ಬೆಳ್ತಂಗಡಿ: ತಂದೆ, ಸಹೋದರನಿಂದ ಚೂರಿ ಇರಿದು ವ್ಯಕ್ತಿಯ ಕೊಲೆ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಫೆ.12. ತಂದೆ ಹಾಗೂ ಸಹೋದರ ಸೇರಿಕೊಂಡು ವ್ಯಕ್ತಿಯೋರ್ವರನ್ನು ಚೂರಿಯಿಂದ ಇರಿದು ಕೊಲೆ ಮಾಡಿದ ಘಟನೆ ಬೆಳ್ತಂಗಡಿ ತಾಲೂಕಿನ ಕಸಬಾ ಗ್ರಾಮದ ಮಟ್ಲ ಎಂಬಲ್ಲಿ ಭಾನುವಾರ ರಾತ್ರಿ ನಡೆದಿದೆ.

ಮೃತಪಟ್ಟವರನ್ನು ಮೂಲತಃ ಹಾಸನದ ಪ್ರಸ್ತುತ ಬೆಳ್ತಂಗಡಿಯ ಕಸಬಾ ಗ್ರಾಮದ ಮಟ್ಲ ನಿವಾಸಿ ಮಂಜುನಾಥ ಎಂಬವರ ಪುತ್ರ ನವೀನ್(28) ಎಂದು ಗುರುತಿಸಲಾಗಿದೆ. ಊಟ ಮಾಡುತ್ತಿದ್ದ ಸಂದರ್ಭದಲ್ಲಿ ಕ್ಷುಲ್ಲಕ ಕಾರಣಕ್ಕೆ ಮಾತಿಗೆ ಮಾತು ಬೆಳೆದು ತನ್ನ ತಂದೆ ಮಂಜುನಾಥ ಹಾಗೂ ಸಹೋದರ ರಾಘವೇಂದ್ರ ಸೇರಿಕೊಂಡು ಚೂರಿಯಿಂದ ಹೊಟ್ಟೆಯ ಭಾಗಕ್ಕೆ ಮತ್ತು ತೊಡೆಗೆ ತಿವಿದ ಪರಿಣಾಮ ಗಂಭೀರ ಗಾಯಗೊಂಡು ನವೀನ್‌ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯ ಬಳಿಕ ಆರೋಪಿಗಳಿಬ್ಬರು ಪರಾರಿಯಾಗಿದ್ದು, ಮೃತರ ಪತ್ನಿ ಬೇಬಿ ನೀಡಿರುವ ದೂರಿನಂತೆ ಪ್ರಕರಣ ದಾಖಲಿಸಿಕೊಂಡಿರುವ ಬೆಳ್ತಂಗಡಿ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

error: Content is protected !!

Join the Group

Join WhatsApp Group