ಕಡಬ ಪರಿಸರದಲ್ಲಿ ಪದೇ ಪದೇ ಕೈಕೊಡುತ್ತಿರುವ ವಿದ್ಯುತ್ ► ಬಿಜೆಪಿ ವತಿಯಿಂದ ಮೊಂಬತ್ತಿ ಉರಿಸಿ ಕಡಬ ಮೆಸ್ಕಾಂ ಕಛೇರಿ ಎದುರು ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಕಡಬ, ಫೆ.28. ಕಡಬ ಮೆಸ್ಕಾಂ ಕಛೇರಿ ವ್ಯಾಪ್ತಿಯಲ್ಲಿ ಕಳೆದ ಕೆಲವು ತಿಂಗಳಿನಿಂದ ಗುಣಮಟ್ಟದ ವಿದ್ಯುತ್ ಪೂರೈಕೆಯಾಗದೆ ರೈತಾಪಿ ವರ್ಗ , ವಿದ್ಯಾರ್ಥಿಗಳು ಕಂಗೆಟ್ಟಿದ್ದಾರೆ ಎಂದು ಆರೋಪಿಸಿ ಕಡಬ ಬಿಜೆಪಿ ವತಿಯಿಂದ ಕಡಬ ಪೇಟೆಯಿಂದ ಮೆಸ್ಕಾಂ ಸಬ್ ಸ್ಟೇಶನ್ ವರೆಗೆ ಮೊಂಬತ್ತಿ ಉರಿಸಿ ಮೆರವಣಿಗೆಯ ಮೂಲಕ ತೆರಳಿ ಪ್ರತಿಭಟಿಸಲಾಯಿತು.

 

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಸಮಿತಿ ಸದಸ್ಯ ಕೃಷ್ಣ ಶೆಟ್ಟಿ ಕಡಬ ಮಾತನಾಡಿ, ರಾಜ್ಯ ಕಾಂಗ್ರೆಸ್ ಅಧಿಕಾರ ವಹಿಸಿ 5 ವರ್ಷಗಳು ಪೂರ್ತಿಯಾಗುತ್ತ ಬರುತ್ತಿದ್ದರೂ ಪ್ರಣಾಳಿಕೆಯಲ್ಲಿ ರೈತರ ಅಭಿವೃದ್ದಿಯ ಬಗ್ಗೆ ನೀಡಿದ ಭರವಸೆ ಯಾವುದನ್ನೂ ಈಡೇರಿಸಿಲ್ಲ. ರೈತರ ಪಂಪುಸೆಟ್ಟುಗಳಿಗೆ ಸರಿಯಾದ ವಿದ್ಯುತ್ ನೀಡದೇ ಕೃಷಿ ನಾಶಕ್ಕೆ ಕಾಂಗ್ರೆಸ್ ಕಾರಣವಾಗಿದೆ. ದಿನದ 24 ಬದಲು ಕನಿಷ್ಟ 12 ಗಂಟೆಯಾದರೂ ಗುಣಮಟ್ಟದ ವಿದ್ಯುತ್ ನೀಡದಿರುವುದು ದುರದುಷ್ಟಕರ. ಬಿಜೆಪಿ ಸರಕಾರವಿದ್ದಾಗ 15 ಗಂಟೆ ಗುಣಮಟ್ಟದ ವಿದ್ಯುತ್ ನೀಡುವ ಸಂದರ್ಭದಲ್ಲಿ ಕಡಬದ ಕಾಂಗ್ರೆಸ್ಸಿಗರು ಟೀಕಿಸುತ್ತಿದ್ದರು. ಆದರೆ ಈಗ ಏಕೆ ಮೌನವಾಗಿದ್ದಾರೆ ಎಂದು ಪ್ರಶ್ನಿಸಿದ ಅವರು, ಬಿಜೆಪಿ ಸರಕಾರವಿದ್ದಾಗ ರೈತರಿಗೆ ಗುಣಮಟ್ಟದ ವಿದ್ಯುತ್ ಉಚಿತವಾಗಿ ನೀಡಿ ರೈತರ ಶ್ರೇಯೋಭಿವೃದ್ದಿಯಲ್ಲಿ ತೊಡಗಿತ್ತು. ಆದರೆ ಈಗಿರುವ ಸರಕಾರ ಬಂಡವಾಳ ಶಾಹಿಗಳ ಹಿಂದೆ ಬಿದ್ದು ರೈತಾಪಿ ವರ್ಗವನ್ನು ಕಡೆಗಣಿಸಿದ್ದಾರೆ ಎಂದರು. ವ್ಯವಹಾರಿಕ ಕೇಂದ್ರವಾಗಿರುವ ಕಡಬದಲ್ಲಿ ಸಿಟಿ ಫೀಡರ್‍ಗೆ ನಿರಂತರ ಗುಣಮಟ್ಟದ ವಿದ್ಯುತ್ ಪೂರೈಕೆಯಾಗದೆ ಕಡಬದ ವ್ಯವಹಾರಗಳು ಸ್ಥಗಿತಗೊಂಡಿದೆ. ಸಮಸ್ಯೆಗಳನ್ನು ಪರಿಹರಿಸುವಲ್ಲಿ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಕಡಬ ಶಕ್ತಿ ಕೇಂದ್ರದ ಅಧ್ಯಕ್ಷರಾದ ವಾಡ್ಯಪ್ಪ ಗೌಡ ಎರ್ಮಾಯಿಲ್, ಕಿಶೋರ್ ಶಿರಾಡಿ, ಪುಲಸ್ತ್ಯಾ ರೈ ಮೊದಲಾದವರು ಮಾತನಾಡಿ ಸಿದ್ದರಾಮಯ್ಯ ಹಾಗೂ ಇಂಧನ ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇಂದು ಸಾಂಕೇತಿಕವಾಗಿ ಪ್ರತಿಭಟನೆ ನಡೆಸಲಾಯಿತಾದರೂ, ಮೆಸ್ಕಾಂನ ಉನ್ನತ ಮಟ್ಟದ ಅಧಿಕಾರಿಗಳು ಸಮಸ್ಯೆಗೆ ಪರಿಹಾರ ನೀಡದೆ ಇದ್ದಲ್ಲಿ ಉಗ್ರ ರೂಪದ ಪ್ರತಿಭಟನೆ ನಡೆಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.

error: Content is protected !!

Join the Group

Join WhatsApp Group