(ನ್ಯೂಸ್ ಕಡಬ) newskadaba.com, ಮೇ.18: ಈ ಭಾಗದಲ್ಲಿ ಇರೋದು ಬಾವಿಗಳಾ ಅಥವಾ ಡೀಸೆಲ್ ಗುಂಡಿಗಳಾ ಅನ್ನೋ ಅನುಮಾನ ಈಗ ಶುರುವಾಗಿದೆ. ಯಾಕಂದ್ರೆ ಬಾವಿಯಿಂದ ನೀರು ಸೇದಿದರೆ ನೀರಿನ ಬದಲು ಡೀಸೆಲ್ ವಾಸನೆ ಮೂಗಿಗೆ ಅಪ್ಪಳಿಸುತ್ತದೆ. ಅಧಿಕಾರಿಗಳು ಮಾತ್ರ ನಮಗೂ ಇದಕ್ಕೂ ಸಂಬಂಧವೇ ಇಲ್ಲ ಅನ್ನೋ ಹಾಗೆ ಕುಳಿತಿದ್ದಾರೆ.
ಇದು ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕಾವೂರು ಬಲಿಪಗುರಿ ರಸ್ತೆಯ ನಿವಾಸಿಗಳಿಗೆ ಈಗ ಕುಡಿಯುವ ನೀರಿನದ್ದೇ ದೊಡ್ಡ ಚಿಂತೆಯಾಗಿದೆ. ಕಳೆದ ನವೆಂಬರ್ ತಿಂಗಳಿನಲ್ಲಿ ಇಲ್ಲಿನ ಕೆಲವು ಮನೆಗಳ ಬಾವಿ ನೀರಲ್ಲಿ ಮೊದಲ ಬಾರಿಗೆ ಡೀಸೆಲ್ ನಂತಹ ಅಂಶ ಪತ್ತೆಯಾಗಿತ್ತು. ಆದರೆ ಆರಂಭದಲ್ಲಿ ನಿವಾಸಿಗಳು ಬಾವಿಗಳನ್ನು ಸ್ವಚ್ಛಗೊಳಿಸಿ ಸಮಸ್ಯೆ ಪರಿಹರಿಸಲು ಯತ್ನಿಸಿದ್ದರು. ದಿನ ಕಳೆದಂತೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತ , ಸದ್ಯ ಮೂರರಿಂದ ನಾಲ್ಕು ಬಾವಿಗಳ ನೀರು ಸಂಪೂರ್ಣ ಡೀಸೆಲ್ ನಂತಹ ದ್ರವ ಮಿಶ್ರಣಗೊಂಡು ಕಲುಷಿತಗೊಂಡಿದೆ. ಇದೀಗ ನೀರು ಕಲುಷಿತ ಗೊಂಡಿದ್ದು ಸ್ಥಳೀಯ ಹತ್ತಾರು ಕುಟುಂಬಗಳು ನೀರಿನ ಆಶ್ರಯ ಕಳೆದುಕೊಂಡಂತಾಗಿದ್ದು ಈ ನೀರು ಬಳಕೆ ಮಾಡಿ ಮನೆ ಮಂದಿ ಆರೋಗ್ಯ ಸಮಸ್ಯೆ ಎದುರಿಸಿದ್ದರು ಎನ್ನುವ ಗಂಭೀರ ಆರೋಪವನ್ನು ಸ್ಥಳೀಯ ನಿವಾಸಿ ದಿವಾಕರ್ ಮಾಡಿದ್ದಾರೆ.
