(ನ್ಯೂಸ್ ಕಡಬ) newskadaba.com ಉಳ್ಳಾಲ, ಜ. 13. ಮೀನುಗಾರಿಕೆಗೆ ತೆರಳಿದ್ದ ದೋಣಿಯೊಂದರ ಹಗ್ಗ ತುಂಡಾದ ಪರಿಣಾಮ ಸಮುದ್ರದ ನಡುವೆ ಕಲ್ಲೊಂದಕ್ಕೆ ಬಡಿದು ಮೀನುಗಾರರೊಬ್ಬರು ಮೃತಪಟ್ಟ ಘಟನೆ ಮೊಗವೀರಪಟ್ಣ ಸಮೀಪದ ಆಳ ಸಮುದ್ರದಲ್ಲಿ ನಡೆದಿದೆ.

ಮೃತ ಮೀನುಗಾರನನ್ನು ತಿರುವನಂತಪುರ ನಿವಾಸಿ ಮೊಗವೀರಪಟ್ಣದಲ್ಲಿ ನೆಲೆಸಿದ್ದ ಮೈಕಲ್ (60) ಎಂದು ಗುರುತಿಸಲಾಗಿದೆ. ಮೃತರು, ಮಹಮ್ಮದ ಕಲಂದರ್ ಷಾ ಮಾಲಕತ್ವದ ನಾಡದೋಣಿಯಲ್ಲಿ ಮೈಕಲ್ ಸೇರಿದಂತೆ ಮೀನುಗಾರಿಕೆಗೆ ತೆರಳಿ, ಸಮುದ್ರದ ಮದ್ಯದಲ್ಲಿ ಬಂಡೆಯೊಂದರ ಸಮೀಪ ಮೀನು ಹಿಡಿಯಲು ಬಲೆ ಬೀಸಿ ದೋಣಿಯಲ್ಲಿ ಕುಳಿತಿದ್ದರು. ಈ ಸಂದರ್ಭದಲ್ಲಿ ಬೀಸಿದ ಗಾಳಿಗೆ ಹಗ್ಗ ತುಂಡಾಗಿ ದೋಣಿ ನೇರವಾಗಿ ಕಲ್ಲಿಗೆ ಬಡಿದಿದ್ದು, ಇಂಜಿನ್ ಚಾಲನೆ ನಡೆಸುತ್ತಿದ್ದ ಮೈಕಲ್ ರ ತಲೆ ದೋಣಿಯ ಮರದ ತುಂಡಿಗೆ ಬಡಿದು ಸಮುದ್ರಕ್ಕೆ ಬಿದ್ದಿದ್ದರು. ತಕ್ಷಣವೇ ಸಹ ಮೀನುಗಾರರು ಮೈಕಲ್ನನ್ನು ಮೇಲಕ್ಕೆತ್ತಿದ್ದರಾದರೂ ಅವರು ಅದಾಗಲೇ ಮೃತಪಟ್ಟಿದ್ದರು ಎನ್ನಲಾಗಿದೆ. ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










