”ಮನ್ ಕಿ ಬಾತ್” ನಲ್ಲಿ ಡಿಜಿಟಲ್ ಅರೆಸ್ಟ್ ಬಗ್ಗೆ ಪ್ರಧಾನಿಮೋದಿ ಸಲಹೆ



(ನ್ಯೂಸ್ ಕಡಬ) newskadaba.com ಅ.28, ನವದೆಹಲಿ: ದೂರವಾಣಿ ಮೂಲಕ ಕರೆ ಮಾಡಿ ‘ನಿಮ್ಮನ್ನು ಡಿಜಿಟಲ್‌ ಅರೆಸ್ಟ್‌ ಮಾಡಲಾಗಿದೆ’ ಎಂದು ಹೆದರಿಸಿ ಬ್ಯಾಂಕ್‌ ಖಾತೆಯಲ್ಲಿರುವ ಹಣವನ್ನು ದೋಚುವ ದಂಧೆ ದೇಶಾದ್ಯಂತ ವ್ಯಾಪಿಸಿರುವಾಗಲೇ, ಅದರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಜನಸಾಮಾನ್ಯರು ಎಚ್ಚೆತ್ತುಕೊಳ್ಳುವಂತೆ ಸಲಹೆ ನೀಡಿದ್ದಾರೆ.







ಈ ರೀತಿಯ ದಂಧೆಗಳಿಂದ ಪಾರಾಗಲು ಪ್ರಧಾನಿಯವರು ದೇಶವಾಸಿಗಳಿಗೆ ಮೂರು ಸಲಹೆಗಳನ್ನು ನೀಡಿದ್ದಾರೆ. ಕೆಲ ತಿಂಗಳ ಹಿಂದೆ ಸೈಬರ್‌ ವಂಚಕರು ವಿಜಯಪುರ ಸಂತೋಷ್‌ ಪಾಟೀಲ್‌ಗೆ ಕರೆ ಮಾಡಿ ಬೆದರಿಕೆ ಹಾಕಿದ್ದರು. ಆದರೆ ಅದನ್ನು ಅತ್ಯಂತ ಜಾಣತನದಿಂದಲೇ ನಿರ್ವಹಿಸಿದ್ದ ಪಾಟೀಲ್‌ ಆ ಜಾಲದಿಂದ ಪಾರಾಗಿದ್ದರು. ಡಿಜಿಟಲ್‌ ಅರೆಸ್ಟ್‌ ದಂಧೆಯಲ್ಲಿ ನಿರತರಾಗಿರುವ ವಂಚಕರು ಜನರ ಖಾಸಗಿ ಮಾಹಿತಿಯನ್ನು ಮೊದಲು ಪಡೆದುಕೊಳ್ಳುತ್ತಾರೆ. ಎರಡನೇ ಹಂತದಲ್ಲಿ ಸರ್ಕಾರಿ ಕಚೇರಿ, ಕಾನೂನಿನ ಸೆಕ್ಷನ್‌ಗಳನ್ನು ಹೇಳಿ ಭಯದ ವಾತಾವರಣ ಸೃಷ್ಟಿಸುತ್ತಾರೆ. ಫೋನ್‌ನಲ್ಲೇ ಹೆದರಿಸುತ್ತಾರೆ. ಅವರ ಜತೆಗಿನ ಸಂಭಾಷಣೆ ವೇಳೆ ನಿಮಗೆ ಯೋಚನೆ ಮಾಡಲಿಕ್ಕೂ ಸಮಯವಾಗುವುದಿಲ್ಲ. ಮೂರನೇ ಹಂತದಲ್ಲಿ ಸಮಯದ ಒತ್ತಡವನ್ನು ಬಳಸಿ ಮೋಸ ಮಾಡುತ್ತಾರೆ ಎಂದು ಪ್ರಧಾನಿ ವಿವರಿಸಿದರು.






“ಕರೆ ಬರುತ್ತಿದ್ದಂತೆ ಗಾಬರಿಯಾಗಬೇಡಿ. ಆರಾಮವಾಗಿರಿ, ಆತುರದ ಕ್ರಮಗಳನ್ನು ತೆಗೆದುಕೊಳ್ಳಬೇಡಿ. ಯಾವುದೇ ಕಾರಣಕ್ಕೂ ವೈಯಕ್ತಿಕ ಮಾಹಿತಿಗಳನ್ನು ನೀಡಲು ಹೋಗಬೇಡಿ. ಸಾಧ್ಯವಾದರೆ ಸ್ಕ್ರೀನ್‌ಶಾಟ್‌ ತೆಗೆದುಕೊಳ್ಳಿ. ರೆಕಾರ್ಡ್‌ ಮಾಡಿಕೊಳ್ಳಿ. ಇದು ಕಾಯಿರಿ ಎಂಬ ಮೊದಲ ಹಂತ. 2ನೇ ಹಂತ- ಯೋಚಿಸಿ. ಯಾವುದೇ ತನಿಖಾ ಸಂಸ್ಥೆ ಕೂಡ ಈ ರೀತಿ ಫೋನ್‌ ಮಾಡಿ ವಿಚಾರಣೆ ನಡೆಸುವುದಿಲ್ಲ ಅಥವಾ ವಿಡಿಯೋ ಕಾಲ್‌ ಮೂಲಕ ಹಣಕ್ಕೂ ಬೇಡಿಕೆ ಇಡುವುದಿಲ್ಲ. ಮೂರನೇ ಹಂತ- ಕ್ರಮ ಜರುಗಿಸಿ. ರಾಷ್ಟ್ರೀಯ ಸೈಬರ್‌ ಹೆಲ್ಪ್‌ಲೈನ್‌ 1930ಗೆ ಕರೆ ಮಾಡಿ, ಇಂತಹ ಘಟನೆಗಳ ಕುರಿತು ವರದಿ ಮಾಡಿ. ಕುಟುಂಬ ಸದಸ್ಯರು ಹಾಗೂ ಪೊಲೀಸರಿಗೆ ತಿಳಿಸಿ” ಎಂದು ಮೋದಿ ತಿಳಿಸಿದ್ದಾರೆ.

error: Content is protected !!
Scroll to Top