(ನ್ಯೂಸ್ ಕಡಬ) newskadaba.com ವಿಶೇಷ ಲೇಖನ: “ಇನ್ನೇನು ಕೆಲವೇ ದಿನಗಳಲ್ಲಿ SSLC ವಾರ್ಷಿಕ ಪರೀಕ್ಷೆ ನಡೆಯಲಿದೆ” ಎಂಬ ಮಾತು ಇಂದಿಗೆ ಇತ್ಯರ್ಥವಾಗಲಿದೆ. ಹೌದು, ಅವರಿವರ ಮಾತಿನಲ್ಲಿ ಕೇಳಿ ಕೇಳಿ ಹೇಗೆ ಪರೀಕ್ಷೆಯನ್ನು ಎದುರಿಸುವುದಪ್ಪಾ ಅನ್ನುವಷ್ಟು ಆತಂಕ. ಪರೀಕ್ಷೆಯಲ್ಲಿ ಫೇಲಾದರೆ ಜೀವನಕ್ಕೆ ಇತಿಶ್ರೀ ಹಾಡಬೇಕೆಂಬ ಮನಸ್ಥಿತಿ. ಮಿಗಿಲಾಗಿ ಮನೆಯವರಿಂದ ಸಿಗುವ ಒತ್ತಡ ಬೇರೆ.

ಹೌದು.. ಇದೆಲ್ಲವನ್ನು ನಿಟ್ಟುಸಿರಿನಿಂದ ಎದುರಿಸಲಿರುವ ವಿದ್ಯಾರ್ಥಿಯ ಭವಿಷ್ಯದ ನಿರೀಕ್ಷೆಯಾದರೂ ಫೇಲಾದರೆ ಬಾಳಿನ ಕೊನೆ ಎಂಬ ಯೋಚನೆ ಮೂರ್ಖತನ. ಪ್ರಪಂಚದಲ್ಲಿ ಹಲವಾರು ಮಜಲುಗಳಿವೆ. ಅದರಲ್ಲಿ ವಿದ್ಯೆಗೆ ಪ್ರಥಮ ಹಂತದ ಪ್ರಾಶಸ್ತ್ಯವಿದೆ. ಅದರಂತೆ ಪರಿಶ್ರಮ ಪಟ್ಟರೆ ಯಶ ಕಾಣಲು ಸಾಧ್ಯ. ಒಂದು ವೇಳೆ ಫೇಲಾದರೆ, ಮುಂದೆಯೂ ಪ್ರಯತ್ನಿಸಲು ಅವಕಾಶವಿದೆ. ಹಳ್ಳಿ ಗಲ್ಲಿಗಳಲ್ಲೂ ಶಾಲೆ, ಟ್ಯೂಷನ್ ಸೆಂಟರ್ ಗಳು ತಲೆ ಎತ್ತಿರುವ ಆಧುನಿಕ ಯುಗದಲ್ಲಿ ವಿದ್ಯೆ ಪಡೆಯಬೇಕೆಂಬ ಮನಸ್ಸಿದ್ದರೆ ಸುವಿಸ್ತಾರವಾದ ಮಾರ್ಗವಿದೆ.

ಪರೀಕ್ಷೆಯಿಂದ ಎಷ್ಟು ಪ್ರಯೋಜನವಿದೆ ಎಂಬುವುದಕ್ಕಿಂತ ಪರೀಕ್ಷೆ ಎಂಬುವುದು ಇಲ್ಲದಿದ್ದರೆ??ಎಂದು ಚಿಂತಿಸುವವರೇ ಹೆಚ್ಚು. ಆದರೆ ಓದಿನ ಫಲಿತಾಂಶ ಸಿಗಬೇಕಾದರೆ ಪರೀಕ್ಷೆ ಬಹಳ ಮುಖ್ಯ. ದಡ್ಡರೆಂದು ಹಣೆಬರಹ ಬರೆಯಲ್ಪಟ್ಟ ವಿದ್ಯಾರ್ಥಿಗಳಿಗೆ ಪಾಸ್ ಅಂಕ ಪಡೆಯುವ ತವಕ. ಅತ್ಯುತ್ತಮ ಕಲಿಕೆದಾರರಿಗೆ ಕಲಿತವುಗಳಲ್ಲಿ ಇನ್ನಿಲ್ಲದ ಆತಂಕ. ಪರೀಕ್ಷೆ ಕೊಠಡಿಗೆ ಪ್ರವೇಶ ಕೊಟ್ಟರೆ ಒಂದು ಪ್ರಶ್ನೆ ಕಷ್ಟವಿದೆಯೆಂದು ಚಿಂತಿಸಿ ಎಲ್ಲವುಗಳನ್ನು ಬಿಟ್ಟು ಬಿಡುವ ಪರಿ. ಇದೆಲ್ಲಾ ನಿಜಕ್ಕೂ ವಿದ್ಯಾರ್ಥಿಗಳಲ್ಲಿ ಸರ್ವೇ ಸಾಮಾನ್ಯವಾಗಿದೆ. ಕೆಲವೊಂದು ವಿದ್ಯಾರ್ಥಿಗಳಿಗೆ ತನ್ನ ಮೇಲೆಯೇ ನಂಬಿಕೆ ಇರುವುದಿಲ್ಲ. ನಾನು ಎಷ್ಟು ಓದಿದರೂ ಇಷ್ಟೇ ಅನ್ನೋ ಮನೋಭಾವ. ಈ ಒಂದು ಚಿಂತೆ ವಿದ್ಯಾರ್ಥಿಯನ್ನು ಸಂಪೂರ್ಣ ಹಾಳು ಮಾಡುತ್ತದೆ. ನನಗೆ ಓದಿ ಪಾಸಾಗಲು ಸಾಧ್ಯವಿಲ್ಲ ಎಂಬ ಯೋಚನೆ ಸದ್ಯ ದೂರವಿಟ್ಟು ಯಾಕೆ ಪಾಸಾಗಬಾರದು ಎಂಬ ಪ್ರಶ್ನೆಯನ್ನು ತನ್ನಲ್ಲೇ ಹಾಕಿಕೊಳ್ಳಬೇಕು. ಖಂಡಿತ ಫಲಿತಾಂಶ ದೊರಕುತ್ತದೆ.

