ವೇಣೂರು: ಪೊಲೀಸ್ ಬಸ್ ಗೆ ಢಿಕ್ಕಿ ಹೊಡೆದು ಬೈಕ್‌ ಮೇಲೆ ಮಗುಚಿ ಬಿದ್ದ ಕೋಳಿ ಸಾಗಾಟದ ಲಾರಿ ► ಬೈಕ್ ಸವಾರ ಮೃತ್ಯು, ಇಬ್ಬರಿಗೆ ಗಾಯ

(ನ್ಯೂಸ್ ಕಡಬ) newskadaba.com ವೇಣೂರು, ಫೆ.23. ಹೆದ್ದಾರಿಯ ಬದಿ ನಿಲ್ಲಿಸಲಾಗಿದ್ದ ಪೊಲೀಸ್ ವಾಹನಕ್ಕೆ ಕೋಳಿ ಸಾಗಾಟದ ಲಾರಿಯೊಂದು ಢಿಕ್ಕಿ ಹೊಡೆದು ಚಲಿಸುತ್ತಿದ್ದ ಬೈಕ್ ಮೇಲೆ ಮಗುಚಿ ಬಿದ್ದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ಶುಕ್ರವಾರದಂದು ವೇಣೂರಿನಲ್ಲಿ ನಡೆದಿದೆ.

ಮೃತ ಬೈಕ್ ಸವಾರನನ್ನು ವೇಣೂರು ಕರಿಮಣೇಲು ನಿವಾಸಿ ಉದಯ ಕುಮಾರ್ ಸೇಮಿತ ಎಂದು ಗುರುತಿಸಲಾಗಿದೆ. ಅವರು ಇಬ್ಬರು ಮಕ್ಕಳನ್ನು ಬೈಕ್‌ನಲ್ಲಿ ಕುಳ್ಳಿರಿಸಿ ಕರಿಮಣೇಲುವಿನಿಂದ ವೇಣೂರು ಮುಖ್ಯಪೇಟೆಗೆ ತಲುಪುತ್ತಿದ್ದಂತೆ ವೇಗವಾಗಿ ಆಗಮಿಸಿದ ಕೋಳಿ ಸಾಗಾಟದ ವಾಹನ ವೇಣೂರು ಶ್ರೀರಾಮ ನಗರದ ಮೂಡಬಿದಿರೆ ತಿರುವಿನ ರಾಜ್ಯ ಹೆದ್ದಾರಿ ಬದಿ ನಿಲ್ಲಿಸಲಾಗಿದ್ದ ಪೊಲೀಸ್ ವಾಹನಕ್ಕೆ ಢಿಕ್ಕಿ ಹೊಡೆದು ಚಲಿಸುತ್ತಿದ್ದ ಬೈಕ್ ಮೇಲೆ ಮಗುಚಿ ಬಿದ್ದಿದೆ. ಘಟನೆಯಲ್ಲಿ ಗಂಭೀರ ಗಾಯಗೊಂಡ ಸವಾರನನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ‌. ಬೈಕ್‌ನಲ್ಲಿದ್ದ ಪುತ್ರಿ ಸೇರಿದಂತೆ ಮತ್ತೊಬ್ಬಳು ವಿದ್ಯಾರ್ಥಿನಿ ಅಲ್ಪ ಪ್ರಮಾಣದ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆಂದು ತಿಳಿದು ಬಂದಿದೆ.

ಕೋಳಿ ಸಾಗಾಟದ ಲಾರಿ ಚಾಲಕನ ಅಜಾಗರೂಕತೆಯ ಚಾಲನೆಯೇ ಘಟನೆಗೆ ಕಾರಣವೆನ್ನಲಾಗಿದ್ದು, ವೇಣೂರು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಎಲ್ಲಾ ಘಟನೆಯ ದೃಶ್ಯಾವಳಿಗಳು ಸ್ಥಳೀಯ ಕಾಂಪ್ಲೆಕ್ಸ್‌ವೊಂದರ ಸಿಸಿಟಿವಿಯಲ್ಲಿ ಸೆರೆಯಾಗಿದೆ.

error: Content is protected !!

Join the Group

Join WhatsApp Group