ಆನ್ ಲೈನ್ ವಂಚನೆ- ಇಬ್ಬರ ಬಂಧನ; 13.95 ಲಕ್ಷ ರೂ. ನಗದು ವಶಕ್ಕೆ



 (ನ್ಯೂಸ್ ಕಡಬ) newskadaba.com ಉಡುಪಿ, . 26. ಕಸ್ಟಮ್ ಅಧಿಕಾರಿಗಳ ಹೆಸರಿನಲ್ಲಿ ಆನ್ ಲೈನ್ ಮೂಲಕ ವೈದ್ಯರೊಬ್ಬರಿಗೆ ಕೋಟ್ಯಂತರ ರೂ. ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ ಕಾರ್ಯಾಚರಣೆ ನಡೆಸಿದ ಉಡುಪಿ ಸೆನ್ ಪೊಲೀಸರು ಗುಜರಾತ್ ಮೂಲದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಕುರಿತು ವರದಿಯಾಗಿದೆ.







ಬಂಧಿತರನ್ನು ಗುಜರಾತ್ ರಾಜ್ಯದ ಸೂರತ್ ನ ನವಾದಿಯಾ ಮುಖೇಶ್ ಭಾಯಿ ಗಣೇಶ್‌ಬಾಯಿ(44) ಹಾಗೂ ಗುಜರಾತ್ ರಾಜ್ಯದ ರಾಜ್‌ಕೋಟ್ ಜಿಲ್ಲೆಯ ಧರಮ್ಮಿತ್ ಕಮಲೇಶ್ ಚೌಹಾನ್(28) ಎಂದು ಗುರುತಿಸಲಾಗಿದೆ. ಬಂಧಿತರಿಂದ 5 ಮೊಬೈಲ್  ಗಳು ಹಾಗೂ 13,95,000ರೂ. ಹಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಪರಿಚಿತರು ಜು. 29ರಂದು ಉಡುಪಿಯ ವೈದ್ಯರೊಬ್ಬರಿಗೆ ಕಸ್ಟಮ್ಸ್‌ ಹೆಸರಿನಲ್ಲಿ ಕರೆಮಾಡಿ ನಿಮ್ಮ ಆಧಾರ್ ನಂಬರ್ ಬಳಸಿ ಬುಕ್ ಆಗಿರುವ ಕೊರಿಯರ್‌ ನಲ್ಲಿ 5 ಪಾಸ್‌ ಪೋರ್ಟ್, 5 ಎಟಿಎಂ ಕಾರ್ಡ್, 200ಗ್ರಾಂ ಎಂಡಿಎಂಎ ಹಾಗೂ 5,000 ಯುಎಸ್ ಡಾಲರ್ ಇದ್ದು, ಕೋರಿಯರ್ ಮುಂಬಯಿ ಕಸ್ಟಮ್ಸ್‌ರವರ ವಶದಲ್ಲಿದೆ ಎಂದು ಹೇಳಿದ್ದಾರೆ. ಬಳಿಕ ಪೊಲೀಸ್ ಅಧಿಕಾರಿ ಎಂದು ನಂಬಿಸಿ ವೈದ್ಯರಿಗೆ ಕರೆ ಮಾಡಿ, ನಿಮ್ಮ ಆಧಾರ್ ಕಾರ್ಡ್ ದುರ್ಬಳಕೆಯ ಬಗ್ಗೆ ದೂರನ್ನು ಸ್ವೀಕರಿಸಲಾಗಿದ್ದು, ನಿಮ್ಮ ಆಧಾರ್ ಕಾರ್ಡ್‌ನ್ನು ಭಯೋತ್ಪಾದಕರು ಸಿಮ್ ಖರೀದಿಸಲು ಬಳಸಿದ್ದಾರೆ. ಈ ದೂರಿಗೆ ಸಂಬಂಧಿಸಿ ನಿಮ್ಮನ್ನು ವರ್ಚುವಲ್ ಅರೆಸ್ಟ್ ಮಾಡುವುದಾಗಿ ಬೆದರಿಸಿದ್ದರು. ಅಲ್ಲದೆ ಜು. 29ರಿಂದ ಆ. 9ರ ತನಕ ಮನೆಯ ರೂಮ್ ಒಂದರಲ್ಲಿ ಇರುವಂತೆ ಹಾಗೂ ಬೇರೆಯವರನ್ನು ಸಂಪರ್ಕಿಸದಂತೆ ತಿಳಿಸಿದ್ದರು. ಈ ಪ್ರಕರಣವನ್ನು ಸರಿಪಡಿಸಲು ಅಪರಿಚಿತರು ಹೇಳಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಹಣ ಪಾವತಿ ಮಾಡುವಂತೆ ತಿಳಿಸಿದ್ದು ಅದರಂತೆ ವೈದ್ಯರು, ತಮ್ಮ ಖಾತೆಯಿಂದ ಆ. 6ರಿಂದ ಆ. 9ರವರೆಗೆ ಹಂತ ಹಂತವಾಗಿ ಒಟ್ಟು 1,33,81,000 ರೂ. ಹಣವನ್ನು ವರ್ಗಾವಣೆ ಮಾಡಿರುವುದಾಗಿ ನೀಡಿರುವ ದೂರಿನಂತೆ ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.






error: Content is protected !!
Scroll to Top