ಹೌದು ಇದು ಕೇವಲ ನಿವಾಸಿಗಳ ಆರೋಪ ಮಾತ್ರ ಅಲ್ಲ ನೀರಿನ ವಾಸನೆಯಿಂದ ಆತಂಕಗೊಂಡ ನಿವಾಸಿಗಳು, ನೀರಿನ ಸ್ಯಾಂಪಲ್ ಅನ್ನು ಸುರತ್ಕಲ್ ನ NITK ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಿದ್ದರು. ಬಂದಿರುವ ಪರೀಕ್ಷಾ ವರದಿಯಲ್ಲಿ ಕಳವಳಕಾರಿ ಅಂಶಗಳು ಬಹಿರಂಗವಾಗಿವೆ. ನೀರಿನಲ್ಲಿ ಅತಿ ಹೆಚ್ಚು ತೈಲ ಮತ್ತು ಗ್ರೀಸ್ (Oil and Grease) ಅಂಶ ಇರುವುದು ದೃಢಪಟ್ಟಿದೆ. ಅಷ್ಟೇ ಅಲ್ಲದೆ, ನೀರಿನ pH ಮಟ್ಟ ಕುಸಿದಿದ್ದು, ಅಪಾಯಕಾರಿ ಕೊಲಿಫಾರ್ಮ್ ಬ್ಯಾಕ್ಟೀರಿಯಾಗಳು ಇರುವುದು ಪತ್ತೆಯಾಗಿದೆ. ಇದು ಅಂತರ್ಜಲಕ್ಕೆ ಯಾವುದೋ ಮೂಲದಿಂದ ತೈಲ ಸೋರಿಕೆಯಾಗುತ್ತಿರುವುದರ ಸ್ಪಷ್ಟ ಮುನ್ಸೂಚನೆಯಾಗಿದೆ ಎಂದು ವರದಿಯಲ್ಲಿ ಸೂಚಿಸಿದ್ದಾರೆ ಎನ್ನುತ್ತಾರೆ ಸ್ಥಳೀಯ ನಿವಾಸಿ ಜಯಶ್ರೀ.
ಇನ್ನು ಸ್ಥಳೀಯ ನಿವಾಸಿಗಳ ಮನೆಯ ಬಾವಿ ನೀರು ಕಲುಷಿತವಾಗಿರುವುದರ ಬಗ್ಗೆ ಇಲಾಖಾ ಅಧಿಕಾರಿಗಳಿಗೆ ಹೇಳಿದರೆ ನಮ್ಮ ಇಲಾಖೆಯದ್ದಲ್ಲಾ, ಬದಲಾಗಿ ಬೇರೆ ಇಲಾಖೆ ಅವರಿಗೆ ಹೇಳಿ, ಸರಿ ಆಗದೆ ಇದ್ದಲ್ಲಿ ಬಾವಿ ಮುಚ್ಚಿ ಬಿಡಿ ಎನ್ನುವ ಉಡಾಫೆ ಉತ್ತರ ನೀಡ್ತಾರೆ ಎನ್ನಲಾಗಿದೆ. ಇದು ಕೇವಲ ಕೆಲ ಮನೆಗಳ ಸಮಸ್ಯೆಯಲ್ಲ. ಇದೇ ರೀತಿ ಮುಂದುವರಿದರೆ ಸುತ್ತಮುತ್ತಲಿನ ಪ್ರದೇಶದ ಬಾವಿಗಳಿಗೂ ಅಪಾಯ ಎದುರಾಗುವ ಸಾಧ್ಯತೆ ಇದೆ. ಇದರಿಂದ ಸಾರ್ವಜನಿಕ ಆರೋಗ್ಯದ ಮೇಲೂ ಗಂಭೀರ ಪರಿಣಾಮ ಬೀರುವ ಭೀತಿ ಇದೆ ಇದ್ದಕ್ಕೆ ಸೂಕ್ತ ಪರಿಹಾರ ಸಂಬಂಧ ಪಟ್ಟವರು ಮಾಡಲಿ ಎನ್ನುತ್ತಾರೆ ಸ್ಥಳೀಯ ನಿವಾಸಿಗಳು.
ಒಟ್ಟಿನಲ್ಲಿ ಅಂತರ್ಜಲದಲ್ಲಿ ತೈಲ ಪದಾರ್ಥ ಪತ್ತೆಯಾಗಿರುವುದು ಕೇವಲ ಈ ಮನೆಗಳಿಗೆ ಮಾತ್ರವಲ್ಲ, ಇಡೀ ಪರಿಸರದ ಆರೋಗ್ಯಕ್ಕೆ ಮಾರಕವಾಗಿದೆ. ಇದೊಂದು ಗಂಭೀರ ಸಾರ್ವಜನಿಕ ಸಮಸ್ಯೆಯಾಗಿದ್ದು, ಜಿಲ್ಲಾಡಳಿತ ಹಾಗೂ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅನಾಹುತ ಸಂಭವಿಸುವ ಮುನ್ನ ಎಚ್ಚೆತ್ತು ಸೂಕ್ತ ಕ್ರಮ ಕೈಗೊಳ್ಳಬೇಕಿದೆ.









