ಕಡಬ: ವಿ.ಹಿಂ.ಪ. ವತಿಯಿಂದ ಮೊಸರು ಕುಡಿಕೆ ಉತ್ಸವ- ಶೋಭಾಯಾತ್ರೆ ಧಾರ್ಮಿಕ ಸಭೆ

(ನ್ಯೂಸ್ ಕಡಬ) newskadaba.com ಕಡಬ, ಸೆ. 05. ವಿಶ್ವಹಿಂದೂ ಪರಿಷದ್ ಬಜರಂಗದಳ ಮಾತೃಶಕ್ತಿ, ದುರ್ಗಾವಾಹಿನಿ ಕಡಬ ಪ್ರಖಂಡ ವತಿಯಿಂದ ವಿಹಿಂಪ ಸ್ಥಾಪನಾ ದಿನಾಚರಣೆಯ ಅಂಗವಾಗಿ ಮೊಸರು ಕುಡಿಕೆ ಉತ್ಸವ, ಶೋಭಾಯಾತ್ರೆ, ಧಾರ್ಮಿಕ ಸಭೆಯು ಭಾನುವಾರದಂದು  ನಡೆಯಿತು.

ಶ್ರೀ ದುರ್ಗಾಂಬಿಕಾ ದೇವಸ್ಥಾನದ ಆಡಳಿತ ಅಧಿಕಾರಿ ಗೋಪಾಲ್ ಕೆ. ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಡಬ ಶ್ರೀಕಂಠ ಸ್ವಾಮಿ ಶ್ರೀ ಮಹಾಗಣಪತಿ ದೇವಸ್ಥಾನದ ಜೀರ್ಣೊದ್ದಾರ ಸಮಿತಿ ಅಧ್ಯಕ್ಷ ಸತೀಶ್ ನ್ಯಾಕ್ ಮೇಲಿನಮನೆ ಅತಿಥಿಯಾಗಿದ್ದರು. ವಿಹಿಂಪ ಕಡಬ ಪ್ರಖಂಡ ಗೌರವಾಧ್ಯಕ್ಷ ವಾಸುದೇವ ಭಟ್ ಕಡ್ಯ, ಅಧ್ಯಕ್ಷ ರಾಧಾಕೃಷ್ಣ ಕೋಲ್ಪೆ, ಕಾರ್ಯದರ್ಶಿ ಜಯಂತ ಕಲ್ಲುಗುಡ್ಡೆ, ಮಾತೃಶಕ್ತಿ ಸಂಯೋಜಕಿ ದೇವಕಿ ಪೂವಳ, ಮುಖಂಡರಾದ ಪ್ರಮೋದ್ ರೈ ನಂದುಗುರಿ, ಅಶ್ವಿತ್ ಕಂಡಿಗ, ಗೀತಾ ಕೇವಳ, ಕಿಶನ್ ಕುಮಾರ್ ರೈ ಪೆರಿಯಡ್ಕ ಮೊದಲಾದವರು ಇದ್ದರು. ವೀಣಾ ಕೊಲ್ಲೆಸಾಗು ಸ್ವಾಗತಿಸಿದರು. ಸವಿತಾ  ವಂದಿಸಿದರು. ಮೈನಾ ರಾಜೇಶ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ವಠಾರದಲ್ಲಿ ಮಾತೃಶಕ್ತಿ ಮತ್ತು ದುರ್ಗಾವಾಹಿನಿ ತಂಡಗಳಿಂದ ಭಜನಾ ಕಾರ್ಯಕ್ರಮ, ಹಾಗೂ ಸಾರ್ವಜನಿಕರಿಗೆ, ಮಹಿಳೆಯರಿಗೆ ಮತ್ತು ಮಕ್ಕಳಿಗೆ ವಿವಿಧ ಸ್ವರ್ಧಾ ಕಾರ್ಯಕ್ರಮಗಳು ನಡೆಯಿತು.

