ಕುಕ್ಕೆ ಸುಬ್ರಹ್ಮಣ್ಯ: ನಿರಂತರ ಸುರಿಯುತ್ತಿರುವ ಧಾರಾಕಾರ ಮಳೆಯಲ್ಲೂ ಭಕ್ತಸಾಗರ



(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಆ. 02. ದಕ್ಷಿಣ ಭಾರತದ ಹೆಸರಾಂತ ಹಾಗೂ ಪವಿತ್ರ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕಳೆದ ಮೂರು ದಿನಗಳಿಂದ ನಿರಂತರವಾಗಿ ಧಾರಾಕಾರ ಮಳೆ ಸುರಿಯುತ್ತಿದ್ದರೂ ಇಂದು ರವಿವಾರ ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಅಧಿಕ ಸಂಖ್ಯೆಯ ಭಕ್ತರು ಆಗಮಿಸಿ ಶ್ರೀ ದೇವರಿಗೆ ಸೇವೆ ಸಲ್ಲಿಸಿದರು.







ಭಕ್ತರಿಗೆ ಕುಮಾರಧಾರ ನದಿಯಲ್ಲಿ ತೀರ್ಥ ಸ್ನಾನಕ್ಕಾಗಿ ಸ್ನಾನ ಘಟ್ಟದ ಪಕ್ಕದಲ್ಲಿ ಡ್ರಮ್ ಗಳನ್ನು ಇರಿಸಿ ಅದರಲ್ಲಿ ನೀರಿನ ವ್ಯವಸ್ಥೆ ಹಾಗೂ ಶವರ್ ವ್ಯವಸ್ಥೆಗಳನ್ನ ಶ್ರೀ ದೇವಳದ ವತಿಯಿಂದ ಮಾಡಲಾಗಿತ್ತು. ಇಂದು ಮುಂಜಾನೆಯಿಂದ ಜೋರಾದ ಮಳೆ ಸುರಿಯುತ್ತಿದ್ದರೂ ರಥ ಬೀದಿಯಲ್ಲಿ ಮಳೆಯಲ್ಲಿ ನೆನೆದು ಭಕ್ತರು ಶ್ರೀ ದೇವಳದ ಅಂಗಣವನ್ನ ಪ್ರವೇಶಿಸಿದ್ದರು. ಹೊರಾಂಗಣದಲ್ಲಿ ಭಕ್ತರ ಸರತಿಯ ಸಾಲು ತುಂಬಿ ನಿಧಾನವಾಗಿ ಮುಂದಕ್ಕೆ ಚಲಿಸಿ ಶ್ರೀ ದೇವರ ದರ್ಶನ ಹಾಗೂ ತೀರ್ಥ ಪ್ರಸಾದ ಸ್ವೀಕರಿಸಿದರು. ಇತ್ತ ಮಧ್ಯಾಹ್ನದ ಭೋಜನ ವ್ಯವಸ್ಥೆಯನ್ನು ಶ್ರೀ ದೇವಳದ ಷಣ್ಮುಖ ಪ್ರಸಾದ ಭೋಜನ ಶಾಲೆ ಹಾಗೂ ಆದಿ ಸುಬ್ರಹ್ಮಣ್ಯದ ಭೋಜನ ಶಾಲೆಯಲ್ಲಿ ವ್ಯವಸ್ಥೆಗೊಳಿಸಲಾಗಿತ್ತು.






ಶ್ರೀ ದೇವಳದ ಸುತ್ತಮುತ್ತಲಿನ ಪಾರ್ಕಿಂಗ್ ಪ್ರದೇಶಗಳೆಲ್ಲವೂ ವಾಹನಗಳಿಂದ ತುಂಬಿದ್ದವು. ಆದಿ ಸುಬ್ರಹ್ಮಣ್ಯದಲ್ಲಿ ಕೂಡಾ ಪಾರ್ಕಿಂಗ್ ಪ್ರದೇಶಗಳಲ್ಲದೆ ಮಾರ್ಗದ ಇಕ್ಕೆಲಗಳಲ್ಲಿ ವಾಹನಗಳನ್ನ ನಿಲ್ಲಿಸಲಾಗಿತ್ತು. ಶ್ರೀ ದೇವಳದ ಸೆಕ್ಯೂರಿಟಿ, ಸಿಬ್ಬಂದಿ ವರ್ಗದವರು, ಅಧಿಕಾರಿಗಳು ಭಕ್ತರ ಸುಗಮ ದೇವರ ದರ್ಶನ ತೀರ್ಥ ಪ್ರಸಾದ ಹಾಗೂ ಭೋಜನ ವ್ಯವಸ್ಥೆಗಳನ್ನು ಏರ್ಪಾಡು ಮಾಡಿದ್ದರು.

error: Content is protected !!
Scroll to Top