ಕುದ್ಮಾರಿನಲ್ಲಿ ಬಾರ್ ತೆರೆಯುವ ವದಂತಿ ► ಬಾರ್ ವಿರೋಧಿ ಹೋರಾಟ ಸಮಿತಿ ಅಸ್ತಿತ್ವಕ್ಕೆ

(ನ್ಯೂಸ್ ಕಡಬ) newskadaba.com ಕಡಬ, ಜು.30. ಕುದ್ಮಾರು ಗ್ರಾಮದ ಸ್ಕಂದ ಗಣೇಶ ನಗರ ಎಂಬಲ್ಲಿ ಬಾರ್ ತೆರೆಯುವ ಕುರಿತು ಹಬ್ಬುತ್ತಿರುವ ವದಂತಿ ಹಿನ್ನೆಲೆಯಲ್ಲಿ ಭಾನುವಾರ ಶಾಂತಿಮೊಗರು ದೇವಸ್ಥಾನದ ಸಭಾಭವನದಲ್ಲಿ ಗ್ರಾಮಸ್ಥರ ಸಭೆ ನಡೆಯಿತು. ಸಭೆಯಲ್ಲಿ ಭಾಗವಹಿಸಿದ ಸಾರ್ವಜನಿಕರು ಕುದ್ಮಾರು ಗ್ರಾಮ ಅತ್ಯಂತ ಶಾಂತಿಯುವ ಊರಗಿದ್ದು, ಪ್ರಸಿದ್ಧ ದೇವಸ್ಥಾನ, ಮಸೀದಿ, ಶಾಲೆಗಳು ಇಲ್ಲಿವೆ. ಹೀಗಾಗಿ ಇಲ್ಲಿ ಬಾರ್ ತೆರೆಯಬಾರದು. ಬಾರ್ ಅಥವಾ ವೈನ್‍ಶಾಪ್ ತೆರೆದಲ್ಲಿ ಇಲ್ಲಿನ ಸುಂದರ ವಾತಾವರಣ ಕೆಡಲಿರುವ ಹಿನ್ನೆಲೆಯಲ್ಲಿ ನಾವೆಲ್ಲ ಬಾರ್ ತೆರೆಯುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸುತ್ತೇವೆ. ಈ ನಿಟ್ಟಿನಲ್ಲಿ ಯಾವುದೇ ರೀತಿಯ ಹೋರಾಟಕ್ಕೂ ನಾವು ಸಿದ್ಧ ಎಂದು ಸಭೆಯಲ್ಲಿ ಅಭಿಪ್ರಾಯ ಕೇಳಿಬಂತು.

ವಿಷಯ ಪ್ರಸ್ತಾವಿಸಿ ಮಾತನಾಡಿದ, ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಅನುವಂಶೀಯ ಮೊಕ್ತೇಸರ ರಾಜ್‍ದೀಪಕ್ ಜೈನ್ ಕುದ್ಮಾರುಗುತ್ತು, ಸ್ಕಂದ ಗಣೇಶ ನಗರ ಎಂಬಲ್ಲಿ ಬಾರ್ ತೆರೆಯುವ ನಿಟ್ಟಿನಲ್ಲಿ ಪ್ರಕ್ರಿಯೆಗಳು ನಡೆಯುತ್ತಿವೆ ಎಂಬ ಗುಮಾನಿಯಿದೆ. ಈ ನಿಟ್ಟಿನಲ್ಲಿ ಇಂದು ಗ್ರಾಮಸ್ಥರ, ಇಲ್ಲಿನ ಸಂಘ ಸಂಸ್ಥೆಗಳ ಸಭೆ ಕರೆಯಲಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಸಭೆ ಕೈಗೊಳ್ಳುವ ತೀರ್ಮಾನದಂತೆ ಮುಂದಿನ ದಿನಗಳಲ್ಲಿ ಮುಂದುವರಿಯಲಾಗುವುದು ಎಂದರು. ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ತಾಲೂಕು ಅಧ್ಯಕ್ಷ ಪದ್ಮನಾಭ ಶೆಟ್ಟಿ ಮಾತನಾಡಿ, ದುಶ್ಚಟಮುಕ್ತ ಸಮಾಜ ಕಟ್ಟುವ ನಿಟ್ಟಿನಲ್ಲಿ ಜನಜಾಗೃತಿ ವೇದಿಕೆ ಕಳೆದ ಹಲವಾರು ವರ್ಷಗಳಿಂದ ಶ್ರಮಿಸುತ್ತಿದೆ. ರಾಜಕೀಯ ಪಕ್ಷ ಅಥವಾ ರಾಜಕೀಯ ವ್ಯಕ್ತಿಗಳಿಗೆ ಸಮಾಜವನ್ನು ಮದ್ಯಮುಕ್ತವಾಗಿಸಬೇಕೆನ್ನುವ ಇಚ್ಛಾಶಕ್ತಿಯಿಲ್ಲ. ಕುದ್ಮಾರಿನಲ್ಲಿ ಬಾರ್ ತೆರೆಯುವ ವದಂತಿಯಿದ್ದು, ಬಾರ್ ತೆರೆಯಲು ಗ್ರಾಮಸ್ಥರ ವಿರೋಧವಿದ್ದಲ್ಲಿ ನಿಮ್ಮ ಹೋರಾಟಕ್ಕೆ ಜನಜಾಗೃತಿ ವೇದಿಕೆಯ ಸಂಪೂರ್ಣ ಸಹಕಾರವಿದೆ. ಈ ನಿಟ್ಟಿನಲ್ಲಿ ಯಾವುದೇ ರೀತಿಯ ಹೋರಾಟ ನಡೆಸಲು ಸಿದ್ಧರಾಗಿದ್ದೇವೆ ಎಂದರು.

