
(ನ್ಯೂಸ್ ಕಡಬ) newskadaba.com ಕಡಬ, ಜೂ. 18. ಮೆಸ್ಕಾಂ ಉಪ ವಿಭಾಗದ ಮೆಸ್ಕಾಂ ಜನ ಸಂಪರ್ಕ ಸಭೆಯು ಮಂಗಳವಾರದಂದು ಮೆಸ್ಕಾಂ ಅಧೀಕ್ಷಕ ಇಂಜಿನಿಯರ್ ಕೃಷ್ಣರಾಜ್ ನೇತೃತ್ವದಲ್ಲಿ ನಡೆಯಿತು. ಸಭೆಯಲ್ಲಿ ಪದೇ ಪದೇ ಕೈಕೊಡುತ್ತಿರುವ ವಿದ್ಯುತ್ ಸಮಸ್ಯೆಗೆ ವಿದ್ಯುತ್ ಲೈನಿನ ಸುತ್ತಮುತ್ತ ಇರುವ ಮರದ ಕೊಂಬೆ, ಗೆಲ್ಲುಗಳು ಕೂಡ ಒಂದು ಕಾರಣವಾಗಿದ್ದು, ಕೂಡಲೇ ಮರದ ಗೆಲ್ಲುಗಳನ್ನು ಕತ್ತರಿಸುವಂತೆ ಗ್ರಾಹಕರು ಮೆಸ್ಕಾಂ ಇಂಜಿನಿಯರ್ಗಳಿಗೆ ಸೂಚನೆ ನೀಡಿದ್ದಾರೆ.

ಗ್ರಾಹಕರ ಪ್ರಶ್ನೆಗೆ ಉತ್ತರಿಸಿದ ಮೆಸ್ಕಾಂನ ಅಧೀಕ್ಷಕರು ಗಾಳಿ ಮಳೆಗೆ ಕೆಲವು ಕಡೆ ವಿದ್ಯುತ್ ಲೈನಿನ ಮೇಲೆ ಮರದ ಗೆಲ್ಲುಗಳು ಬಿದ್ದು ಆಗಾಗ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುತ್ತಿದೆ. ಈ ಬಗ್ಗೆ ಆಯಾಯ ವಿಭಾಗದಲ್ಲಿ ಮೆಸ್ಕಾಂ ಇಂಜಿನಿಯರ್ಗಳು ಇಂತಹ ಸಮಸ್ಯೆಗಳನ್ನು ಖುದ್ದಾಗಿ ನಿಂತು ಸರಿಪಡಿಸಬೇಕು ಎಂದು ಹೇಳಿದರು.
ಸಭೆಯಲ್ಲಿದ್ದ ಜೆಡಿಎಸ್ ಮುಖಂಡ ಸೈಯದ್ ಮೀರಾ ಸಾಹೇಬ್ ಅವರು ಮಾತನಾಡಿ, ಮರ್ದಾಳದಿಂದ ಸುಬ್ರಹ್ಮಣ್ಯದವರೆಗೆ ರಾಜ್ಯ ಹೆದ್ದಾರಿಯಲ್ಲಿ ಆಗಾಗ ಮರಗಳು ವಿದ್ಯುತ್ ಲೈನಿನ ಮೇಲೆ ಬಿದ್ದು ವಿದ್ಯುತ್ ಸಂಚಾರದಲ್ಲಿ ವ್ಯತ್ಯಯ ಮತ್ತು ಮೆಸ್ಕಾಂಗೆ ಅಪಾರ ನಷ್ಟವನ್ನು ಉಂಟು ಮಾಡುತ್ತಿದೆ, ಹೀಗಾಗಿ ಈ ಮಾರ್ಗದಲ್ಲಿ ಅಂಡರ್ ಗ್ರೌಂಡ್ ಕೇಬಲ್ ಅಳವಡಿಸಿ ಮತ್ತು ಕಡಬ ಕಾಲೇಜು ರಸ್ತೆಯಲ್ಲಿ ಹಳೆಯ ತಂತಿಗಳನ್ನು ಬದಲಾಯಿಸಬೇಕು ಎಂದು ಸಲಹೆ ನೀಡಿದರು.