ಕೆಲವೊಮ್ಮೆ ಉಪದ್ರವ ಕೊಡುವ ವಿದ್ಯಾರ್ಥಿಗಳನ್ನು ಶಿಕ್ಷಕರು ಬಹಿಷ್ಕರಿಸುವುದುಂಟು. ನೀನು ಪಾಸ್ ಆಗುವುದಿಲ್ಲ ಎಂದು ಭವಿಷ್ಯ ನುಡಿಯುವುದುಂಟು. ನೀನು ಎಷ್ಟಾದರೂ ಅಷ್ಟಕಷ್ಟೇ ಅನ್ನುವುದುಂಟು. ಇದರಿಂದ ಪ್ರೇರಿತಗೊಂಡ ವಿದ್ಯಾರ್ಥಿಯು ಮುಂದೆ ಇದೇ ದಡ್ಡತನದ ಚಟವನ್ನು ಮುಂದುವರಿಸಲು ಸಾಧ್ಯವಿದೆ. ಆದ್ದರಿಂದ ಈ ರೀತಿಯ ಸಲಹೆ ಕೊಡುವುದಕ್ಕಿಂತ ದಡ್ಡತನದ ರೇಖೆಯಲ್ಲಿರುವ ವಿದ್ಯಾರ್ಥಿಗೂ ಪರಿಶ್ರಮಪಟ್ಟರೆ ನೀನು ಏನಾದರೂ ಸಾಧಿಸುತ್ತೀಯಾ ಎಂದು ಹುರಿದುಂಬಿಸಿದರೆ ಅವನು ಪ್ರಯತ್ನಿಸಿಯಾನು. ಇದರಿಂದಾಗಿ ಉತ್ತಮ ಫಲಿತಾಂಶ ಸಿಗಬಹುದು. ಮಾಜಿ ರಾಷ್ಟ್ರಪತಿ ಡಾ| ಎ.ಪಿ.ಜೆ. ಕಲಾಂ ಅವರು ಹೇಳಿದರು “ನೀವು ಕನಸು ಕಾಣಿರಿ. ಒಂದಲ್ಲ ಒಂದು ದಿನ ಯಶ ಸಿಗಬಹುದು”. ಪೋಷಕರು, ಶಿಕ್ಷಕರು, ಮಾರ್ಗದರ್ಶಕರು ಕೊಡುವ ಸಲಹೆ ಕೆಲವರ ದಾರಿಯನ್ನೇ ಬದಲಾಯಿಸುತ್ತದೆ. ದಡ್ಡತನವನ್ನೇ ಇಲ್ಲವಾಗಿಸುತ್ತದೆ.

