(ನ್ಯೂಸ್ ಕಡಬ) newskadaba.com ಬಂಟ್ವಾಳ, ಫೆ.26. ತನ್ನ ಗೆಳೆಯರ ಮದುವೆಗೆ ಒಂದು ದಿನ ಮುಂಚಿತವಾಗಿಯೇ ಹಾಜರಾಗಿ, ಮದುಮಗನಿಗೆ ಕೀಟಲೆ ಕೊಟ್ಟು ಸತಾಯಿಸುತ್ತಿದ್ದ ಯುವಕನೋರ್ವನಿಗೆ ಆತನ ಮದುವೆಗೆ ಗೆಳೆಯರೆಲ್ಲ ಸೇರಿಕೊಂಡು ಮದರಂಗಿ ಶಾಸ್ತ್ರದಿಂದ ಹಿಡಿದು ಮೂರು ದಿನಗಳ ಕಾಲ ಕೀಟಲೆ ಕೊಟ್ಟು ಖುಷಿಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ನಡೆದಿದೆ.
ಮಂಗಳೂರಿನಲ್ಲಿ ಆಂಗ್ಲ ದಿನ ಪತ್ರಿಕೆಯ ಜಾಹೀರಾತು ವಿಭಾಗದಲ್ಲಿ ಉದ್ಯೋಗದಲ್ಲಿರುವ ಬಂಟ್ವಾಳ ತಾಲೂಕಿನ ರಾಯಿ ನಿವಾಸಿ ರಾಕೇಶ್ನಿಗೆ ಫೆಬ್ರವರಿ 19 ರಂದು ಮದುವೆ ಏರ್ಪಡಿಸಲಾಗಿತ್ತು. ಹಿರಿಯರೆಲ್ಲ ಹಾಲು ಅರಸಿನ ಮುಖಕ್ಕೆ ಬಳಿದು ಹರಸುವ ಕಾರ್ಯಕ್ರಮ ಮುಗಿಸುತ್ತಿದ್ದಂತೆಯೇ ಗೆಳೆಯರೆಲ್ಲ ಸೇರಿಕೊಂಡು ರಾಕೇಶನ ಮೇಲೆ ಹಾಲು, ಮೊಸರು ಸುರಿದು ಹಳಸಿದ ಟೋಮೋಟೋ, ನಾನಾ ಬಗೆಯ ಸಾಸ್, ಮೊಟ್ಟೆ ಒಡೆದು ಅಭಿಷೇಕ ಮಾಡಿದರು. ಅಷ್ಟಕ್ಕೇ ನಿಲ್ಲದೆ ಸೆಗಣಿ ನೀರು, ತಂಪು ನೀರು ಸುರಿದು ಕೇಕೇ ಹಾಕಿದರು. ಗೆಳೆಯರು ರಾಕೇಶನನ್ನು ಎತ್ತಿ ಹಿಡಿದು ಅಟ್ಟಾಡಿಸಿದರು. ಅಷ್ಟಕ್ಕೇ ಸುಮ್ಮನಾಗದ ಗೆಳೆಯ ಗೆಳತಿಯರು, ಘೋಷಣೆ ಹಾಕುತ್ತಾ ಹಸಿರು ಹೊರೆಕಾಣಿಕೆ ಮೆರವಣಿಗೆ ನಡೆಸಿ ಮದುವೆ ಮಂಟಪದಲ್ಲೇ ಸಂಭ್ರಮಿಸಿದರು. ನವ ದಂಪತಿಗೆ ಬೃಹತ್ ಮಾಲೆ ಹಾಕಿ, ಸೆಲ್ಫಿ ತೆಗೆಸಿಕೊಂಡರು.

ಮದುವೆ ದಿನ ಸಾರ್ವಜನಿಕ ಸ್ಥಳಗಳಲ್ಲಿ ದೊಡ್ಡ ಬ್ಯಾನರ್ ಅಳವಡಿಸಿ ‘ರಾಪಾಟದ ರಾಕೇಶನ ಮದಿಮೆ’ ಎಂದು ಬರೆದು ಮದುವೆಯ ಕುರಿತು ಡಿಫರೆಂಟ್ ಡೈಲಾಗ್ ಗಳನ್ನು ಹಾಸ್ಯ ಶೈಲಿಯಲ್ಲೇ ಬರೆದು ಕಾರ್ಯಕ್ರಮ ವಿವರಣೆ ನೀಡಿದ್ದು ಊರವರ ಗಮನ ಸೆಳೆದಿತ್ತು. ಒಟ್ಟಿನಲ್ಲಿ ಇನ್ನೊಬ್ಬರ ಮದುವೆಯಲ್ಲಿ ರೇಗಿಸುತ್ತಾ ಖುಷಿ ಪಡುತ್ತಿದ್ದ ರಾಕೇಶನ ಮದುವೆಯಲ್ಲಿ ಗೆಳೆಯರೆಲ್ಲ ಚೆನ್ನಾಗಿ ತಪರಾಕಿ ನೀಡಿದ್ದಾರೆ. ಇದೀಗ ಮದುವೆ ಸಮಾರಂಭದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.










