(ನ್ಯೂಸ್ ಕಡಬ) newskadaba.com ಜೂ.17. ನಿರಂತರವಾಗಿ ಸುರಿಯುತ್ತಿರುವ ಮಹಾಮಳೆಗೆ ಮಂಗಳೂರು ಜನ ತತ್ತರಿಸಿ ಹೋಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಹಲವು ಕಡೆ ಭೂಕುಸಿತ ಉಂಟಾಗಿ ಮನೆಗಳು ಹಾನಿಗೊಳಗಾಗಿದೆ. ಸದ್ಯ, ಮಂಗಳೂರು ಸಮೀಪದ ಕಣ್ಣೂರಿನ ದಯಂಬು ಎಂಬಲ್ಲಿ ಗುಡ್ಡ ಕುಸಿತ ಉಂಟಾಗಿ ಕುಟುಂಬವೊಂದು ಕೂದಲೆಲೆ ಅಂತರದಲ್ಲಿ ಪಾರಾಗಿರುವ ಕುರಿತು ವರದಿಯಾಗಿದೆ.
ಗುಡ್ಡದ ಕೆಳಭಾಗದಲ್ಲಿಯೇ ಮನೆ ಇದ್ದು, ಕುಟುಂಬದವರು ಗುಡ್ಡ ಕುಸಿಯುತ್ತಿರುವ ಶಬ್ದ ಕೇಳಿ ಮನೆಯಿಂದ ಓಡಿ ಹೋಗಿ ಪ್ರಾಣ ಉಳಿಸಿಕೊಂಡಿದ್ದಾರೆ. ಭಾರೀ ಮಳೆಯಿಂದ ಮಣ್ಣು ಸಡಿಲಗೊಂಡು ಗುಡ್ಡ ಕುಸಿತ ಉಂಟಾಗಿದ್ದು, ಗುಡ್ಡದ ಕೆಳಭಾಗದಲ್ಲಿಯೇ ಮನೆ ಇದ್ದಿದ್ದರಿಂದ ಮನೆಯ ಹಿಂಬದಿಯ ಗೋಡೆಯನ್ನು ಸೀಳಿ ಮನೆಯೊಳಗೆ ಮಣ್ಣು ಮಿಶ್ರಿತ ನೀರು ನುಗ್ಗಿದೆ.