ಮಂಗಳೂರು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯಿಂದ ಪಡಿತರ ಅಂಗಡಿಗಳಿಗೆ ಭೇಟಿ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 27.  ಕರ್ನಾಟಕ ಸರ್ಕಾರದ ಗ್ಯಾರೆಂಟಿ ಯೋಜನೆಗಳು ಅನುಷ್ಠಾನಗೊಂಡಿದ್ದು, 5 ಗ್ಯಾರಂಟಿ ಯೋಜನೆಗಳಲ್ಲಿ ಪ್ರಮುಖ ಯೋಜನೆಯಾದ ಅನ್ನಭಾಗ್ಯ ಯೋಜನೆಯು ಸರ್ಮಪಕವಾಗಿ ಅನುಷ್ಟಾನಗೊಳ್ಳುತ್ತಿರುವ ಬಗ್ಗೆ ಮಂಗಳೂರು ತಾಲೂಕು ಮಟ್ಟದ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಸುರೇಂದ್ರ ಕಂಬಳಿ ನೇತೃತ್ವದಲ್ಲಿ ನಾಗೂರಿ, ಅಡ್ಯಾರ್, ಮಲ್ಲೂರು, ಬೊಂಡಂತಿಲ, ನೀರುಮಾರ್ಗ, ಮೇರ್ಲಪದವು, ಪೆರ್ಮಂಕಿ ಉಳಾಯಿಬೆಟ್ಟು ಮತ್ತಿತರ ಕಡೆ ಪಡಿತರ ಅಂಗಡಿಗಳಿಗೆ ಭೇಟಿ ನೀಡಲಾಯಿತು.
ನ್ಯಾಯಬೆಲೆ ಅಂಗಡಿಗಳಲ್ಲಿ ಸ್ವಚ್ಚತೆ ಕಾಪಾಡುವಂತೆ, ನ್ಯಾಯಬೆಲೆ ಅಂಗಡಿಗಳಲ್ಲಿ ಫಲಕ ಅಳವಡಿಸುವಂತೆ, ನಿರ್ದಿಷ್ಟ ಅಂಗಡಿಯ ಪಡಿತರ ಚೀಟಿದಾರರಿಗೆ ಮೊದಲು ಪಡಿತರ ನೀಡಿ ನಂತರ ಇತರ ಅಂಗಡಿಗಳ ಪಡಿತರ ಚೀಟಿಗಳಿಗೆ ಪಡಿತರ ನೀಡುವಂತೆ ಮತ್ತು ಅಳತೆ ಮಾಪಕವನ್ನು ಸರ್ಮಪಕವಾಗಿ ನಿರ್ವಹಿಸುವಂತೆ, ಸಲಹೆ ಸೂಚನೆಗಳನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ತಾಲೂಕು ಆಹಾರ ನಿರೀಕ್ಷಕ ಪ್ರಸನ್ನ ಪಕ್ಕಳ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಾದ ಅಲ್‍ ಸ್ಟನ್, ಶಾಂತಲಾ ಗಟ್ಟಿ, ತಾಲೂಕು ಸಮಿತಿ ಸದಸ್ಯರಾದ ಡಿ.ಎಂ ಮುಸ್ತಫ, ನವಾಝ್ ಉಳಾಯಿಬೆಟ್ಟು, ರಿತೇಸ್ ಅಂಚನ್, ನೀತಾ ಡಿ ಸೋಜಾ, ವಿದ್ಯಾ, ಜಯಂತಿ ಮೊದಲಾದವರು ಉಪಸ್ಥಿತರಿದ್ದರು.

Scroll to Top