ಬಂಟ್ವಾಳ: ನೇತ್ರಾವತಿ ನದಿತೀರದಲ್ಲಿ ಆಧಾರ್ ಕಾರ್ಡ್‌ಗಳ ರಾಶಿ ಪತ್ತೆ!



(ನ್ಯೂಸ್‌ ಕಡಬ) newskadaba.com,  ಮಾ.05: ಫರಂಗಿಪೇಟೆಯ 10 ನೇ ಮೈಲ್‌ ಕಲ್ಲಿನ ಬಳಿ ನೇತ್ರಾವತಿ ನದಿಯ ದಡದಲ್ಲಿ ಆಧಾರ್ ಕಾರ್ಡ್‌ಗಳ ರಾಶಿ ಪತ್ತೆಯಾಗಿದ್ದು, ನಿವಾಸಿಗಳಲ್ಲಿ ಅನುಮಾನ , ಆತಂಕ ಸೃಷ್ಟಿಯಾಗಿದೆ.ವರದಿಗಳ ಪ್ರಕಾರ, ಮಂಗಳವಾರ ಸಂಜೆ, ಸ್ಥಳೀಯ ನಿವಾಸಿಯೊಬ್ಬರು ನದಿ ದಂಡೆಯಲ್ಲಿ ನೀರಿನಲ್ಲಿ ಹಲವಾರು ಆಧಾರ್ ಕಾರ್ಡ್‌ಗಳು ತೇಲುತ್ತಿರುವುದನ್ನು ಕಂಡು ತಕ್ಷಣ ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ನಂತರ, ಗ್ರಾಮ ಪಂಚಾಯತ್ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ಮತ್ತು ಇತರ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಿದ್ದಾರೆ.





ಈ ವೇಳೆ ಆಧಾರ್ ಕಾರ್ಡ್‌ಗಳು ಪುದು ಗ್ರಾಮದ ನಿವಾಸಿಗಳ ವಿಳಾಸಗಳನ್ನು ಹೊಂದಿರುವುದು ಕಂಡುಬಂದಿದ್ದು, ಅಧಿಕೃತ ದಾಖಲೆಗಳು ನದಿಗೆ ಹೇಗೆ ಬಂದವು ಎಂಬ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.ಈ ವಿಷಯಕ್ಕೆ ಪ್ರತಿಕ್ರಿಯಿಸಿದ ಗ್ರಾಮ ಪಂಚಾಯತ್ ಅಧ್ಯಕ್ಷರು, ಅನೇಕ ಗ್ರಾಮಸ್ಥರು ತಮ್ಮ ಆಧಾರ್ ಕಾರ್ಡ್‌ಗಳ ತಿದ್ದುಪಡಿ ಮತ್ತು ನವೀಕರಣಗಳಿಗಾಗಿ ಅರ್ಜಿ ಸಲ್ಲಿಸಿದ್ದಾರೆ ಮತ್ತು ಪರಿಷ್ಕೃತ ಕಾರ್ಡ್‌ಗಳು ಅಂಚೆ ಮೂಲಕ ಬರುತ್ತದೆ ಎಂದು ಕಾದು ಬಳಿಕ ಕಾರ್ಡ್‌ಗಳು ವಿಳಂಬವಾದ ಕಾರಣ, ಹಲವು ನಿವಾಸಿಗಳು ತಮ್ಮ ತಕ್ಷಣದ ಅಗತ್ಯಗಳಿಗಾಗಿ ಸೈಬರ್ ಕೇಂದ್ರಗಳಿಂದ ಪ್ರತಿಯನ್ನು ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಆಧಾರ್ ಕಾರ್ಡ್‌ಗಳು ಬಂದಿದ್ದರೂ, ಅವುಗಳನ್ನು ಫಲಾನುಭವಿಗಳಿಗೆ ವಿತರಣೆ ಮಾಡಿಲ್ಲ ಮತ್ತು ಬದಲಾಗಿ ಎಸೆಯಲಾಗಿದೆ ಎಂದು ಪರೋಕ್ಷವಾಗಿ ಅಂಚೆ ಇಲಾಖೆ ವಿರುದ್ದ ಆರೋಪಿಸಿದ್ದಾರೆ.






ನದಿಯಲ್ಲಿ ಆಧಾರ್ ಕಾರ್ಡ್‌ಗಳು ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಕಾರ್ಡ್‌ಗಳನ್ನು ನಿವಾಸಿಗಳಿಗೆ ವಿತರಿಸಲು ವಿಫಲರಾಗಿದ್ದಾರೆಯೇ ಅಥವಾ ದಾಖಲೆಗಳು ನದಿಗೆ ಹೇಗೆ ನಿಖರವಾಗಿ ಬಂದಿವೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಸಮಗ್ರ ತನಿಖೆ ನಡೆಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

error: Content is protected !!
Scroll to Top