ಕೇಂದ್ರ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ‘ಕೇಂದ್ರ ರೈತ ಐಡಿ’ ಕಡ್ಡಾಯ



(ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 03. ಕೇಂದ್ರ ಸರ್ಕಾರದ ಬರಪರಿಹಾರ, ಬೆಳೆವಿಮೆ ಹಾಗೂ ಪಿ.ಎಂ. ಕಿಸಾನ್ ಯೋಜನೆಯಡಿ ಸೌಲಭ್ಯಗಳನ್ನು ಪಡೆಯಲು ರಾಜ್ಯದ “ಫ್ರೂಟ್ಸ್” (FRUITS) ಮಾದರಿಯಂತೆಯೇ ಕೇಂದ್ರ ಸರ್ಕಾರವು ‘ಕೇಂದ್ರ ರೈತ ಐಡಿ’ ವಿತರಿಸುವ ಪ್ರಕ್ರಿಯೆಯನ್ನು ಆರಂಭಿಸಿದೆ.
ಮಂಗಳೂರು ತಾಲೂಕಿನಲ್ಲಿ ಒಟ್ಟು ಎಫ್.ಐ.ಡಿ. (FID) ಹೊಂದಿರುವ 35,990 ರೈತರ ಪೈಕಿ ಇನ್ನು 14,520 ರೈತರು ನೋಂದಣಿಗೆ ಬಾಕಿ ಉಳಿದಿದ್ದಾರೆ. ರೈತರು ಮೊದಲು ಇ-ಕೆವೈಸಿ  ಮಾಡಿಸಿ, ಬಳಿಕ ವಿದ್ಯುನ್ಮಾನ ಸಹಮತಿ ಪತ್ರ (Electronic Consent Form) ನೀಡುವುದು ಕಡ್ಡಾಯವಾಗಿದೆ. ಇದರ ನಂತರವಷ್ಟೇ ಕೇಂದ್ರದ ರೈತ ಐಡಿ ಸೃಜನೆಯಾಗುತ್ತದೆ.
ಇನ್ನು ಕೆಲವೇ ದಿನಗಳಲ್ಲಿ ಈ ನೋಂದಣಿ ಪ್ರಕ್ರಿಯೆಯು ಮುಕ್ತಾಯಗೊಳ್ಳಲಿದ್ದು, ಕೃಷಿ ಜಮೀನು ಹೊಂದಿರುವ ತಾಲೂಕಿನ ಎಲ್ಲಾ ರೈತರು ಕೇಂದ್ರ ರೈತ ಐಡಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ.
ನೋಂದಣಿಗೆ  ಬೇಕಾಗುವ ದಾಖಲಾತಿಗಳು: ಪಹಣಿ ಪತ್ರ (RTC), ರೈತರ ಆಧಾರ್ ಕಾರ್ಡ್, ಆಧಾರ್ ಕಾರ್ಡ್ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ, ಬ್ಯಾಂಕ್ ಪಾಸ್‍ಬುಕ್ ಜೆರಾಕ್ಸ್.
ರೈತರು ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ, ಗ್ರಾಮ ಒನ್ ಕೇಂದ್ರ, ಕಂದಾಯ ಅಥವಾ ತೋಟಗಾರಿಕೆ ಇಲಾಖೆಯ ಕಚೇರಿಗಳನ್ನು ಸಂಪರ್ಕಿಸಿ ಅಗತ್ಯ ದಾಖಲೆಗಳೊಂದಿಗೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಈ ಪ್ರಕ್ರಿಯೆಯು ಪೂರ್ಣಗೊಳ್ಳಲು ಒಟ್ಟು 3 ಬಾರಿ ಒಟಿಪಿ ಪಡೆಯಲಾಗುತ್ತದೆ. ಹಾಗಾಗಿ ರೈತರು ಆಧಾರ್ ಸಂಖ್ಯೆಗೆ ಜೋಡಣೆಯಾಗಿರುವ ಮೊಬೈಲ್ ಫೋನ್‍ನೊಂದಿಗೆ ನೋಂದಣಿ ಸಮಯದಲ್ಲಿ ಖುದ್ದಾಗಿ ಹಾಜರಿರಬೇಕು.







‘ಅಗ್ರಿಸ್ಟಾಕ್’ ಉಪಕ್ರಮದ ಪ್ರಯೋಜನ: ಕೇಂದ್ರ ರೈತ ಐಡಿಯು ರೈತರ ಆಧಾರ್ ಮತ್ತು ಭೂದಾಖಲೆಗಳೊಂದಿಗೆ ನೇರವಾದ ಸಂಪರ್ಕವನ್ನು ಹೊಂದಿರುತ್ತದೆ. ಕೇಂದ್ರ ಸರ್ಕಾರದ “ಅಗ್ರಿಸ್ಟಾಕ್” ಉಪಕ್ರಮದ ಭಾಗವಾಗಿರುವ ಈ ಡಿಜಿಟಲ್ ಐಡಿಯು ರೈತರ ಭೂದಾಖಲೆಗಳು, ಆಧಾರ್ ಮತ್ತು ಬ್ಯಾಂಕ್ ವಿವರಗಳನ್ನು ಒಂದೇ ದತ್ತಸಂಚಯದಲ್ಲಿ (Database) ಸಂಯೋಜಿಸುತ್ತದೆ. ಇದರಿಂದ ಅರ್ಹ ಫಲಾನುಭವಿಗಳನ್ನು ಗುರುತಿಸಿ, ನೇರವಾಗಿ ರೈತರ ಖಾತೆಗೆ ಹಣ ವರ್ಗಾಯಿಸಲು (DBT) ಸಾಧ್ಯವಾಗುತ್ತದೆ.






ಒಂದು ವೇಳೆ ರೈತರು ಈ ಐಡಿಯನ್ನು ಹೊಂದಿಲ್ಲದಿದ್ದರೆ, ಮುಂಬರುವ ದಿನಗಳಲ್ಲಿ ಅವರಿಗೆ ಕಿಸಾನ್ ಸಮ್ಮಾನ್ ನಿಧಿ ಸೇರಿದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನೀಡುವ ಎಲ್ಲಾ ಸವಲತ್ತುಗಳು ರದ್ದಾಗುವ ಸಾಧ್ಯತೆಯಿದೆ. ಆದ್ದರಿಂದ, ಕೇಂದ್ರ ಐಡಿ ಮಾಡಿಸಲು ಬಾಕಿ ಇರುವ ಎಲ್ಲಾ ರೈತ ಬಾಂಧವರು ಕೂಡಲೇ ಈ ಅವಕಾಶವನ್ನು ಬಳಸಿಕೊಂಡು, ಸೌಲಭ್ಯಗಳಿಂದ ವಂಚಿತರಾಗುವುದನ್ನು ತಪ್ಪಿಸಿಕೊಳ್ಳಬೇಕಾಗಿ ಕೃಷಿ ಇಲಾಖೆಯ  ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ  ತಿಳಿಸಿದ್ದಾರೆ.

error: Content is protected !!
Scroll to Top