ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಭಕ್ತರಿಗಾಗಿ ಶಾಶ್ವತ ಚಾವಣಿ ಮತ್ತು ತಂಪು ಪಾನೀಯ ವ್ಯವಸ್ಥೆ



(ನ್ಯೂಸ್‌ ಕಡಬ) newskadaba.com,  ಮೇ.14: ಉಡುಪಿಯ ಶ್ರೀ ಕೃಷ್ಣ ಮಠಕ್ಕೆ ಪ್ರತಿದಿನ ಭಕ್ತರ ಹರಿವು ಹೆಚ್ಚಾಗುತ್ತಲೇ ಇದೆ. ಬೇಸಿಗೆಯ ಸುಡುವ ಬಿಸಿಲಿನ ನಡುವೆಯೂ, ಭಕ್ತರಿಗಾಗಿ ಮಠದ ಆಡಳಿತ ಮಂಡಳಿಯು ಹಲವಾರು ಹೊಸ ವ್ಯವಸ್ಥೆಗಳನ್ನು ಜಾರಿಗೆ ತಂದಿದೆ







. ಉಡುಪಿಯಲ್ಲಿ ವಿಪರೀತ ಸೆಖೆಯಿದ್ದರೂ, ರಜೆಯ ಈ ಸಮಯದಲ್ಲಿ ಕೃಷ್ಣ ಮಠಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ಕಡಿಮೆಯಾಗಿಲ್ಲ. ದೂರದೂರುಗಳಿಂದ ಆಗಮಿಸುವ ಸಾವಿರಾರು ಭಕ್ತರು ಈ ಹಿಂದೆ ದರ್ಶನಕ್ಕಾಗಿ ಕಾಯುವಾಗ ಕಡು ಬಿಸಿಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಇತ್ತು.ಈ ಸಮಸ್ಯೆಯನ್ನು ಪರಿಹರಿಸಲು, ಪರ್ಯಾಯ ಶಿರೂರು ಮಠವು ಸಾಲಿನಲ್ಲಿ ನಿಲ್ಲುವ ಭಕ್ತರಿಗೆ ನೆರಳು ನೀಡಲು ಶಾಶ್ವತ ಚಾವಣಿ ವ್ಯವಸ್ಥೆಯನ್ನು ಮಾಡಿದೆ. ಇದರೊಂದಿಗೆ, ಬಿಸಿಲಿನ ತಾಪದಿಂದ ರಕ್ಷಿಸಿಕೊಳ್ಳಲು ಭಕ್ತರಿಗೆ ತಂಪು ಪಾನೀಯಗಳ ವ್ಯವಸ್ಥೆಯನ್ನೂ ಮಾಡಲಾಗಿದೆ.






ಈ ಸೌಲಭ್ಯದಿಂದಾಗಿ ಭಕ್ತರು ನಿಟ್ಟುಸಿರು ಬಿಡವಂತಾಗಿದೆ. ಈ ಹಿಂದೆ ಗಂಟೆಗಟ್ಟಲೆ ಕಾಯಬೇಕಾಗಿದ್ದ ಭಕ್ತರಿಗೆ ಈಗ ಕನಕ ಮಂಟಪದ ಮಾರ್ಗವಾಗಿ ನೇರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ತುರ್ತು ಸಂದರ್ಭಗಳಲ್ಲಿ ಶೀಘ್ರ ದರ್ಶನಕ್ಕಾಗಿ ವಿಶೇಷ ವ್ಯವಸ್ಥೆಗಳನ್ನು ಮಾಡಲಾಗಿದ್ದು, ಇದು ಪ್ರವಾಸಿಗರಿಗೆ ಮಾತ್ರವಲ್ಲದೆ ಸ್ಥಳೀಯ ಭಕ್ತರಿಗೂ ಅನುಕೂಲವಾಗಿದೆ.

ಈ ಕುರಿತು ಮಾಹಿತಿ ನೀಡಿದ ಶಿರೂರು ಮಠದ ದಿವಾನರಾದ ಉದಯ ಕುಮಾರ್ ಸರಳತ್ತಾಯ ಅವರು, “ಹೊಸ ವ್ಯವಸ್ಥೆಗಳಿಂದ ದರ್ಶನ ಪಡೆಯುವುದು ಸುಲಭವಾಗಿದೆ. ಮಠದಲ್ಲಿ ದರ್ಶನಕ್ಕೆ ಸಾಂಪ್ರದಾಯಿಕ ಕ್ರಮವಿದೆ. ಭಕ್ತರು ಮೊದಲು ಕನಕನ ಕಿಂಡಿಯ ಮೂಲಕ ಶ್ರೀಕೃಷ್ಣನನ್ನು ಪೂಜಿಸಿ, ನಂತರ ಚಂದ್ರಮೌಳೀಶ್ವರ ಮತ್ತು ಅನಂತೇಶ್ವರ ದೇವಸ್ಥಾನಗಳಿಗೆ ಭೇಟಿ ನೀಡಿ, ಪುನಃ ನವಗ್ರಹ ಕಿಂಡಿಯ ಮೂಲಕ ಕೃಷ್ಣನ ದರ್ಶನ ಪಡೆಯುತ್ತಾರೆ. ಈಗ ವಿಐಪಿಗಳು ಮತ್ತು ಸ್ಥಳೀಯರಿಗಾಗಿ ಪ್ರತ್ಯೇಕ ಕ್ಯೂ ವ್ಯವಸ್ಥೆಯನ್ನು ಮಾಡಲಾಗಿದೆ” ಎಂದು ತಿಳಿಸಿದರು.

ಪ್ರತಿದಿನ ಮಠಕ್ಕೆ ಭೇಟಿ ನೀಡುವ ಸ್ಥಳೀಯ ಭಕ್ತರ ವಿನಂತಿಯ ಮೇರೆಗೆ ಅವರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗುತ್ತಿದೆ. ಸ್ಥಳೀಯರಿಗೆ ಕನಿಷ್ಠ ದರದಲ್ಲಿ ಐಡಿ ಕಾರ್ಡ್ ನೀಡಲಾಗುವುದು. ಕಾರ್ಡ್‌ಗಳ ದುರುಪಯೋಗ ತಡೆಯಲು ಹೆಬ್ಬೆಟ್ಟಿನ ಗುರುತು ಮತ್ತು ಮುಖ ಗುರುತಿಸುವಿಕೆ ತಂತ್ರಜ್ಞಾನ ಬಳಸಲಾಗುವುದು. ಭಕ್ತರ ದಟ್ಟಣೆ ಕಡಿಮೆ ಮಾಡಲು ಸ್ಥಳೀಯರು ಮಧ್ಯಾಹ್ನ 2 ರಿಂದ ಸಂಜೆ 5 ಗಂಟೆಯ ನಡುವೆ ಭೇಟಿ ನೀಡುವಂತೆ ಕೋರಲಾಗಿದೆ.ಸಾಲಿನಲ್ಲಿ ಫ್ಯಾನ್ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದ್ದು, ಮುಂಬರುವ ದಿನಗಳಲ್ಲಿ ಇನ್ನಷ್ಟು ಸುಧಾರಣೆಗಳನ್ನು ನಿರೀಕ್ಷಿಸಲಾಗಿದೆ.

error: Content is protected !!
Scroll to Top