ಶ್ರೀ ದರ್ಮಸ್ಥಳ ಗ್ರಾಮಬಿವೃದ್ದಿ ಯೋಜನೆಯ ತಾಲೂಕು ಯೋಜನಾಧಿಕಾರಿ ಜನಾರ್ದನ ಎಸ್. ಮಾತನಾಡಿ ಬಾರ್ ತೆರೆದಲ್ಲಿ ಈ ಭಾಗದ ಮಕ್ಕಳು, ಯುವಕರು ಕುಡಿತದ ಚಟಕ್ಕೆ ಬಲಿಯಾಗಲಿದ್ದಾರೆ. ಬಾರ್ ತೆರೆಯುವುದನ್ನು ವಿರೋಧಿಸಿ ಗ್ರಾಮಸ್ಥರು, ಸಂಘ-ಸಂಸ್ಥೆಗಳು ಪ್ರತಿಭಟನೆಗಿಳಿದ್ದಲ್ಲಿ ಅಹಿಂಸಾತ್ಮಕ ಮತ್ತು ಶಾಂತಿಯುತ ಹೋರಾಟಕ್ಕೆ ಗ್ರಾಮಾಭಿವೃದ್ಧಿ ಮತ್ತು ಜನಜಾಗೃತಿ ವೇದಿಕೆ ಬೆಂಬಲ ನೀಡಲಿದೆ ಎಂದರು. ಬಾರ್ ತೆರೆಯದಂತೆ ಸಂಬಂಧಪಟ್ಟವರಿಗೆ, ಇಲಾಖೆಗೆ ಮನವಿ ಮಾಡಿಕೊಳ್ಳೋಣ. ಒಂದು ವೇಳೆ ನಮ್ಮ ಮನವಿಗೆ ಸ್ಪಂದನೆ ಸಿಗದಿದ್ದಲ್ಲಿ ಉಗ್ರರೂಪದ ಹೋರಾಟಕ್ಕಿಳಿಯೋಣವೆಂದು ಜಗದೀಶ್ ಇಡ್ಯಾಡಿ, ವೆಂಕಪ್ಪ ಗೌಡ ಅಡೀಲು, ಲೋಕನಾಥ್ ಬರೆಪ್ಪಾಡಿ , ಕುದ್ಮಾರು ಒಕ್ಕೂಟದ ಮಾಜಿ ಅಧ್ಯಕ್ಷ ಜನಾರ್ದನ ಗೌಡ ಕೂರ, ಬೆಳಂದೂರು ಜನಜಾಗೃತಿ ವೇದಿಕೆ ಅಧ್ಯಕ್ಷ ವೇಣುಗೋಪಾಲ್ ಕಳುವಾಜೆ ಮೊದಲಾದವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ವಿರೋದಿಸಿದರು.

