ಇಂದು ಕುಟ್ರುಪ್ಪಾಡಿ ಗ್ರಾಮ ಪಂಚಾಯತ್‍ಗೆ ಗಾಂಧಿ ಗ್ರಾಮ ಪುರಸ್ಕಾರ ಪ್ರದಾನ ► ಪುರಸ್ಕಾರಕ್ಕೆ ಆಯ್ಕೆಯಾದ ಕಡಬ ತಾಲೂಕಿನ ಏಕೈಕ ಗ್ರಾಮ ಪಂಚಾಯತ್

(ನ್ಯೂಸ್ ಕಡಬ) newskadaba.com ಕಡಬ, ಅ.02. ನೂತನ ಕಡಬ ತಾಲೂಕಿನ ವ್ಯಾಪ್ತಿಗೆ ಬರುವ ಕುಟ್ರುಪ್ಪಾಡಿ ಗ್ರಾಮ ಪಂಚಾಯತ್ 2017-18ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿದೆ. ಗ್ರಾಮೀಣ ಅಭಿವದ್ಧಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನದ ಒಟ್ಟು ಸಾಧನೆಯನ್ನು ಪರಿಗಣಿಸಿ ಪಂಚಾಯತ್ ರಾಜ್ ಮತ್ತು ಗ್ರಾಮೀಣ ಅಭಿವದ್ಧಿ ಇಲಾಖೆಯಿಂದ ನೀಡಲಾಗುವ ಈ ಪುರಸ್ಕಾರಕ್ಕೆ ಕುಟ್ರುಪ್ಪಾಡಿ ಗ್ರಾಮ ಪಂಚಾಯತ್ ಆಯ್ಕೆಗೊಂಡಿದೆ. ಇಂದು ಬೆಂಗಳೂರಿನಲ್ಲಿ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪುರಸ್ಕಾರ ಪ್ರದಾನವಾಗಲಿದೆ. ಪುರಸ್ಕಾರವು 5ಲಕ್ಷ ರೂ. ನಗದು ಬಹುಮಾನವನ್ನು ಒಳಗೊಂಡಿದೆ. ರಾಜ್ಯದ ಪ್ರತೀ ತಾಲೂಕಿನ ಒಂದು ಪಂಚಾಯತ್‍ಗೆ ಪ್ರತೀ ವರ್ಷ ಗಾಂಧಿ ಜಯಂತಿ ಸಂದರ್ಭ ಈ ಪುರಸ್ಕಾರ ನೀಡಲಾಗುತ್ತಿದೆ.

2017-18ನೇ ಸಾಲಿನಲ್ಲಿ ಪಂಚಾಯತ್‍ನಲ್ಲಿ ನಡೆದ ಗ್ರಾಮಸಭೆ, ವಾರ್ಡ್ ಸಭೆ, ಸಾಮಾನ್ಯ ಸಭೆಯ ನಿರ್ಣಯಗಳ ಜಾರಿ, ಅನುದಾನಗಳ ಸಮರ್ಪಕ ಬಳಕೆ, ವೈಯಕ್ತಿಕ ಶೌಚಾಲಯಗಳ ನಿರ್ಮಾಣ, ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಒದಗಿಸಲಾದ ಪ್ರತಿಶತ ಉದ್ಯೋಗಗಳು, ಮಾನವದಿಗಳು, ಆಸ್ತಿ ನಿರ್ಮಾಣ ಮತ್ತು ಅನುದಾನ ವಿನಿಯೋಗ, ಉದ್ಯೋಗ ಖಾತರಿ ನಿಯಮಗಳಿಗನುಗುಣವಾಗಿ ನೈಸರ್ಗಿಕ ಸಂಪನ್ಮೂಲ ನಿರ್ವಹಣೆ, ವಸತಿ ಯೋಜನೆಗಳ ಅನುಷ್ಠಾನ, ನೈರ್ಮಲೀಕರಣ, 14ನೇ ಹಣಕಾಸು ಆಯೋಗ ಅನುದಾನ ವಿನಿಯೋಗ, ಶಾಸನಬದ್ಧ ಅನುದಾನ ವಿನಿಯೋಗ, ಮಾಸಿಕ ಬ್ಯಾಂಕ್ ಲೆಕ್ಕ, ಮರು ಹೊಂದಾಣಿಕೆ ವರದಿಯನ್ನು ಪಂಚತಂತ್ರ ತಂತ್ರಾಂಶದಲ್ಲಿ ಅಳವಡಿಸಿರುವುದು, ಸ್ವಂತ ಸಂಪನ್ಮೂಲ ಸಂಗ್ರಹಣೆ, ಪಂಚಾಯತ್‍ನ ವಿವಿಧ ಸ್ಥಾಯಿ ಸಮಿತಿಗಳನ್ನು ಹಾಗೂ ಉಪ ಸಮಿತಿಗಳನ್ನು ರಚಿಸಿರುವುದು, ಅದರ ನಡಾವಳಿಗಳಿಗಳನ್ನು ಪಂಚತಂತ್ರ ತಂತ್ರಾಂಶದಲ್ಲಿ ಅಳವಡಿಸಿರುವುದು, ಗ್ರಾಮಸಭೆಗಳ ವಿಡಿಯೋ ಚಿತ್ರೀಕರಣ ಮತ್ತು ನಡಾವಳಿಗಳನ್ನು ಪಂಚತಂತ್ರ ತಂತ್ರಾಂಶದಲ್ಲಿ ಅಳವಡಿಸಿರುವುದು, ಜನರಿಗೆ ನೀಡಿರುವ ಸೇವೆಗಳನ್ನು ಪರಿಗಣಿಸಿ ಗ್ರಾಮ ಪಂಚಾಯತ್‍ಗಳನ್ನು ಗಾಂಧಿ ಗ್ರಾಮ ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತಿದೆ.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ವಿಜೇತ ಪಂಚಾಯತ್‍ ಅಧ್ಯಕ್ಷರು ಹಾಗೂ ಅಭಿವೃದ್ಧಿ ಅಧಿಕಾರಿ ಹಾಜರಿದ್ದು ಪ್ರಶಸ್ತಿ ಸ್ವೀಕರಿಸುವಂತೆ ಗ್ರಾಮೀಣಾಭಿವದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸೂಚನೆ ನೀಡಿದೆ.

