ಉಪ್ಪಿನಂಗಡಿ: ವಿದ್ಯಾರ್ಥಿಗೆ ಹಲ್ಲೆ ಆರೋಪ – ಶಿಕ್ಷಕನ ವಿರುದ್ದ ದೂರು ದಾಖಲು

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಸೆ. 14. ಶಾಲೆಯಲ್ಲಿ ವಿದ್ಯಾರ್ಥಿಯೋರ್ವನ ಮೇಲೆ ದ್ವೇಷದ ಭಾವನೆಯಿಂದ ಸತತ ಮೂರು ದಿನ ಶಿಕ್ಷಕರೋರ್ವರು ಬೆತ್ತದಿಂದ ಹಲ್ಲೆ ನಡೆಸಿದ ಪರಿಣಾಮ ವಿದ್ಯಾರ್ಥಿ ಆಸ್ಪತ್ರೆಯಲ್ಲಿ ದಾಖಲಾದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.

ಹಲ್ಲೆಗೆ ಒಳಗಾದ ವಿದ್ಯಾರ್ಥಿ ಬೆಳ್ತಂಗಡಿ ತಾಲೂಕು ಉರುವಾಲು ನಿವಾಸಿಯಾಗಿದ್ದು, ಪದ್ಮುಂಜ ಸರಕಾರಿ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿಯಾಗಿದ್ದಾನೆ. ಹಲ್ಲೆ ನಡೆಸಿರುವ ಆರೋಪಿ ಇಂಗ್ಲೀಷ್ ಶಿಕ್ಷಕ ಅನಂತ ಕುಮಾರ್ ಎಂದು ಆಪಾದಿಸಲಾಗಿದೆ. ದೂರಿನ ಪ್ರಕಾರ ಆರೋಪಿ ಶಿಕ್ಷಕ ವಿದ್ಯಾರ್ಥಿಗೆ ಬೆತ್ತದಿಂದ ಸೆ. 9,10,11ರ 3 ದಿನಗಳಿಂದ ಹಲ್ಲೆ ನಡೆಸಿದ್ದು, ಈ ವಿಚಾರವನ್ನು ವಿದ್ಯಾರ್ಥಿ ಯಾರಿಗೂ ತಿಳಿಸದೇ ಸುಮ್ಮನಿದ್ದುದಾಗಿಯೂ, ಬಳಿಕ ನೋವು ಜಾಸ್ತಿಯಾದ ಕಾರಣ ಮನೆಯವರಿಗೆ ಈತ ವಿಚಾರ ತಿಳಿಸಿದ್ದಾನೆ. ಆ ಬಳಿಕ ಮನೆಯವರು ವಿದ್ಯಾರ್ಥಿಯನ್ನು ಬೆಳ್ತಂಗಡಿ ಆಸ್ಪತ್ರೆಗೆ ದಾಖಲಿಸಿ, ಶಿಕ್ಷಕನ ವಿರುದ್ಧ ದೂರು ನೀಡಿದ್ದಾರೆ ಎನ್ನಲಾಗಿದೆ.


ಈ ಮಧ್ಯೆ ಆರೋಪಿ ಶಿಕ್ಷಕ ಅನಂತ ಕುಮಾರ್ ತನ್ನ ಮೇಲೆ ದೌರ್ಜನ್ಯವೆಸಗಲಾಗಿದೆ ಎಂದು ಆರೋಪಿಸಿ ಆಸ್ಪತ್ರೆಗೆ ದಾಖಲಾಗಿದ್ದಾರೆಂದು ಪೊಲೀಸ್ ಮೂಲಗಳು ತಿಳಿಸಿವೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

error: Content is protected !!

Join the Group

Join WhatsApp Group