ಕುಂದಾಪುರ: ಅಕ್ರಮ ಚಿನ್ನ ಸಾಗಾಟ; ಮೂವರ ಬಂಧನ

ಕುಂದಾಪುರ, ಡಿ.18: ರೈಲಿನಲ್ಲಿ  ಅಕ್ರಮ ಚಿನ್ನದ ಗಟ್ಟಿ ಸಾಗಾಟ ಮಾಡುತ್ತಿದ್ದ ಮೂವರನ್ನು ಬೈಂದೂರಿನಲ್ಲಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಭಟ್ಕಳ ಮೂಲದ ಇಸ್ಮಾಯಿಲ್‌, ಪಾಹೀಬ್‌ ಹಾಗೂ ಉಮೈರ್‌ ಎಂದು ಗುರುತಿಸಲಾಗಿದೆ. ಅವರಿಂದ 1.16 ಕೆಜಿ ಚಿನ್ನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ರೈಲಿನಲ್ಲಿ ಚಿನ್ನ ಸಾಗಾಟ ಮಾಡಲಾಗುತ್ತಿದೆ ಎಂದು ಪೊಲೀಸರಿಗೆ ದೊರೆತ ಖಚಿತ ಮಾಹಿತಿ ಪ್ರಕಾರ ಎಎಸ್ಪಿ ಹರಿರಾಮ್‌ ಶಂಕರ್‌ ಅವರು ಪಿಎಸ್‌ಐ ಹರೀಶ್‌ ಹಾಗೂ ಸಿಬ್ಬಂದಿ, ಬೈಂದೂರು ಸಿಪಿಐ ಸುರೇಶ್‌ ಹಾಗೂ ಸಿಬ್ಬಂದಿಗಳ ತಂಡ ರಚನೆ ಮಾಡಿ ಕಾರ್ಯಚರಣೆ ರೂಪಿಸಿದ್ದಾರೆ. ಉಡುಪಿ ಜಿಲ್ಲೆಯ ವಿವಿಧ ನಿಲ್ದಾಣದ ಮೂಲಕ ವಿಶೇಷ ಪೊಲೀಸ್‌ ತಂಡಗಳು ರೈಲನ್ನೇರಿ ತಪಾಸಣೆ ಮಾಡಿದ್ದು ಬೈಂದೂರಿನಲ್ಲಿ ಚಿನ್ನದ ಗಟ್ಟಿ ಸಾಗಾಟ ಮಾಡುತ್ತಿದ್ದ ತಂಡ ಪೊಲೀಸರ ಬಲೆಗೆ ಬಿದ್ದಿದೆ.

ಈ ಚಿನ್ನವನ್ನು ದುಬೈನಿಂದ ತರಲಾಗಿದ್ದು ಕ್ಯಾಲಿಕಟ್‌ನಿಂದ ಭಟ್ಕಳಕ್ಕೆ ಸಾಗಿಸುತ್ತಿದ್ದ ವೇಳೆ ತಂಡವನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರ ವಿಚಾರಣೆ ನಡೆಸಲಾಗುತ್ತಿದ್ದು ಈ ಕೃತ್ಯದಲ್ಲಿ ಇನ್ನೂ ಹೆಚ್ಚಿನ ಆರೋಪಿಗಳು ಶಾಮೀಲಾಗಿರುವ ಶಂಕೆ ಇದೆ. ಈ ಕುರಿತು ಬೈಂದೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Scroll to Top