(ನ್ಯೂಸ್ ಕಡಬ) newskadaba.com ಪುತ್ತೂರು, ಎ.22. ಅಕ್ರಮ ಕಳ್ಳಬಟ್ಟಿ ಸಾರಾಯಿ ಸಾಗಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಿರುವ ಸಂಪ್ಯ ಠಾಣಾ ಎಸ್.ಐ. ಉದಯ ರವಿ ನೇತೃತ್ವದ ಪೊಲೀಸರು ಆರೋಪಿಯನ್ನು ಬಂಧಿಸಿ ಸಾರಾಯಿ ಹಾಗೂ ಸಾಗಾಟಕ್ಕೆ ಬಳಸುತ್ತಿದ್ದ ಕಾರನ್ನು ವಶಪಡಿಸಿಕೊಂಡ ಘಟನೆ ಬುಧವಾರದಂದು ಠಾಣಾ ವ್ಯಾಪ್ತಿಯ ಅಮ್ಚಿನಡ್ಕ ಎಂಬಲ್ಲಿ ನಡೆದಿದೆ.

ಬಂಧಿತ ಆರೋಪಿಯನ್ನು ನೆಟ್ಟಣಿಗೆ ಮುಡ್ನೂರು ನಿವಾಸಿ ಕೇಶವ ಪಾಟಾಳಿ ಎಂದು ಗುರುತಿಸಲಾಗಿದೆ. ಕಳ್ಳಬಟ್ಟಿ ಸಾರಾಯಿ ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಅಮ್ಚಿನಡ್ಕ ಬಳಿ ಕಾರನ್ನು ತಡೆದು ತಪಾಸಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿಯನ್ನು ಬಂಧಿಸಿ ಕಳ್ಳಬಟ್ಟಿ ಸಾರಾಯಿ ಹಾಗೂ ಸಾಗಾಟಕ್ಕೆ ಬಳಸಿದ ಕಾರನ್ನು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡಿರುವ ಸೊತ್ತುಗಳ ಮೌಲ್ಯ ರೂ. 2,56,550 ಅಂದಾಜಿಸಲಾಗಿದೆ. ಕಾರ್ಯಾಚರಣೆಯಲ್ಲಿ ಉಪನಿರೀಕ್ಷಕ ಉದಯ ರವಿ, ಸಿಬ್ಬಂದಿಗಳಾದ ಧರ್ಮಪಾಲ್, ದೇವರಾಜ್, ಕರುಣಾಕರ, ಬಸವರಾಜ್ ಸಂಗೊಳ್ಳಿ ಹಾಗೂ ಜೀಪು ಚಾಲಕ ಹರೀಶ್ ಅವರು ಭಾಗವಹಿಸಿದ್ದರು.