ಒಂದು ಶಾಲೆಯಲ್ಲಿ ವಿದ್ಯಾರ್ಥಿಯೋರ್ವನನ್ನು ಕರೆದು ಪೋಷಕರನ್ನು ಕರೆತರುವಂತೆ ಶಿಕ್ಷಕರು ನುಡಿದರು. ಮರುದಿನ ತನ್ನ ತಾಯಿಯೊಂದಿಗೆ ವಿದ್ಯಾರ್ಥಿಯು ಶಾಲೆಗೆ ಹೊರಟ. ಶಾಲಾ ಮುಖ್ಯಸ್ಥರು ತಾಯಿಯ ಕೈಯ್ಯಲ್ಲಿ ವಿದ್ಯಾರ್ಥಿಯ ಬಗ್ಗೆ ಬರೆದ ಚೀಟಿಯೊಂದನ್ನು ಕೊಟ್ಟರು. ಇದನ್ನು ಪಡೆದ ತಾಯಿಯು ಮಗನೊಂದಿಗೆ ಮನೆಗೆ ವಾಪಾಸ್ಸಾದರು. ಮಗ ಅಮ್ಮನಲ್ಲಿ ಆ ಚೀಟಿಯಲ್ಲಿ ಏನು ಬರೆದಿದೆಯೆಂದು ಪ್ರಶ್ನಿಸಿದ.
“ನೋಡು ಮಗನೇ ನಿನ್ನ ಶಿಕ್ಷಕರೆಲ್ಲಾ ನಿನ್ನನ್ನು ತುಂಬಾ ಹೊಗಳಿದ್ದಾರೆ. ನೀನು ಅತೀ ಬುದ್ದಿವಂತನಂತೆ, ನೀನು ಮೇಧಾವಿಯಂತೆ, ನಿನ್ನಂತವರಿಗೆ ಬೋಧಿಸಲು ಅಲ್ಲಿರುವ ಶಿಕ್ಷಕರಿಗೆ ಸಾಧ್ಯವಿಲ್ಲವಂತೆ. ಅದಕ್ಕಾಗಿ ನಿನ್ನನ್ನು ಶಾಲೆಯಿಂದ ಮುಕ್ತಗೊಳಿಸಲು ಹೇಳಿದರೆಂದು ತಾಯಿ ನುಡಿದಳು. ಇದನ್ನು ಕೇಳಿದ ಮಗನಿಗೆ ತುಂಬಾ ಖುಷಿ ಆಯ್ತು. ಹೌದು ನನ್ನ ಶಕ್ತಿ ಆ ರೀತಿಯದ್ದಾಗಿದ್ದರೆ ಖಂಡಿತವಾಗಿಯೂ ಏನಾದರೂ ಸಾಧಿಸಬೇಕೆಂಬ ಛಲ ಹುಟ್ಟುತ್ತದೆ. ಫಲಿತಾಂಶ “ಬಲ್ಬ್” ಕಂಡುಹಿಡಿಯುತ್ತಾನೆ. ಅದು ಸಂಪೂರ್ಣ ಯಶ ಕಾಣುತ್ತದೆ. ಈ ಸುದ್ದಿ ತಾಯಿಗೆ ಹೇಳಲು ಅಂದು ತಾಯಿ ಇರಲಿಲ್ಲ. ಆದರೆ ಅಂದು ಶಾಲೆಯಲ್ಲಿ ಟೀಚರ್ ಕೊಟ್ಚ ಪತ್ರ ಮಾತ್ರ ಮನೆಯೊಳಗಿತ್ತು. ಅದನ್ನು ಬಿಡಿಸಿ ಓದಲೆತ್ನಿಸಿದಾಗ ಅದರಲ್ಲಿ “ನಿಮ್ಮ ಮಗ ಶತ ಮುರ್ಖ, ಎಷ್ಟು ಬೋಧಿಸಿದರೂ ಅರ್ಥೈಸಲಾಗದವ, ಜನ್ಮದಲ್ಲಿ ಉದ್ದಾರವಾಗದ “ಈಡಿಯಟ್”. ಆದ್ದರಿಂದ ನಮ್ಮ ಶಾಲೆಯಿಂದ ಅವನನ್ನು ಹೊರಹಾಕುತ್ತಿದ್ದೇವೆ.” ಎಂದು ಬರೆದಿತ್ತು. ಅದನ್ನು ಓದಿ ಕೊಂಡಾಗ ಮಗನ ಕಣ್ಣಲ್ಲಿ ನೀರು ಹರಿಯಿತು.

ಅಂದು ಅಮ್ಮ ಕೊಟ್ಟ ಪೊಸಿಟೀವ್ ಸಲಹೆಯಿಂದ ಇಂದು ಈತ ಇಡೀ ವಿಶ್ವಕ್ಕೆ ಹೆಸರು ಪಡೆಯುವ ಸಾಧನೆ ಮಾಡಿದ. ಹೌದು ಆ ವಿದ್ಯಾರ್ಥಿಯೇ ಜಗತ್ತು ಇಂದಿಗೂ ಸ್ಮರಿಸುತ್ತಿರುವ ಬಲ್ಬ್ ಅನ್ನು ಕಂಡು ಹಿಡಿದ ವಿಜ್ಞಾನಿ ಥೋಮಸ್ ಆಲ್ವಾ ಎಡಿಸನ್. ತಮಗೆ ಸಿಗುವ ಪೊಸಿಟೀವ್ ಮಾತುಗಳು ತಮ್ಮನ್ನು ಬೆಳೆಸುತ್ತದೆ ಎಂಬುವುದಕ್ಕೆ ಇದು ಸ್ಪಷ್ಟ ನಿದರ್ಶನ. ಇಂದು SSLC ಪರೀಕ್ಷೆ ಬರೆಯಲಿರುವ ಎಲ್ಲಾ ವಿದ್ಯಾರ್ಥಿ ಮಿತ್ರರಿಗೆ ಶುಭವಾಗಲಿ.
✍ⓂⓂ ಮಹ್ ರೂಫ್ ಆತೂರು









