ಕೇಂದ್ರದ ಅಡಿಕೆ‌ ನಿಷೇಧ ಹೇಳಿಕೆಯನ್ನು ಕರಾವಳಿಗೆ ಆಗಮಿಸುತ್ತಿರುವ ಅಮಿತ್ ಷಾರಲ್ಲಿ ಪಕ್ಷ ಭೇದ ಮರೆತು ಪ್ರಶ್ನಿಸಬೇಕಿದೆ: ವೆಂಕಪ್ಪ ಗೌಡ ► ಕಡಬದಲ್ಲಿ ಯುವ ಕಾಂಗ್ರೆಸ್ ವತಿಯಿಂದ ಪಕೋಡಾ ತಯಾರಿ ಅಣಕು ಪ್ರದರ್ಶಿಸಿ ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಕಡಬ, ಫೆ.18. ಕೇಂದ್ರದ ಮೋದಿ ಸರಕಾರದ ಬೆಲೆಯೇರಿಕೆ ವಿರೋಧಿಸಿ ಹಾಗೂ ಉದ್ಯೋಗ ಸೃಷ್ಟಿಸುವಲ್ಲಿ ವಿಫಲರಾಗಿದ್ದಾರೆಂದು ಆರೋಪಿಸಿ ಕಡಬ ಯುವ ಕಾಂಗ್ರೆಸ್ ಸಮಿತಿಯ ವತಿಯಿಂದ ಭಾನುವಾರ ಅಪರಾಹ್ನ ಕಡಬ ಪೇಟೆಯಲ್ಲಿ ಪ್ರತಿಭಟನೆ ನಡೆಯಿತು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಪ್ಪ ಗೌಡ ಮಾತನಾಡಿ, ಕೇಂದ್ರ ಆರೋಗ್ಯ ಸಚಿವೆ ಶ್ರೀಮತಿ ಅನುಪ್ರಿಯಾ ಪಟೇಲ್ ರವರು ಅಡಿಕೆ ಸೇವನೆಯು ಕ್ಯಾನ್ಸರ್ ನಂತಹ ಮಾರಕ ರೋಗಗಳನ್ನು ಉಂಟುಮಾಡುತ್ತದೆ ಎಂದು ಹೇಳಿಕೆ ನೀಡಿದ್ದಾರೆ.ಅದರನ್ವಯ ಅಡಿಕೆ ಹಾಗೂ ಸುಪಾರಿ ಉತ್ಪನ್ನಗಳನ್ನು ನಿಷೇಧಿಸಲು ಎಲ್ಲಾ ರಾಜ್ಯಗಳಿಗೆ ಸುತ್ತೋಲೆ ಕಳುಹಿಸಿದ್ದು, ಈ ಬಗ್ಗೆ ಇಂದು ಕುಕ್ಕೇ ಸುಬ್ರಹ್ಮಣ್ಯಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಭೇಟಿ ನೀಡುವಾಗ ಪಕ್ಷ ಭೇದ ಮರೆತು ಪ್ರಶ್ನಿಸಬೇಕಾಗಿದೆ ಎಂದರು.

Also Read  ಅಕ್ರಮ ಮರಳುಗಾರಿಕೆಯಿಂದ ದ್ವೀಪ ಉಳಿಸಲು ಬೃಹತ್ ಪ್ರತಿಭಟನೆ

ಕಾಂಗ್ರೆಸ್ ಉಸ್ತುವಾರಿ ಸವಿತಾ ರಮೇಶ್ ಮಾತನಾಡಿ, ನಿರುದ್ಯೋಗಿ ಯುವಕರಿಗೆ ಕೋಟ್ಯಂತರ ಉದ್ಯೋಗ, ಪ್ರತಿಯೊಬ್ಬ ಭಾರತೀಯನ ಬ್ಯಾಂಕ್ ಖಾತೆಗೆ 15 ಲಕ್ಷ ಜಮಾವಣೆ ಸೇರಿದಂತೆ ಹಲವು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿಯವರು ಇದೀಗ ಪಕೋಡಾ ಮಾರಾಟ ಮಾಡುವಂತೆ ಯುವಕರಿಗೆ ಕರೆ ನೀಡಿದ್ದಾರೆ. ಅಲ್ಲದೆ ದಿನೇ ದಿನೇ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯು ಗಗನಕ್ಕೇರುತ್ತಿದ್ದು, ಬೆಲೆ ನಿಯಂತ್ರಿಸುವಲ್ಲಿ ಕೇಂದ್ರ ಸರಕಾರವು‌ ವಿಫಲವಾಗಿದೆ ಎಂದರು. ಕಡಬ ಜಿಲ್ಲಾ ಪಂಚಾಯತ್ ಸದಸ್ಯ ಪಿ.ಪಿ.ವರ್ಗೀಸ್, ಕೆಪಿಸಿಸಿ ಸದಸ್ಯ ಡಾ| ರಘು ಬೆಳ್ಳಿಪ್ಪಾಡಿ, ತಾಲೂಕು ಪಂಚಾಯತ್ ಸದಸ್ಯ ಫಝಲ್ ಕೋಡಿಂಬಾಳ, ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಿವಾಕರ ಗೌಡ ಮೊದಲಾದವರು ಮಾತನಾಡಿದರು. ಈ ಸಂದರ್ಭದಲ್ಲಿ ಪಕೋಡಾ ತಯಾರಿಯ ಬಗ್ಗೆ ಅಣಕು ಪ್ರದರ್ಶನ ನಡೆಸಲಾಯಿತು.

Also Read  ಜಿಲ್ಲಾ ಗೃಹರಕ್ಷಕ ದಳ ಕಛೇರಿಯಲ್ಲಿ ಆಯುಧ ಪೂಜೆ

error: Content is protected !!