(ನ್ಯೂಸ್ ಕಡಬ) newskadaba.com, ಎ.25: ಮದುವೆಯಾಗುವುದಾಗಿ ನಂಬಿಸಿ ಮಹಿಳೆಯನ್ನು ವಂಚಿಸಿ ಮಗುವಿಗೆ ತಂದೆಯಾಗಿರುವ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ, ಕರ್ನಾಟಕ ಹೈಕೋರ್ಟ್ ಮಹತ್ವದ ಮಧ್ಯಂತರ ಆದೇಶ ನೀಡಿದೆ. ಆರೋಪಿಯಾಗಿರುವ ಕೃಷ್ಣ ಜೆ. ರಾವ್ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣಗಳ ಮುಂದಿನ ಪ್ರಕ್ರಿಯೆಗೆ ತಾತ್ಕಾಲಿಕ ತಡೆ ನೀಡಿದ ನ್ಯಾಯಾಲಯ, ಸಂತ್ರಸ್ತೆ ಹಾಗೂ ಮಗುವಿಗೆ ಪ್ರತಿ ತಿಂಗಳು ₹75,000 ಜೀವನಾಂಶ ನೀಡಲು ಸೂಚಿಸಿದೆ.
ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ನ್ಯಾಯಪೀಠ, ಪ್ರಕರಣ ರದ್ದುಪಡಿಸುವಂತೆ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿ ಈ ಆದೇಶ ಹೊರಡಿಸಿದೆ. ಅರ್ಜಿದಾರರು ಸ್ವತಃ ಅಥವಾ ತಮ್ಮ ಪೋಷಕರ ಮೂಲಕ ಸಂತ್ರಸ್ತೆ ಮತ್ತು ಮಗುವಿನ ಅಗತ್ಯತೆಗಳನ್ನು ಪೂರೈಸುವಂತೆ ಪ್ರತೀ ತಿಂಗಳು ₹75,000 ಪಾವತಿಸಬೇಕು ಎಂದು ನ್ಯಾಯಾಲಯ ಷರತ್ತು ವಿಧಿಸಿದೆ.
ಇದಲ್ಲದೆ, ಆದೇಶದಂತೆ ಮೊದಲ ಕಂತಿನ ₹75,000 ಅನ್ನು ಒಂದು ವಾರದ ಒಳಗಾಗಿ ಪಾವತಿಸಬೇಕು. ನಂತರ ಪ್ರತೀ ತಿಂಗಳು ನಿರಂತರವಾಗಿ ಹಣ ಪಾವತಿಸಬೇಕೆಂದು ಕೋರ್ಟ್ ಸ್ಪಷ್ಟಪಡಿಸಿದೆ.ಮಾಧ್ಯಮಗಳ ಮುಂದೆ ಸಂತ್ರಸ್ತೆಯ ಪೋಷಕರು ಹಾಗೂ ಸಂಬಂಧಿಕರು ಯಾವುದೇ ರೀತಿಯ ಹೇಳಿಕೆ ನೀಡಬಾರದು ಎಂಬುದನ್ನೂ ನ್ಯಾಯಾಲಯ ಸೂಚಿಸಿದೆ.