ಕಾಂಗ್ರೆಸ್ ಮುಖಂಡ ಸತೀಶ್ ನ್ಯಾಕ್ ಮೇಲಿನ ಮನೆ ಅವರು ಮಾತನಾಡಿ, ಕಡಬ ಸಿಟಿ ಫೀಡರನ್ನು ದಾಮೋಡಿ-ಮುಳಿಮಜಲು, ಕೋಡಿಬೈಲುವರೆಗೆ ವಿಸ್ತರಿಸಬೇಕು ಎಂದು ಒತ್ತಾಯಿಸಿದರು. ಮತ್ತೋರ್ವ ಮುಖಂಡ ಅಭಿಲಾಷ್ ಮಾತನಾಡಿ, ಮುಖ್ಯ ಮಾರ್ಗದ ವಿದ್ಯುತ್ ಸರಬರಾಜಿನಲ್ಲಿ ಆಗಾಗ ಸಮಸ್ಯೆ ಉಂಟಾಗುತ್ತಿದ್ದು, ಸುಳ್ಯ, ಪುತ್ತೂರು, ಕಡಬಕ್ಕೆ ವಿದ್ಯುತ್ ದುರಸ್ತಿ ಮಾಡುವ ಒಂದು ತಂಡ ಮಾತ್ರ ಇದೆ ಎಂದು ಮಾಹಿತಿ ಇದೆ. ಇದರಿಂದ ದುರಸ್ತಿ ಮಾಡುವಾಗ ತಡವಾಗುತ್ತದೆ ಮತ್ತು ಕೆಟ್ಟು ಹೋದಲ್ಲಿಗೆ ವಿದ್ಯುತ್ ಪರಿವರ್ತಕಗಳನ್ನು ಸಮಯಕ್ಕೆ ಸರಿಯಾಗಿ ಒದಗಿಸಿದರೆ ಕೆಲವು ಸಮಸ್ಯೆಗಳು ನಿವಾರಣೆಯಾಗುತ್ತದೆ ಎಂದು ಹೇಳಿದರು. ಮ್ಯಾಥ್ಯೂ ಟಿ.ಎಂ. ಅವರು ಮಾತನಾಡಿ, ಕಡಬ ಸಿಟಿ ಫೀಡರನ್ನು ಕಡಬದ ಸಮೀಪದ ಗ್ರಾಮ ಕುಟ್ರುಪಾಡಿಗೂ ವಿಸ್ತರಿಸಬೇಕೆಂದರು

ವಿದ್ಯುತ್ ಕಂಬ ಸ್ಥಳಾಂತರಕ್ಕೆ ಶುಲ್ಕ, ಆಕ್ಷೇಪ:
ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಮಾತನಾಡಿ, ಮೆಸ್ಕಾಂ ಇಲಾಖೆ ಲೋಕೋಪಯೋಗಿ ರಸ್ತೆ ಬದಿಯಲ್ಲಿಯೇ ವಿದ್ಯುತ್ ಕಂಬಗಳನ್ನು ಹಾಕಲಾಗಿದೆ. ಆಕಸ್ಮಾತ್ ವಾಹನಗಳು ವಿದ್ಯುತ್ ಕಂಬಗಳಿಗೆ ಡಿಕ್ಕಿಯಾದರೆ, ಅಪಘಾತ ಆದ ವಾಹನದವರಿಂದಲೇ ಕಂಬ ಹಾಕಲು ಶುಲ್ಕ ಕಟ್ಟಿಸಿಕೊಳ್ಳಲಾಗುತ್ತಿದೆ. ಇದನ್ನು ಕೂಡಲೇ ನಿಲ್ಲಿಸಬೇಕು. ಮೆಸ್ಕಾಂನವರು ಮೊದಲು ರಸ್ತೆ ಅಂಚಿನಿಂದ ಸ್ವಲ್ಪ ದೂರದಲ್ಲಿ ಕಂಬ ಹಾಕಬೇಕು. ಈ ವಿಚಾರವನ್ನು ಜಿಲ್ಲಾ ಮಟ್ಟದ ಸಭೆಯಲ್ಲಿಯೂ ಪ್ರಸ್ತಾಪ ಮಾಡಿದ್ದೇನೆ ಎಂದು ಹೇಳಿದರು.
ಸಭೆಯಲ್ಲಿ ಪ್ರಭಾರ ಕಾರ್ಯನಿರ್ವಾಹಕ ಇಂಜಿನಿಯರ್ ರಾಮಚಂದ್ರ ಎ, ಕಡಬ ಮೆಸ್ಕಾಂ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸಜಿ ಕುಮಾರ್, ಕಡಬ ಶಾಖಾಧಿಕಾರಿ ಸತ್ಯನಾರಾಯಣ, ನೆಲ್ಯಾಡಿ ಶಾಖಾಧಿಕಾರಿ ಮನೋಜ್ ಕುಮಾರ್ (ಪ್ರಭಾರ), ಆಲಂಕಾರು ಶಾಖಾಧಿಕಾರಿ ಪ್ರೇಮ್ ಕುಮಾರ್, ಬಿಳಿನೆಲೆ ಶಾಖಾಧಿಕಾರಿ ಪ್ರಶಾಂತ್, ಕಡಬ ಸರ್ವಿಸ್ ಸ್ಟೇಷನ್ ಅಧಿಕಾರಿ ವಸಂತಕುಮಾರ್, ತಾಂತ್ರಿಕ ಸಹಾಯಕ ಇಂಜಿನಿಯರ್ ಅನ್ನಮ್ಮ ಸಹಾಯಕ ಲೆಕ್ಕಾಧಿಕಾರಿ ಕೃಷ್ಣಮೂರ್ತಿ ಮೊದಲಾವರು ಉಪಸ್ಥಿತರಿದ್ದರು.

