ಸೆಪ್ಟೆಂಬರ್ 4ರಂದು ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ವಿಚಾರಗೋಷ್ಟಿ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 03. ಬೆಂಗಳೂರಿನ ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ವತಿಯಿಂದ ಬೆಂಗಳೂರಿನ ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಅಧ್ಯಕ್ಷ ಕಾ.ತ.ಚಿಕ್ಕಣ್ಣ ಅವರ ಅಧ್ಯಕ್ಷತೆಯಲ್ಲಿ “ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ- ಮುನ್ನೋಟ” ವಿದ್ವಾಂಸರೊಂದಿಗೆ ಸಮಾಲೋಚನಾ ಗೋಷ್ಠಿಯು ಸೆಪ್ಟೆಂಬರ್ 4ರಂದು ಬುಧವಾರ ಬೆಳಗ್ಗೆ 10.30 ಗಂಟೆಗೆ ನಗರದ ಉರ್ವಸ್ಟೋರ್ ನಲ್ಲಿರುವ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯಲ್ಲಿ ನಡೆಯಲಿದೆ.

ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಕೇಂದ್ರವು, ರಾಜ್ಯ ಸರ್ಕಾರವು ಸ್ಥಾಪಿಸಿರುವ ಒಂದು ಸ್ವಾಯತ್ತ ಸಂಸ್ಥೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಡಳಿತ ವ್ಯಾಪ್ತಿಗೆ ಒಳಪಟ್ಟಿದೆ. 2012ರಲ್ಲಿ ಸ್ಥಾಪಿತವಾದ ಈ ಅಧ್ಯಯನ ಕೇಂದ್ರವು ಕನಕದಾಸರು ಮತ್ತು ಇತರೆ ಸಂತರ ಬಗ್ಗೆ ಅಧ್ಯಯನ, ಸಂಶೋಧನೆ, ಪ್ರಕಟಣೆ, ಪ್ರಸಾರ ಕಾರ್ಯಗಳನ್ನು ನಿರ್ವಹಿಸುತ್ತಾ ಬರುತ್ತಿದೆ. ಹಾಗೆಯೇ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ತೌಲನಿಕ ಸಂಶೋಧನೆಗಳನ್ನು, ಕಮ್ಮಟಗಳನ್ನು ನಡೆಸುತ್ತಿದೆ.

Also Read  ಏನೆಕಲ್ಲು : ಬೋರವೆಲ್ ನಲ್ಲಿ ನೀರು ಬಾರದಿದದ್ದಕ್ಕೆ ವ್ಯಕ್ತಿ ಆತ್ಮಹತ್ಯೆ

2024-25ನೆಯ ಸಾಲಿನ ಆಯವ್ಯಯದಲ್ಲಿ ರೂ. ಒಂದು ಕೋಟಿ ಒದಗಿಸಿ, ಕನಕದಾಸರ ಸಾಹಿತ್ಯ ಹಾಗೂ ಇತರೆ ಕೀರ್ತನಾ ಸಾಹಿತ್ಯ, ತತ್ವಪದ ಸಾಹಿತ್ಯ ಮತ್ತು ಭಕ್ತಿ ಚಳುವಳಿ ಸೇರಿದಂತೆ ಸಾಹಿತ್ಯದ ಸಂಗ್ರಹಣೆ, ಪ್ರಕಟಣೆ ಮತ್ತು ಪ್ರಸಾರ ಕಾರ್ಯವನ್ನು ಅನುಷ್ಠಾನಗೊಳಿಸುವ ಜವಾಬ್ದಾರಿಯನ್ನು ಕನಕದಾಸ ಅಧ್ಯಯನ ಕೇಂದ್ರಕ್ಕೆ ನೀಡಲಾಗಿದೆ. ಇದು ವಿಶೇಷವಾದ ಹೊಸ ಯೋಜನೆ. ಭಾರತೀಯ ತತ್ವಜ್ಞಾನದ ಹಿನ್ನೆಲೆಯಲ್ಲಿ ಕನಕದಾಸರ ಸ್ಥಾನ ಮತ್ತು ಪರಿಣಾಮಗಳನ್ನು ವಿವೇಚಿಸುವುದೂ ಸೇರಿದಂತೆ, ಪ್ರಸಕ್ತ ವರ್ಷದ ಆಯವ್ಯಯದಲ್ಲಿ ಸೂಚಿಸಿರುವಂತೆ, ತತ್ವಪದ, ಕೀರ್ತನಾ ಸಾಹಿತ್ಯ ಹಾಗೂ ಭಕ್ತಿ ಪರಂಪರೆಯ ಬಗ್ಗೆ ಸಾಹಿತ್ಯ ಸಂಗ್ರಹ, ಅಧ್ಯಯನ ಪ್ರಕಟಣೆ ಮತ್ತು ಪ್ರಸಾರ ಕಾರ್ಯವನ್ನು ಆಗುಮಾಡಲು ಹಲವಾರು ವಿದ್ವಾಂಸರ, ಸಂಶೋಧನಾಕಾರರ ಸೇವೆಯನ್ನು ಪಡೆಯಬೇಕಾಗುತ್ತದೆ. ಕನಕದಾಸ ಅಧ್ಯಯನ ಕೇಂದ್ರದ ಮುಂದಿರುವ ಈ ಅಗಾಧ ಐತಿಹಾಸಿಕ ಕಾರ್ಯವನ್ನು ಲಕ್ಷಿಸಿದರೆ, ಇದು ನಿರಂತರವಾಗಿ ಜರುಗುವ ಕಾರ್ಯಕ್ರಮವಾಗಿದೆ ಎಂದು ಬೆಂಗಳೂರಿನ ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Also Read  ಕರಾವಳಿಯಲ್ಲಿ ಮತ್ತೆ ಎರಡು ದಿನಗಳ ಕಾಲ ರಾತ್ರಿ ನಿಷೇಧಾಜ್ಞೆ ಮುಂದುವರಿಕೆ ➤ ಬೆಳಿಗ್ಗೆ 6 ರಿಂದ ಸಂಜೆ 6ರ ವರೆಗೆ ವ್ಯಾಪಾರ ಮಾಡಲು ಅವಕಾಶ

error: Content is protected !!
Scroll to Top