ಆಯುಷ್ ನೂತನ ಯೋಜನೆಗಳಿಗೆ ಚಾಲನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.29.ಆಗಸ್ಟ್ 29 ರಂದು ಆಯುಷ್ ಸಚಿವರಾದ ಶ್ರೀಪಾದ ಯಸ್ಸೋ ನಾಯ್ಕ್ ರವರು ದಕ್ಷಿಣ ಕನ್ನಡ ಜಿಲ್ಲಾ ಆಯುಷ್ ಇಲಾಖೆಯ ನೂತನ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.


ಫಾದರ್ ಮುಲ್ಲರ್ಸ್ ಹೋಮಿಯೋಪಥಿ ಮೆಡಿಕಲ್ ಕಾಲೇಜು ಸಹಯೋಗದೊಂದಿಗೆ ಮಕ್ಕಳ ಚೈತನ್ಯಪೂರ್ಣ ಬೆಳವಣಿಗೆಗಾಗಿ ಸಮೃಧ್ಧಿ ಯೋಜನೆ ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಸಹಕಾರಿಯಾಗಬಲ್ಲ ದೈಹಿಕ, ಮಾನಸಿಕ ಚೈತನ್ಯ ನೀಡುವ ಔಷಧೋಪಚಾರ ಉಚಿತವಾಗಿ ನೀಡುವ ಯೋಜನೆ ಇದಾಗಿದೆ. ಅಲ್ಲದೇ ವಿಷೇಶವಾಗಿ ಅಪೌಷ್ಟಿಕಾಂಶದಿಂದ ಬೆಳವಣಿಗೆ ಕುಂಠಿತವಾಗಿರುವ ಮಕ್ಕಳನ್ನು ಗುರುತಿಸಿ ಅವರಿಗೆ ಅಗತ್ಯವುಳ್ಳ ಔಷಧ ಸಹಿತ ಚಿಕಿತ್ಸೆ ನೀಡಲಾಗುತ್ತದೆ.

ಈ ಸೇವೆಯು ವೆನ್ಲಾಕ್ ಆಯುಷ್ ಆಸ್ಪತ್ರೆ, ಫಾದರ್ ಮುಲ್ಲರ್ಸ್ ಹೋಮಿಯೋಪಥಿ ಮೆಡಿಕಲ್ ಕಾಲೇಜು ದೇರಳಕಟ್ಟೆ ಹಾಗೂ ಫಾದರ್ ಮುಲ್ಲರ್ಸ್‍ನ ಎಲ್ಲಾ ಆರೋಗ್ಯ ಘಟಕಗಳಲ್ಲಿ ಲಭ್ಯವಿರುವುದು. ಯೆನೆಪೋಯ ಪರಿಗಣಿತ ವಿಶ್ವವಿದ್ಯಾಲಯ ಹೋಮಿಯೋಪಥಿ ಮೆಡಿಕಲ್ ಕಾಲೇಜು ಇವರ ಸಹಯೋಗದೊಂದಿಗೆ ಮಕ್ಕಳಿಲ್ಲದ ದಂಪತಿಗಳಿಗೆ ಸೃಷ್ಟಿ – ಭರವಸೆಯ ಬೆಳಕು ಯೋಜನೆ ಮಕ್ಕಳಿಲ್ಲದ ದಂಪತಿಗಳಿಗೆ ಸಂಪೂರ್ಣ ತಪಾಸಣೆ ಮತ್ತು ಉಚಿತ ಚಿಕಿತ್ಸೆ ನೀಡುವುದಾಗಿದೆ.

ಈ ಯೋಜನೆಯು ಯೆನೆಪೋಯ ಪರಿಗಣಿತ ವಿಶ್ವವಿದ್ಯಾಲಯ ಹೋಮಿಯೋಪಥಿ ಮೆಡಿಕಲ್ ಕಾಲೇಜು ಇವರ ಸಹಯೋಗದೊಂದಿಗೆ ಅನುಷ್ಟಾನಗೊಳ್ಳಲಿರುವುದು. ಇದರನ್ವಯ ವೆನ್ಲಾಕ್ ಆಯುಷ್ ಆಸ್ಪತ್ರೆ ಹಾಗೂ ಯೆನೆಪೋಯ ಹೋಮಿಯೋಪಥಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸಾ ಸೇವೆಯು ಲಭ್ಯವಿದೆ. ಇದೇ ಸಂದರ್ಭದಲ್ಲಿ ಕೇಂದ್ರ ಆಯುಷ್ ಸಚಿವ ಶ್ರೀಪಾದ ಯಸ್ಸೋ ನಾಯ್ಕ್ ರವರು ಜಿಲ್ಲಾ ಆಯುಷ್ ಇಲಾಖೆಯ ವೆಬ್‍ಸೈಟ್ ಅನಾವರಣ ಮಾಡಲಿರುವರು. ಇದರಲ್ಲಿ ಆಯುಷ್ ಇಲಾಖೆಯ ಸಂಪೂರ್ಣ ಸೇವೆಗಳ ಮಾಹಿತಿಯು ಲಭ್ಯವಿರುತ್ತದೆ ಜಿಲ್ಲಾ ಆಯುಷ್ ಅಧಿಕಾರಿ ಕಛೇರಿ ಪ್ರಕಟಣೆ ತಿಳಿಸಿದೆ.

Scroll to Top