ಕಡಬ: ಚಾಲಕನಿಲ್ಲದೆ ಹಿಂದಕ್ಕೆ ಚಲಿಸಿದ ನಿಲ್ಲಿಸಿದ್ದ ಕಾರು ► ಯುವಕನ ಸಮಯ ಪ್ರಜ್ಞೆಯಿಂದ ತಪ್ಪಿದ ಅನಾಹುತ

(ನ್ಯೂಸ್ ಕಡಬ) newskadaba.com ಕಡಬ, ಅ.17. ನಿಲ್ಲಿಸಿದ್ದ ಕಾರೊಂದು ಹಠಾತ್ತನೆ ಹಿಂದಕ್ಕೆ ಚಲಿಸಿದ್ದು, ಯುವಕನೋರ್ವನ ಸಮಯ ಪ್ರಜ್ಞೆಯಿಂದ ಪ್ರಾಣಾಪಾಯ ತಪ್ಪಿದ ಘಟನೆ ಬುಧವಾರ ಸಂಜೆ ಕಡಬ ಪೇಟೆಯಲ್ಲಿ ನಡೆದಿದೆ.

ಇಲ್ಲಿನ ಪಂಚಾಯತ್ ಕಟ್ಟಡದ ಮುಂಭಾಗದಲ್ಲಿ ನಿಲ್ಲಿಸಿದ್ದ ಮಾರುತಿ ಆಲ್ಟೋ ಕಾರು ಹಠಾತ್ತನೆ ಹಿಂದಕ್ಕೆ ಚಲಿಸಲು‌ ಆರಂಭಿಸಿದೆ. ಚಾಲಕನಿಲ್ಲದೆ ಕಾರು ಹಿಂದಕ್ಕೆ ಬರುತ್ತಿರುವುದನ್ನು ಗಮನಿಸಿದ ಅಲ್ಲೇ ಪಕ್ಕದಲ್ಲಿ ನಿಂತಿದ್ದ ಕಡಬದ ಪೊರಂತು ನಿವಾಸಿ ಇಲ್ಯಾಸ್ ಜೆ.ಕೆ. ಕಾರನ್ನು ನಿಲ್ಲಿಸಲೆಂದು ಡೋರ್ ತೆರೆಯಲು ಯತ್ನಿಸಿದರಾದರೂ ಲಾಕ್ ಆಗಿದ್ದ ಹಿನ್ನೆಲೆಯಲ್ಲಿ ಬೊಬ್ಬೆ ಹೊಡೆದು ರಸ್ತೆ ಬದಿಯಲ್ಲಿ ನಿಂತಿದ್ದ ಸಾರ್ವಜನಿಕರನ್ನು ಪಕ್ಕಕ್ಕೆ ಸರಿಸಿದ್ದಾರೆ. ಇಲ್ಲದಿದ್ದಲ್ಲಿ ಕಾರು ಢಿಕ್ಕಿ ಹೊಡೆದು ಪ್ರಾಣಾಪಾಯಗಳಾಗುವ ಸಂಭವವಿತ್ತೆನ್ನಲಾಗಿದೆ. ಚಾಲಕನಿಲ್ಲದೆ ತೆರಳಿದ ಕಾರು ರಿಕ್ಷಾ ನಿಲ್ದಾಣದ ಬಳಿ ಚರಂಡಿಗೆ ಬಿದ್ದಿದ್ದು, ಬಳಿಕ ಸಾರ್ವಜನಿಕರು ಸೇರಿ ಕಾರನ್ನು ಮೇಲೆತ್ತಿದ್ದಾರೆ. ಯುವಕನ ಸಮಯ ಪ್ರಜ್ಞೆಗೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

error: Content is protected !!

Join the Group

Join WhatsApp Group