ನನ್ನ ಪಕ್ಷ ನಿಷ್ಠೆಯನ್ನು ಪ್ರಶ್ನಿಸುವವರು ಮೂರ್ಖರು: ಡಿ.ಕೆ ಶಿವಕುಮಾರ್

(ನ್ಯೂಸ್‌ ಕಡಬ) newskadaba.com, ಆ.26: ನಾನು ಹುಟ್ಟಿದ್ದು ಕಾಂಗ್ರೆಸ್ಸಿಗನಾಗಿ, ಸಾಯುವುದೇ ಕಾಂಗ್ರೆಸ್ಸಿಗನಾಗಿಯೇ. ನನ್ನ ಪಕ್ಷ ನಿಷ್ಠೆಯನ್ನು ಪ್ರಶ್ನೆ ಮಾಡುವವರು ಮೂರ್ಖರು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ತಿರುಗೇಟು ನೀಡಿದರು.

ವಿಧಾನಸಭೆಯಲ್ಲಿ ಆರ್ಎಸ್ಎಸ್ಗೀತೆ ಹಾಡಿದ ವಿಚಾರವಾಗಿ ಕಾಂಗ್ರೆಸ್ ಅನೇಕ ನಾಯಕರು ಡಿಕೆಶಿ ಅವರ ವಿರುದ್ದ ಪರೋಕ್ಷವಾಗಿ ಟೀಕೆ ಮಾಡಿದ್ದರು. ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ಬೆಂಗಳೂರಿನಲ್ಲಿ ಮಾತನಾಡಿದ ಅವರು, ವಿಧಾನಸಭೆಯಲ್ಲಿ ವಿರೋಧ ಪಕ್ಷದ ಸಿದ್ದಾಂತದ ಅರಿವಿದೆ ಎಂದು ಕಾಲೆಳೆದೆ ಅಷ್ಟೆ. ಅದು ಬಿಟ್ಟರೆ ಬೇರೇನಿಲ್ಲ ಎಂದರು.

ವಿಧಾನಸಭೆಯಲ್ಲಿನ ಆಚಾರವಿಚಾರಗಳನ್ನು ನಾನು ಪಾಲಿಸಿಕೊಂಡು ಬಂದಿದ್ದೇನೆ. ವಿದ್ಯಾರ್ಥಿ ಸಂಘಟನೆಯಲ್ಲಿಂದಲೇ ಗುರುತಿಸಿಕೊಂಡು ಬಂದಿದ್ದೇನೆ. ನಾನು ಹೊಸದಾಗಿ ಕಾಂಗ್ರೆಸ್ಸೇರಿಲ್ಲ, ಯಾರ ಪಾಠವೂ ನನಗೆ ಅಗತ್ಯವಿಲ್ಲ. ನನಗೂ ಹಾಗೂ ಗಾಂಧಿ ಕುಟುಂಬಕ್ಕೂ ಭಕ್ತಭಗವಂತನ ನಡುವಿರುವ ಸಂಬಂಧ. ನಾನು ರಾಜಕಾರಣಕ್ಕೆ ಬರುವುದಕ್ಕೂ ಮೊದಲು ಎಲ್ಲಾ ಪಕ್ಷಗಳ ಅಧ್ಯಯನ ಮಾಡಿದ್ದೇನೆ. ಕಮ್ಯೂನಿಸಂ, ಬಿಜೆಪಿ, ಆರ್ಎಸ್ಎಸ್‌, ದಳ ಎಲ್ಲಾ ಪಕ್ಷಗಳ ಬಗ್ಗೆ ತಿಳಿದಿದ್ದೇನೆ. ಅಲ್ಲದೇ, ಮುಸ್ಲಿಂ ಸಮಾವೇಶದಲ್ಲೂ ಭಾಗಿಯಾಗಿದ್ದೇನೆ. ಅವರ ಶಿಸ್ತಿಗೆ ನಾನು ಬೆರಗಾಗಿದ್ದೇನೆ ಎಂದು ಹೇಳಿದರು.

ನಾನು ಕಾಂಗ್ರೆಸ್ಪಕ್ಷದಲ್ಲಿ ಇದ್ದೇನೆ ಎಂದ ಮಾತ್ರಕ್ಕೆ ನನ್ನ ಧರ್ಮವನ್ನು ನಾನು ಬಿಡುವುದಿಲ್ಲ. ನನ್ನ ಧರ್ಮದ ಜೊತೆಗೆ ಇತರ ಧರ್ಮಗಳ ಬಗ್ಗೆಯೂ ನನಗೆ ನಂಬಿಕೆ ಇದೆ. ಇವೆಲ್ಲಕ್ಕಿಂತಲೂ ಮಾನವ ಧರ್ಮದ ಮೇಲೆ ನನಗೆ ಹೆಚ್ಚಿನ ನಂಬಿಕೆ ಇದೆ ಎಂದು ತಿಳಿಸಿದರು.

ಯಾರೇ ಆಗಲಿ ನನ್ನಿಂದ ನೋವಾಗಿದ್ದರೆ ಕ್ಷಮೆ ಕೇಳಲು ಸಿದ್ದ. ಎಲ್ಲರ ಬಳಿಯೂ ನಾನು ಕ್ಷಮೆ ಕೇಳುತ್ತೇನೆ. ಒಂದು ವಿಚಾರ ಸ್ಪಷ್ಟ ಇರಲಿ, ಯಾರೂ ನನ್ನನ್ನು ಪ್ರಶ್ನೆ ಮಾಡಲಿಲ್ಲ. ಹೈಕಮಾಂಡ್ಕೂಡ ಪ್ರಶ್ನಿಸಿಲ್ಲ. ಇಲ್ಲಿಗೆ ವಿಚಾರ ಮುಗಿಸೋಣ ಎಂದರು.

Scroll to Top