(ನ್ಯೂಸ್ ಕಡಬ) newskadaba.com, ಜು.08 : “ಬ್ರಿಡ್ಜ್ ಮ್ಯಾನ್” ಎಂದೇ ಖ್ಯಾತಿ ಪಡೆದ, ಪದ್ಮಶ್ರೀ ಪುರಸ್ಕೃತ ಡಾ. ಗಿರೀಶ್ ಭಾರದ್ವಾಜ್ ಅವರ ಅಂತ್ಯಸಂಸ್ಕಾರ ಅರಂಬೂರಿನಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿತು. ಜಿಲ್ಲಾಡಳಿತದ ವತಿಯಿಂದ ಗೌರವ ನಮನ ಸಲ್ಲಿಸಲಾಯಿತು. ಸಾವಿರಾರು ಅಭಿಮಾನಿಗಳು, ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಗಣ್ಯರು ಅಂತಿಮ ದರ್ಶನ ಪಡೆದರು.
ಅಂತ್ಯಕ್ರಿಯೆಯಲ್ಲಿ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ., ಎಸ್ಪಿ ಡಾ. ಆರ್. ಅರುಣ್ ಕುಮಾರ್, ಶಾಸಕಿ ಭಾಗೀರಥಿ ಮುರುಳ್ಯ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿ ಶ್ರದ್ಧಾಂಜಲಿ ಸಲ್ಲಿಸಿದರು.
ಗ್ರಾಮೀಣ ಪ್ರದೇಶಗಳಲ್ಲಿ ಕಡಿಮೆ ವೆಚ್ಚದಲ್ಲಿ ನೂರಾರು ತೂಗುಸೇತುವೆಗಳನ್ನು ನಿರ್ಮಿಸಿ ಜನಜೀವನಕ್ಕೆ ಹೊಸ ಸಂಪರ್ಕ ಕಲ್ಪಿಸಿದ್ದ ಡಾ. ಗಿರೀಶ್ ಭಾರದ್ವಾಜ್ ಅವರ ಸಮಾಜಮುಖಿ ಸೇವೆ, ತಾಂತ್ರಿಕ ಪ್ರತಿಭೆ ಹಾಗೂ ಸರಳ ವ್ಯಕ್ತಿತ್ವವನ್ನು ಈ ಸಂದರ್ಭದಲ್ಲಿ ಎಲ್ಲರೂ ಸ್ಮರಿಸಿದರು.