Also Read  ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ ಸೆರೆ

ಸವಣೂರು ವಲಯ ಒಕ್ಕೂಟದ ಅಧ್ಯಕ್ಷ ಕುಸುಮಾಧರ ಚಾರ್ವಾಕ, ಸುಬ್ರಹ್ಮಣ್ಯೇಶ್ವರ ಭಜನಾ ಮಂಡಳಿಯ ಗೌರವಾಧ್ಯಕ್ಷ ಶೂರಪ್ಪ ಗೌಡ ಪಟ್ಟೆತ್ತಾನ, ಅಧ್ಯಕ್ಷ ಭರತ್ ನಡುಮನೆ, ಬೆಳಂದೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಹರೀಶ್ ಕೆರೆನಾರು, ಅರ್ಚಕ ರಮಾನಂದ ಭಟ್, ಅಂಗನವಾಡಿ ಕಾರ್ಯಕರ್ತೆ ವಸಂತಿ, ತಿರಂಗ ವಾರಿಯರ್ಸ್ ಸಂಚಾಲಕ ಲೋಕೇಶ್ ಬಿ.ಎನ್. ಕುದ್ಮಾರು ಶಾಲಾ ಎಸ್‍ಡಿಎಂಸಿ ಅಧ್ಯಕ್ಷೆ ಪುಷ್ಪಾಲತಾ ಪಿ. ಗೌಡ, ಕುದ್ಮಾರು ಒಕ್ಕೂಟದ ಅಧ್ಯಕ್ಷೆ ಭವಾನಿ ಉಳವ, ಸ್ಕಂದಶ್ರೀ ಯುವಕ ಮಂಡಲದ ಅಧ್ಯಕ್ಷ ದೇವರಾಜ್ ನೂಜಿ, ಕುಸುಮಾವತಿ ಕಂಪ, ಕುದ್ಮಾರು ವರಮಹಾಲಕ್ಷ್ಮೀ ಸಮಿತಿಯ ಜ್ಞಾನೇಶ್ವರಿ ಚಂದ್ರಶೇಖರ್ ಬರೆಪ್ಪಾಡಿ, ಲಕ್ಷ್ಮೀ ಹೊಸೊಕ್ಲು, ಸ್ತ್ರೀಶಕ್ತಿ ಸಂಘಗಳ ಮೊದಲಾದವರು ಉಪಸ್ಥಿತರಿದ್ದರು. ಗ್ರಾಮಾಭಿವೃದ್ಧಿ ಯೋಜನೆಯ ಸವಣೂರು ವಲಯ ಮೇಲ್ವಿಚಾರಕಿ ಅಶ್ವಿನಿ ಸ್ವಾಗತಿಸಿ, ನಿರೂಪಿಸಿದರು. ಸೇವಾಪ್ರತಿನಿಧಿ ಹರ್ಷ ಕುಮಾರ್ ವಂದಿಸಿದರು.

Also Read  ಸುಬ್ರಹ್ಮಣ್ಯ: ಜೀಪು - ಬಸ್ ಢಿಕ್ಕಿ ► ಓರ್ವ ಮೃತ್ಯು - ಮೂವರು ಗಂಭೀರ

ಮುಂದಿನ ಹೋರಾಟ ರೂಪಿಸುವ ನಿಟ್ಟಿನಲ್ಲಿ ಹೋರಾಟ ಸಮಿತಿಯನ್ನು ಇದೇ ಸಂದರ್ಭದಲ್ಲಿ ರಚಿಸಲಾಯಿತು. ಸಮಿತಿ ಅಧ್ಯಕ್ಷರನ್ನಾಗಿ ರಾಜ್‍ ದೀಪಕ್ ಜೈನ್, ಕಾರ್ಯದರ್ಶಿಯಾಗಿ ಲೋಕಾನಾಥ್ ಬರೆಪ್ಪಾಡಿಯವರನ್ನು ಆಯ್ಕೆ ಮಾಡಲಾಯಿತು. ಉಳಿದಂತೆ ಸದಸ್ಯರನ್ನಾಗಿ ಸಂಘ-ಸಂಸ್ಥೆಗಳ ಪದಾಧಿಕಾರಗಳನ್ನು ಸೇರಿದಂತೆ ಅನೇಕರನ್ನು ನೇಮಕ ಮಾಡಲಾಯಿತು.

error: Content is protected !!
Scroll to Top