಿವ್ ವರ್ಲ್ಡ್ ರೆಕಾರ್ಡ್‌ ಈ ಬಾರಿ ಆನ್‌ಲೈನ್‌ನಲ್ಲಿ ಅರ್ಜಿಗಳನ್ನು ಆಹ್ವಾನಿಸಿತ್ತು. ಪ್ರತಿಭಾವಂತ ವ್ಯಕ್ತಿಗಳು ತಮ್ಮ ಪ್ರತಿಭೆಯನ್ನು ಲೈವ್ ವಿಡಿಯೋ ಮೂಲಕ ಪ್ರಸ್ತುತಪಡಿಸಬೇಕಾಗಿತ್ತು. ಇದರಲ್ಲಿ ಪರೀಕ್ಷಿತ್‌ ಅವರೂ ಕೂಡಾ ಭಾಗವಹಿಸಿದ್ದು, ಅವರ ಕಲಾ ಪಾಂಡಿತ್ಯವನ್ನು ಪರಿಗಣಿಸಿ ಆಗಸ್ಟ್ 19 ರಂದು ಎಕ್ಸ್‌ಕ್ಲೂಸಿವ್ ವರ್ಲ್ಡ್ ರೆಕಾರ್ಡ್‌ ಘೋಷಿಸಿತ್ತು.‌

ಪರೀಕ್ಷಿತ್‌‌ ನೆಲ್ಯಾಡಿ ಅವರು, ನೆಲ್ಯಾಡಿಯ ಕೌಕ್ರಾಡಿ ಸುಧಾಮಣಿ ಹಾಗೂ ಶ್ರೀಧರ್ ದಂಪತಿಯ ಪುತ್ರ. ಪರೀಕ್ಷಿತ್‌ ಅವರ ಪ್ರತಿಭೆಗೆ ಈಗಾಗಲೇ ಹಲವಾರು ಗೌರವ-ಪ್ರಶಸ್ತಿಗಳು ಸಂದಿವೆ. ಆ.15ರ ಸ್ವಾತಂತ್ರ್ಯ ದಿನದಂದು ಅವರು ಪೇಪರ್ ಕಟ್ಟಿಂಗ್ ಆರ್ಟಿಸ್ಟ್ ಎಕ್ಸ್‌ಕ್ಲೂಸಿವ್ ಟ್ಯಾಲೆಂಟ್ ಅವಾರ್ಡ್ 2020 ಅನ್ನು ಪಡೆದಿದ್ದರು. 2019ರಲ್ಲಿ ಪರೀಕ್ಷಿತ್ ಅವರು ಪೇಪರ್ ಕಟ್ಟಿಂಗ್‌‌ ಆರ್ಟ್‌‌ನಲ್ಲಿ 3 ನಿಮಿಷ 12 ಸೆಕೆಂಡುಗಳಲ್ಲಿ ಸ್ಟೆನ್ಸಿಲ್‌ ಆರ್ಟ್‌‌‌ ಬಿಡಿಸುವ ಮೂಲಕ ಅವರು ವಿಶ್ವದ ವೇಗದ ಸ್ಟೆನ್ಸಿಲ್‌‌ ಆರ್ಟಿಸ್ಟ್‌ ಎಂದು ಗುರುತಿಸಿಕೊಂಡಿದ್ದರು.

 

 

 

Scroll to Top