ಮೈಸೂರು ದಸರಾ: ‘ಪ್ರಥಮ ಪ್ರಜೆ’ ಇಲ್ಲದೇ ನಡೆಯಲಿದೆ ಜಂಬೂ ಸವಾರಿ

(ನ್ಯೂಸ್ ಕಡಬ) newskadaba.com ಅ. 12. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾ ಹಬ್ಬದ ಸಂಭ್ರಮ ಕಳೆಗಟ್ಟುತ್ತಿದ್ದು, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಈಗಾಗಲೇ ಜನರ ಮನಸ್ಸನ್ನು ಸೆಳೆದಿದೆ. ಇಂದು ದಸರಾ ಹಬ್ಬದ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿಗೆ ಕ್ಷಣಗಣನೆ ಆರಂಭವಾಗಿದ್ದು, ಇದೇ ಮೊದಲ ಬಾರಿಗೆ ಮೈಸೂರಿನ ‘ಪ್ರಥಮ ಪ್ರಜೆ’ ಮೇಯರ್ ಇಲ್ಲದೇ ಜಂಬೂ ಸವಾರಿ ನಡೆಯಲಿದೆ. ಶನಿವಾರದಂದು (ಇಂದು) ಅರಮನೆ ಆವರಣದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಸಾಹಿತಿ ಡಾ. ಹಂಪನಾ ಅವರು ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಅದ್ದೂರಿ ಜಂಬೂ ಸವಾರಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

ಪ್ರತೀವರ್ಷ ಜಂಜೂ ಸವಾರಿ ಮೆರವಣಿಗೆಯಲ್ಲಿ ಮೈಸೂರಿನ ಪ್ರಥಮ ಪ್ರಜೆಯಾದ ಮಹಾನಗರ ಪಾಲಿಕೆಯ ಮಹಾಪೌರರರಿಗೆ ಕುದುರೆ ಸವಾರಿ ಮಾಡುವ ಭಾಗ್ಯ ದೊರೆಯುತ್ತಿತ್ತು. ಆದರೆ, ಈ ಬಾರಿ ಮೈಸೂರು ಮಹಾನಗರ ಪಾಲಿಕೆಯ ಅಧಿಕಾರದ ಅವಧಿ ಮುಗಿದು ಬರೋಬ್ಬರಿ 11 ತಿಂಗಳು ಕಳೆದರೂ ರಾಜ್ಯ ಸರಕಾರ ಚುನಾವಣೆ ನಡೆಸದೇ ಇದ್ದುದರಿಂದ ಮೈಸೂರಿನ ಪ್ರಥಮ ಪ್ರಜೆ ಆಯ್ಕೆಯಾಗಿಲ್ಲ. ಹೀಗಾಗಿ ಕುದುರೆ ಸವಾರಿ ಭಾಗ್ಯ, ಗಜಪಡೆಗೆ ಪುಷ್ಪಾರ್ಚನೆ ಮಾಡುವ ಅವಕಾಶ ಇಲ್ಲದಂತಾಗಿದೆ.

ಮೇಯರ್ ಆಗಿದ್ದವರು ಪುಷ್ಪಾರ್ಚನೆ ಮಾಡಿ ಕುದುರೆ ಸವಾರಿ ಮೂಲಕ ಜಂಬೂಸವಾರಿ ಮೆರವಣಿಗೆಯಲ್ಲಿ ಜನಸ್ತೋಮಕ್ಕೆ ಕೈ ಬೀಸುತ್ತಾ ಸಾಗುತ್ತಿದ್ದರು. ಆದರೆ ಈ ಬಾರಿ ಪಾಲಿಕೆಯಲ್ಲಿ ಚುನಾಯಿತ ಪ್ರತಿನಿಧಿಗಳು ಇಲ್ಲದೆ ಪ್ರಾದೇಶಿಕ ಆಯುಕ್ತರೇ ಆಡಳಿತಾಧಿಕಾರಿಯಾಗಿದ್ದು, ಮೇಯರ್ ಇಲ್ಲದೆ ದಸರಾ ನಡೆಯುವಂತಾಗಿದೆ. ಈ ಬಾರಿ ಯುವ ದಸರಾ, ರೈತ ದಸರಾ, ಮಕ್ಕಳ ದಸರಾ ಜನಮನ ಸೆಳೆದಿದ್ದು, ಜಂಬೂ ಸವಾರಿ ಕೂಡ ಅದ್ದೂರಿಯಾಗಿ ನಡೆಯಲಿದೆ.

error: Content is protected !!

Join the Group

Join WhatsApp Group