ದುಬೈ ಕನ್ನಡಿಗರ ಕುಟುಂಬದ ಕಾಳಜಿ ಜವಾಬ್ದಾರಿ ಸರಕಾರ ವಹಿಸಲಿದೆ: ಗೃಹ ಸಚಿವ ಬೊಮ್ಮಾಯಿ

ಬೆಂಗಳೂರು, ಎ18: ಕೊರೋನ ವೈರಸ್ ಹಿನ್ನೆಲೆಯಲ್ಲಿ ದುಬೈನಲ್ಲಿರುವ ಯಾವೊಬ್ಬ ಕನ್ನಡಿಗರು ಆತಂಕಗೊಳಗಾಗುವ ಆಗತ್ಯವಿಲ್ಲ. ರಾಜ್ಯ ಸರಕಾರ ನಿಮ್ಮ ಜೊತೆ ಇದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ದುಬೈ ಕನ್ನಡಿಗರಿಗೆ ಧೈರ್ಯ ತುಂಬಿದ್ದಾರೆ.

ದುಬೈನಲ್ಲಿ ಸಿಲುಕಿಕೊಂಡಿರುವ ಕನ್ನಡಿಗರ ಜೊತೆ ಇಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ವೀಡಿಯೊ ಕಾನ್ಫೆರೆನ್ಸ್ ಮೂಲಕ ಮಾತುಕತೆ ನಡೆಸಿ ಅಭಯ ನೀಡಿದ ಬಳಿಕ ಸುದ್ದಿಗಾರರಿಗೆ ಮಾಹಿತಿ ನೀಡಿದರು. ಎಲ್ಲಾ ಕನ್ನಡಿಗರನ್ನು ರಕ್ಷಣೆ ಮಾಡುತ್ತೇವೆ. ಧೈರ್ಯವಾಗಿರಿ, ಸುರಕ್ಷಿತವಾಗಿ, ಯಾರು ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ ಎಂದರು. ರಾಜ್ಯದಲ್ಲಿರುವ ದುಬೈ ಕನ್ನಡಿಗರ ಕುಟುಂಬದ ಬಗ್ಗೆ ಸರಕಾರ ಕಾಳಜಿವಹಿಸುತ್ತದೆ. ನಿಮ್ಮ ಕುಟುಂಬದವರ ಬಗ್ಗೆ ನೀವು ಚಿಂತಿಸಬೇಡಿ. ನಾವು ಅವರೊಂದಿಗೆ ಇದ್ದೇವೆ ಎಂದು ಅಶ್ವಾಸನೆ ನೀಡಿದರು. ದುಬೈನಲ್ಲಿರುವ ಕನ್ನಡಿಗ ಉದ್ಯಮಿಗಳು ಕನ್ನಡಿಗ ಕಾರ್ಮಿಕರು, ಕೆಲಸಗಾರರ ಬಗ್ಗೆ ಕಾಳಜಿ ವಹಿಸಿ. ಅವರಿಗೆ ಸಹಾಯ ಮಾಡಿ. ಸರಕಾರ ಯಾವತ್ತೂ ನಿಮ್ಮೊಂದಿಗೆ ಇರುತ್ತದೆ ಎಂದು ಹೇಳಿದರು.

Scroll to Top