ಚೂರಿ ಇರಿತಕ್ಕೊಳಗಾಗಿದ್ದ ವ್ಯಕ್ತಿ ಮೃತ್ಯು- ಆರೋಪಿಗಾಗಿ ಶೋಧಕಾರ್ಯ

(ನ್ಯೂಸ್ ಕಡಬ) newskadaba.com ಕುಂದಾಪುರ, . 02. ಚೂರಿ ಇರಿತಕ್ಕೊಳಗಾಗಿ ಗಂಭೀರ ಗಾಯಗೊಂಡಿದ್ದ ಖಾರ್ವಿಕೇರಿ ನಿವಾಸಿ ಬನ್ಸ್ ರಾಘು ಅಲಿಯಾಸ್ ರಾಘವೇಂದ್ರ ಶೇರೆಗಾರ್(42) ಅವರು ಸೋಮವಾರದಂದು ಬೆಳಗ್ಗೆ ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಭಾನುವಾರದಂದು ಸಂಜೆ 7 ಗಂಟೆ ಸುಮಾರಿಗೆ ಕುಂದಾಪುರದ ಚಿಕ್ಕನ್ ಸಾಲ್ ರಸ್ತೆಯ ಅಂಚೆ ಕಚೇರಿ ಸಮೀಪ ಇರುವ ನ್ಯೂ ಡೆಲ್ಲಿ ಬಜಾರ್ ಅಂಗಡಿಯೆದುರು ರಾಘವೇಂದ್ರ ಅವರು ತನ್ನ ಹೋಂಡಾ ಸಿಟಿ ಕಾರಿನಲ್ಲಿ ಬಂದಿದ್ದು ಇದೇ ಸಂದರ್ಭ ವ್ಯಾಗನರ್ ಕಾರಿನಲ್ಲಿ ಬಂದಿದ್ದ ವ್ಯಕ್ತಿಯೋರ್ವ ತಗಾದೆ ತೆಗೆದು, ರಾಘವೇಂದ್ರ ಅವರ ತೊಡೆಗೆ ಚೂರಿಯಿಂದ ಇರಿದು ಕಾರಿನಲ್ಲಿ ಪರಾರಿಯಾಗಿದ್ದ. ಗಂಭೀರ ಗಾಯಗೊಂಡಿದ್ದ ರಾಘುವೇಂದ್ರ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ ಬಳಿಕ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದರು.

ಘಟನೆ ನಡೆಯುತ್ತಿದ್ದ ವೇಳೆ ಪ್ರತ್ಯಕ್ಷದರ್ಶಿಯೊಬ್ಬ ಆರೋಪಿಯ ಕಾರು ಮತ್ತು ಕಾರಿನೊಳಗೆ ಕುಳಿತಿದ್ದ ಆರೋಪಿಯ ಫೋಟೋ ಕ್ಲಿಕ್ಕಿಸಿಕೊಂಡಿದ್ದ. ಇದರಿಂದ ಆರೋಪಿಯನ್ನು ತೀರ್ಥಹಳ್ಳಿ ಮೂಲದ ಶಾಫಿ ಎಂದು ಗುರುತಿಸಲಾಗಿದ್ದು, ಕೆಲವು ದಿನಗಳಿಂದ ಕುಂದಾಪುರದ ಲಾಡ್ಜ್ ಒಂದರಲ್ಲಿ ಉಳಿದುಕೊಂಡಿದ್ದ ಎನ್ನಲಾಗಿದೆ. ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದು, ಕೊಲೆಯಾದ ರಾಘವೇಂದ್ರ ಹಾಗೂ ಆರೋಪಿ ಶಾಫಿ ನಡುವೆ ಹಣಕಾಸಿನ ವಿಚಾರವೇ ಕೊಲೆಗೆ ಕಾರಣ ಎಂದು ಮೇಲ್ನೋಟಕ್ಕೆ ತಿಳಿದು ಬಂದಿದೆ ಎನ್ನಲಾಗಿದೆ. ಈ ಕುರಿತು ಕುಂದಾಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಮೃತದೇಹವನ್ನು ಗೂಡ್ಸ್ ವಾಹನದಲ್ಲಿ ತಂದು ಕಸದ ರಾಶಿಗೆ ಎಸೆದ ದುಷ್ಕರ್ಮಿಗಳು ➤ ಆರೋಪಿಗಳು ಬಂಧನ

error: Content is protected !!
Scroll to Top