(ನ್ಯೂಸ್ ಕಡಬ) newskadaba.com, ಸೆ.15 ಬೆಂಗಳೂರು : ಸಮುದಾಯವನ್ನೊಳಗೊಂಡ ಕ್ರಿಕೆಟ್ ಪ್ರೇರಿತ ಕ್ರೀಡಾ ಚಟುವಟಿಕೆ ಉತ್ತೇಜಿಸುವ ನಿಟ್ಟಿನಲ್ಲಿ ತೊಡಗಿಕೊಂಡಿರುವ ಕರ್ನಾಟಕ ಸಾಫ್ಟ್ಬಾಲ್ ಪ್ರೀಮಿಯರ್ ಲೀಗ್ ರಾಜ್ಯದಲ್ಲಿ ಇದೀಗ 2ನೇ ಆವೃತ್ತಿಯ ಕ್ರೀಡಾ ಕೂಟಕ್ಕೆ ಸಜ್ಜಾಗಿದೆ. ನವೆಂಬರ್ 1 ರಿಂದ 29 ರ ವರೆಗೆ ಇಡೀ ತಿಂಗಳು ಕ್ರೀಡೆಯಲ್ಲಿ ಕನ್ನಡದ ಕಂಪನ್ನು ಪಸರಿಸಲು ಸಿದ್ಧತೆಗಳು ನಡೆಯುತ್ತಿವೆ.ನಗರದ ಎಪಿಎಸ್ ಕ್ರೀಡಾಂಗಣದಲ್ಲಿ ಪಂದ್ಯಗಳು ಆಯೋಜನೆಗೊಂಡಿದೆ.
ಕೊಡಿಗೆಹಳ್ಳಿ ಗೇಟ್ ನ ಹಯಾತ್ ಹೋಟೆಲ್ ನಲ್ಲಿ ಕರ್ನಾಟಕ ಸಾಫ್ಟ್ಬಾಲ್ ಪ್ರೀಮಿಯರ್ ಲೀಗ್ ಜರ್ಸಿಯನ್ನು ವಿಧಾನಪರಿಷತ್ ಶಾಸಕರಾದ ಟಿ.ಎ. ಶರವಣ, ಐಎಎಸ್ ಅಧಿಕಾರಿಗಳ ಸಂಘದ ಅಧ್ಯಕ್ಷ ಅನಿಲ್ ಕುಮಾರ್, ಕನ್ನಡದ ಸೆಲೆಬ್ರೆಟಿಗಳಾದ ಶಶಿಕುಮಾರ್, ಮಾನ್ವಿತಾ, ರೇಷ್ಮಾ ನಾಣಯ್ಯ, ಪ್ರೀತಿ ಗೌಡ, ಪ್ರಥ್ವಿ ಅಂಬರ್, ಸಾತ್ವಿಕ, ಬೃಂದಾ ಆಚಾರ್, ಕೆ.ಎಸ್.ಪಿ.ಎಲ್ ಅಧ್ಯಕ್ಷ ಗಂಗಾಧರ ರಾಜು, ಪ್ರಧಾನ ಕಾರ್ಯದರ್ಶಿ ರಘು ಅವರು ಜರ್ಸಿ ಬಿಡುಗಡೆ ಮಾಡಿದರು.
ಕೆ.ಎಸ್.ಪಿ.ಎಲ್ ನಲ್ಲಿ ಈ ಬಾರಿ ರಾಜ್ಯದ ಎಲ್ಲಾ ಜಿಲ್ಲೆಗಳ ಒಟ್ಟು 32 ಹಣಾಹಣಿಗೆ ಸಜ್ಜಾಗಿದ್ದು, ಪ್ರತಿಯೊಂದು ತಂಡಕ್ಕೂ ಕರ್ನಾಟಕ ಆಳಿದ ರಾಜಮನೆತನದ ಹೆಸರುಗಳನ್ನು ಇಡಲಾಗಿದೆ.
ಕೆ.ಎಸ್.ಪಿ.ಎಲ್ ಪ್ರಧಾನ ಕಾರ್ಯದರ್ಶಿ ರಘು ಮಾತನಾಡಿ, ಒಟ್ಟು 32 ತಂಡಗಳಿಗೆ 32 ಮಂದಿ ಸೆಲೆಬ್ರೆಟಿ ರಾಯಭಾರಿಗಳನ್ನು ನೇಮಿಸಿದ್ದು, ಕ್ರಿಕೆಟ್ ಅಭಿಮಾನಿಗಳು, ಉದ್ಯಮಿಗಳು, ಕ್ರೀಡಾ ಪ್ರೇಮಿಗಳ ತಂಡ ಕ್ರಿಕೆಟ್ ಹಬ್ಬವನ್ನು ಮತ್ತಷ್ಟು ರೋಚಕಗೊಳಿಸಲಿದೆ. ಕೆ.ಎಸ್.ಪಿ.ಎಲ್ ಕೇವಲ ಕ್ರೀಡಾ ಸಂಭ್ರಮವಲ್ಲದೆ, ಪ್ರತಿಭೆ, ಮನರಂಜನೆ ಮತ್ತು ಸಮುದಾಯದ ಒಗ್ಗಟ್ಟನ್ನು ಉತ್ತೇಜಿಸುವ ವೇದಿಕೆಯಾಗಲಿದೆ ಎಂದರು.