ಶೋಭಾ ಯಾತ್ರೆಗೆ ಚಾಲನೆ

ಮಧ್ಯಾಹ್ನ ಸಂತೆಕಟ್ಟೆ ಬಳಿಯಿಂದ ಬಸ್ ನಿಲ್ದಾಣದವರೆಗೆ ರಸ್ತೆಯುದ್ದಕ್ಕೂ ಹಿಂದೂ ವೀರ ಯುವಕರಿಂದ ಅಟ್ಟಿ ಮಡಕೆ ಒಡೆಯುವ ಸಾಹಸಮಯ ಪ್ರದರ್ಶನ,  ಶೋಭಾಯಾತ್ರೆಯ ಉದ್ಘಾಟನೆಯನ್ನು  ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗದ  ಕಿನ್ನಿಗ ಆರ್. ರಾಮಕುಂಜ ನೆರವೇರಿಸಿದರು. ಶಾಸಕಿ ಭಾಗೀರಥಿ ಮುರುಳ್ಯ ಶುಭಹಾರೈಸಿದರು. ಶೋಭಾಯತ್ರೆ ವೇಳೆ ವೀರಗಾಸೆ ಕುಣಿತ, ದೈತ್ಯ ಗ್ರಾತ್ರದ ಆನೆ, ಸಿಂಹಗಳ ಪ್ರತಿಕೃತಿ, ರುದ್ರ ವೇಷಧಾರಿ, ಬೃಹತ್ ಬೊಂಬೆಗಳು, ಆಕರ್ಷಕ ನಾಸಿಕ್ ಬ್ಯಾಂಡ್ ಜನರಿಗೆ ವಿಶೇಷ ರಂಜನೆ ನೀಡಿತ್ತು. ಅಟ್ಟಿ ಮಡಿಕೆ ಪಂದ್ಯಾಟವನ್ನು ನಿರೂಪಕ ಸುರೇಶ್ ಪಡಿಪಂಡ ನಿರ್ವಹಿಸಿದರು.

ಬಳಿಕ ರಾತ್ರಿ  ಯೋಗಕ್ಷೇಮ ಸಂಕೀರ್ಣದ ಎದುರು ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದ  ಅಧ್ಯಕ್ಷತೆಯನ್ನು ಕೂಡೂರು ರಾಮಚಂದ್ರ ಭಟ್ ವಹಿಸಿದ್ದರು. ವಿ.ಹಿಂ.ಪ. ಕ್ಷೇತ್ರಿಯ ಧರ್ಮಪ್ರಸಾರ ಪ್ರಮುಖ್ ಸೂರ್ಯನಾರಾಯಣ  ದಿಕ್ಸೂಚಿ ಭಾಷಣ ಮಾಡಿದರು.  ಬಜರಂಗದಳ ಮಂಗಳೂರು ವಿಭಾಗ ಸಂಯೋಜಕ ಪುನೀತ್ ಅತ್ತಾವರ, ಪ್ರಮುಖರಾದ ತಿಲಕ್ ರೈ ಮುಂಡ್ರಾಡಿಗುತ್ತು, ಉದ್ಯಮಿಗಳಾದ ರಂಜಿತ್ ಪದಕಂಡ,  ಪ್ರಸಾದ್ ಎನ್ ಕೆ, ಬಲ್ಯ ಶ್ರೀ ಉಮಾಮಹೇಶ್ವರಿ ದೇವಸ್ಥಾನದ ಆಡಳಿತ ಪ್ರಮುಖ್ ರಾಮಚರಣ್ ರೈ , ಪ್ರಗತಿಪರ ಕೃಷಿಕ ಜನಾರ್ದನ ಗೌಡ ಪುತ್ತಿಲ,  ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗದ  ಕಿನ್ನಿಗ ಆರ್. ರಾಮಕುಂಜ , ವಿಹಂಪ ಜಿಲ್ಲಾ ಸಹಸಂಚಾಲಕ ಶ್ರೀಧರ ತೆಂಕಿಲ, ಮಾತೃಶಕ್ತಿ ಪ್ರಮುಖರಾದ ಗೀತಾ ಕೇವಳ, ಪ್ರೇಮಲತಾ, ದೇವಕಿ ಪೂವಲ ಮೊದಲಾದವರು  ಉಪಸ್ಥಿತರಿದ್ದರು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ತನಿಯಪ್ಪ ಕೊಡಿಕಜೆ, ಶರತ್ ರಾವ್ ಬಿಳಿನೆಲೆ ಅವರನ್ನು ಸನ್ಮಾನಿಸಲಾಯಿತು. ಅಟ್ಟಿ ಮಡಿಕೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಆಶ್ವಿತ್ ಕಂಡಿಗ ಸ್ವಾಗತಿಸಿದರು. ಜಯಂತ ಕಲ್ಲುಗುಡ್ಡೆ ವಂದಿಸಿದರು. ಪ್ರಮಿಳಾ ಲೋಕೇಶ್ ನಿರೂಪಿಸಿದರು.

error: Content is protected !!

Join the Group

Join WhatsApp Group