(ನ್ಯೂಸ್ ಕಡಬ) newskadaba.com, ಸೆ.12 ಹಾಸನ : ರಾಜ್ಯದಲ್ಲಿ ಮತ್ತೊಂದು ಭೀಕರ ಮರ್ಡರ್ ನಡೆದಿದ್ದು, ಮಗಳನ್ನು ತವರು ಮನೆಗೆ ಕರೆದೊಯ್ದಿದ್ದಕ್ಕೆ ಅತ್ತೆಯನ್ನೇ ಅಳಿಯ ಕೊಲೆ ಮಾಡಿರುವ ಘಟನೆ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ರಾಮನಾಥಪುರದಲ್ಲಿ ನಡೆದಿದೆ. ರಾಮನಾಥಪುರದಲ್ಲಿ ರಸೂಲ್ ಎಂಬಾತ ಚಾಕುವಿನಿಂದ ಇರಿದು ಫೈರೋಜಾ ಬಾನು (55) ಎಂಬಾಕೆಯ ಕೊಲೆಗೈದಿದ್ದಾನೆ.
9 ವರ್ಷದ ಹಿಂದೆ ರಸೂಲ್, ಸಮೀರಾ ಬಾನು ಎಂಬಾಕೆಯ ಜೊತೆಗೆ ಮದುವೆಯಾಗಿದ್ದ. ಪದೇ ಪದೆ ಪತ್ನಿ ಸಮೀರಾ ಬಾನುಗೆ ರಸೂಲ್ ಕಿರುಕುಳ ನೀಡುತ್ತಿದ್ದ. ಇದರಿಂದ ಬೇಸತ್ತು ನಿನ್ನೆ ಮಗಳನ್ನು ತವರು ಮನೆಗೆ ಫೈರೋಜಾ ಬಾನು ಕರೆತಂದಿದ್ದರು. ಇದರಿಂದ ಕೋಪಗೊಂಡ ರಸೂಲ್ ಅತ್ತೆಯನ್ನೇ ಕೊಲೆ ಮಾಡಿದ್ದಾನೆ. ಗಾಯಗೊಂಡ ಪತ್ನಿ ಸಮೀರಾಗೆ ಹಾಸನ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕೊಣನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಕೆರೆಯಲ್ಲಿ ಹೂತಿದ್ದ ವಿದ್ಯುತ್ ಕಾರ್ಮಿಕನ ಶವ ಹೊರತೆಗೆದ ಪೊಲೀಸರು
ಗುಡಿಬಂಡೆ : ಲೈನ್ಮನ್ ಒಬ್ಬರ ಬಳಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ರವಿ ಎಂಬಾತನ ಸಾವನ್ನು ಮುಚ್ಚಿಟ್ಟು ದಫನ್ ಮಾಡಿದ್ದ ಲೈನ್ಮನ್ ಚಂದ್ರಶೇಖರ್ ಎಂಬಾತನನ್ನು ಬಂಧಿಸಿರುವ ಪೊಲೀಸರು ನಂತರ ಮೃತ ರವಿಯ ಹೆಣವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಿದ ಘಟನೆ ಗುರುವಾರ ಗುಡಿಬಂಡೆಯಲ್ಲಿ ನಡೆದಿದೆ.
ಕಳೆದೆರಡು ದಿನಗಳ ಹಿಂದೆಯಷ್ಟೆ ವಿದ್ಯುತ್ ಕೆಲಸಕ್ಕೆ ಹೋಗಿದ್ದ ರವಿ ಎಂಬಾತ ಕೆಲಸ ಮಾಡುವ ವೇಳೆ ವಿದ್ಯುತ್ ಅವಗಡದಿಂದ ಸಾವನ್ನಪ್ಪಿದ್ದರು.ಈ ವಿಚಾರ ಯಾರಿಗೂ ತಿಳಿಯದಂತೆ ಲೈನ್ಮನ್ ಚಂದ್ರಶೇಖರ್ ಬೀಚಗಾನಹಳ್ಳಿ ಸಮೀಪದ ಬಂದಾರ್ಲಹಳ್ಳಿ ಕೆರೆಯಲ್ಲಿ ಹೂತು ಪರಾರಿ ಯಾಗಿದ್ದ. ಗುರುವಾರ ಪೊಲೀಸ್ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಮೃತ ರವಿ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಿದ್ದು ಸ್ಥಳಕ್ಕೆ ಎಸ್ಸ್ಪಿ ಕುಶಾಲ್ ಚೌಕ್ಸೆ ಭೇಟಿ ನೀಡಿದ್ದರು.