ಗಾಂಧಿ ಗ್ರಾಮ ಪುರಸ್ಕಾರಕ್ಕೆ ತಾಲೂಕಿನಿಂದ ಈ ಬಾರಿ ಕುಟ್ರುಪ್ಪಾಡಿ ಗ್ರಾಮ ಪಂಚಾಯತ್ ಆಯ್ಕೆಗೊಂಡಿರುವುದು ಗ್ರಾಮದ ಜನತೆ ಹಾಗೂ ಪಂಚಾಯಿತಿಗೆ ಹೆಮ್ಮೆಯ ವಿಷಯವಾಗಿದೆ. ಪಂಚಾಯತ್‍ನಲ್ಲಿ ಆಡಳಿತಾತ್ಮಕವಾಗಿ ಉತ್ತಮ ಕೆಲಸಗಳು ನಡೆದು ಜನರ ಸಮಸ್ಯೆಗಳಿಗೆ ಶೀಘ್ರ ಸ್ಪಂದನೆ ದೊರೆತಿದೆ. ಪಂಚಾಯತ್‍ನ ಅಧಿಕಾರಿ ವರ್ಗ ಹಾಗೂ ಆಡಳಿತ ಮಂಡಳಿಯ ಹೊಂದಾಣಿಕೆ, ಜನರ ಸಹಕಾರದಿಂದಾಗಿ ಉತ್ತಮ ಕೆಲಸಗಳು ನಡೆದು ಪ್ರಶಸ್ತಿ ದೊರೆತಿದೆ.
-ಜಾನಕಿ ಸುಂದರ ಗೌಡ, ಅಧ್ಯಕ್ಷರು, ಕುಟ್ರುಪ್ಪಾಡಿ ಗ್ರಾ.ಪಂ.

ಅನುದಾನಗಳನ್ನು ಸರಕಾರದ ಮಾರ್ಗಸೂಚಿಯಂತೆ ಸಮರ್ಪಕ ರೀತಿಯಲ್ಲಿ ಬಳಸಿಕೊಂಡು ಗ್ರಾಮದ ಅಭಿವೃದ್ಧಿ ಮಾಡಲಾಗಿದೆ. ಮುಖ್ಯವಾಗಿ ಪಂಚಾಯತ್ ಅಧ್ಯಕ್ಷರು, ಸದಸ್ಯರು, ಸಿಬಂದಿಗಳು ಹಾಗೂ ಗ್ರಾಮಸ್ಥರ ಸಂಘಟಿತ ಮುತುವರ್ಜಿಯಿಂದಾಗಿ ಅಭಿವೃದ್ಧಿ ಕಾರ್ಯಗಳನ್ನು ನಡೆಸಿರುವುದು ಪ್ರಶಸ್ತಿ ಲಭಿಸಲು ಪೂರಕವಾಗಿತ್ತು. ಪ್ರಶಸ್ತಿಯು ಇನ್ನಷ್ಟು ಉತ್ತಮ ಕೆಲಸ ಮಾಡಲು ಸೂರ್ತಿಯಾಗಿದೆ.

-ವಿಲ್ಫ್ರೆಡ್ ಲಾರೆನ್ಸ್ ರೋಡ್ರಿಗಸ್, ಪಿಡಿಒ, ಕುಟ್ರುಪ್ಪಾಡಿ ಗ್ರಾ.ಪಂ.

error: Content is protected !!

Join the Group

Join WhatsApp Group