ಬೆಂಗಳೂರು ಟು ಮುಂಬೈ ನಡುವೆ ಸೂಪರ್‌ಫಾಸ್ಟ್ ರೈಲು



ನ್ಯೂಸ್ಕಡಬ) newskadaba.com,  ಸೆ. 27 ಬೆಂಗಳೂರು: ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಕರ್ನಾಟಕದ ಜನರಿಗೆ ಗುಡ್​ ನ್ಯೂಸ್​​ ನೀಡಿದ್ದಾರೆ. ಬೆಂಗಳೂರಿನಿಂದ ಮುಂಬಯಿಗೆ ಸೂಪರ್‌ ಫಾಸ್ಟ್ ರೈಲು ಘೋಷಣೆ ಮಾಡಿದ್ದಾರೆ. ಆ ಮೂಲಕ ಬೆಂಗಳೂರಿನ ಜನತೆಯ 30 ವರ್ಷಗಳ ಬೇಡಿಕೆ ಈಡೇರಿದೆ ಎಂದು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಸಂತಸ ವ್ಯಕ್ತಪಡಿಸಿದ್ದಾರೆ.ಈ ವಿಚಾರವಾಗಿ ಮಾತನಾಡಿರುವ ಸಚಿವ ಅಶ್ವಿನಿ ವೈಷ್ಣವ್​​, ಶೀಘ್ರದಲ್ಲೇ ನಾವು ಬೆಂಗಳೂರು ಟು ಮುಂಬೈ ನಡುವೆ ಸೂಪರ್‌ಫಾಸ್ಟ್ ರೈಲು ಪ್ರಾರಂಭಿಸುತ್ತೇವೆ. ಎರಡೂ ನಗರಗಳು ಪ್ರಮುಖ ಆರ್ಥಿಕ ಕೇಂದ್ರಗಳಾಗಿವೆ. ಹಾಗಾಗಿ ಇದು ಪ್ರಮುಖ ಯೋಜನೆ ಆಗಿದೆ ಎಂದು ಹೇಳಿದರು.







30 ವರ್ಷಗಳ ಬೇಡಿಕೆ ಈಡೇರಿದೆ ಎಂದ ತೇಜಸ್ವಿ ಸೂರ್ಯ






ಸಂಸದ ತೇಜಸ್ವಿ ಸೂರ್ಯ ಕೂಡ ಈ ವಿಚಾರವಾಗಿ ಮಾತನಾಡಿದ್ದು, ಬೆಂಗಳೂರು ಮತ್ತು ಮುಂಬೈ ನಡುವೆ ಹೊಸ ಸೂಪರ್‌ಫಾಸ್ಟ್ ರೈಲಿಗೆ ಕೇಂದ್ರ ರೈಲ್ವೆ ಸಚಿವಾಲಯ ಅನುಮೋದನೆ ನೀಡಿದೆ. ಆ ಮೂಲಕ ಎರಡೂ ನಗರಗಳ ಜನರ 30 ವರ್ಷಗಳ ಬೇಡಿಕೆ ಈಡೇರಿದೆ ಎಂದಿದ್ದಾರೆ.ಸದ್ಯ ಬೆಂಗಳೂರು ಮತ್ತು ಮುಂಬೈ ಮಧ್ಯೆ ಉದ್ಯಾನ್ ಎಕ್ಸ್‌ಪ್ರೆಸ್ ಒಂದೇ ಸಂಚಾರ ನಡೆಸಿದ್ದು, ಇದು 24 ಗಂಟೆಗಳಿಗಿಂತ ಹೆಚ್ಚು ಸಮಯವನ್ನು ತೆಗೆದುಕೊಳ್ಳುತ್ತದೆ. ಕಳೆದ ವರ್ಷ 26 ಲಕ್ಷಕ್ಕೂ ಹೆಚ್ಚು ಜನರು ಈ 2  ನಗರಗಳಿಗೆ ವಿಮಾನದಲ್ಲಿ ಪ್ರಯಾಣಿಸಿದ್ದಾರೆ. ಹೀಗಾಗಿ 30 ವರ್ಷಗಳಿಂದ ಬೇಡಿಕೆ ಇಡಲಾಗಿತ್ತು. ಸದ್ಯ ಈ ಹೊಸ ಸೂಪರ್‌ಫಾಸ್ಟ್ ರೈಲಿನ ಸೇವೆಯು ಲಕ್ಷಾಂತರ ಪ್ರಯಾಣಿಕರಿಗೆ ಕೈಗೆಟುಕುವ ದರದೊಂದಿಗೆ ಅನುಕೂಲಕರವಾಗಲಿದೆ ಎಂದು ಅವರು ಹೇಳಿದ್ದಾರೆ.

ಬಹುದಿನದ ಕನಸನ್ನು ನನಸಾಗಿಸಿದ ಪ್ರಧಾನಿ ಮೋದಿ ಮತ್ತು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಕರ್ನಾಟಕ ಮತ್ತು ಕನ್ನಡಿಗರ ಪರವಾಗಿ ಸಂಸದ ತೇಜಸ್ವಿ ಸೂರ್ಯ ಕೃತಜ್ಞತೆ ಸಲ್ಲಿಸಿದರು. ಜೊತೆಗೆ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣಗೆ ಧನ್ಯವಾದ ತಿಳಿಸಿದ್ದಾರೆ.

 

.

error: Content is protected !!
Scroll to Top