ಬಸ್ ನಿಂದ ಬಿದ್ದು ಮಹಿಳೆ ಮೃತ್ಯು..! – ಚಾಲಕ- ನಿರ್ವಾಹಕ ವಶಕ್ಕೆ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 13. ಬಸ್‌ನಿಂದ ಹೊರಕ್ಕೆ ಎಸೆಯಲ್ಪಟ್ಟು ಮಹಿಳೆಯೊಬ್ಬರು ಮೃತಪಟ್ಟ ಘಟನೆ ಮೂಡುಬಿದಿರೆಯ ಮಾರೂರು ಗ್ರಾಮದ ಕುಂಟೋಡಿ ಎಂಬಲ್ಲಿ ಮಂಗಳವಾರದಂದು ಬೆಳಗ್ಗೆ ನಡೆದಿದೆ. ಘಟನೆಗೆ ಸಂಬಂಧಿಸಿ ಬಸ್‌ ಚಾಲಕ ಮತ್ತು ನಿರ್ವಾಹಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.

ಮೃತ ಮಹಿಳೆಯನ್ನು ಮಾರೂರು ಗ್ರಾಮದ ನೀಲಮ್ಮ ಎಂದು ಗುರುತಿಸಲಾಗಿದೆ. ಮೃತರು ತನ್ನ ಮೊಮ್ಮಗ ತೇಜಸ್ ಎಂಬಾತನೊಂದಿಗೆ ಮನೆಯಿಂದ ಮೂಡುಬಿದಿರೆ ಆಸ್ಪತ್ರೆಗೆ ಹೊರಟು, ಸಾಯಿ ಟ್ರಾವೆಲ್ಸ್ ನ ಖಾಸಗಿ ಬಸ್‌ ಗೆ ಹತ್ತಿದ್ದರು. ತೇಜಸ್ ಹಿಂದಿನ ಬಾಗಿಲಿನಿಂದ ಬಸ್ ಹತ್ತಿದ್ದರೆ, ನೀಲಮ್ಮ ಮುಂದಿನ ಬಾಗಿಲಿನಿಂದ ಬಸ್ ಹತ್ತುತ್ತಿದ್ದಂತೆ ನಿರ್ವಾಹಕ ಅಶೋಕ್, ಬಸ್ ಚಲಾಯಿಸಲು ಸೂಚಿಸಿದ್ದರು. ಬಸ್ ಚಾಲಕ ಪ್ರಸನ್ನ ಎಂಬಾತನು ಒಮ್ಮೆಲೆ ಬಸ್ಸನ್ನು ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ ನೀಲಮ್ಮರವರು ನಿಯಂತ್ರಣ ತಪ್ಪಿ ಬಸ್ಸಿನಿಂದ ಕೆಳಗೆ ಬಿದ್ದು ಅವರ ತಲೆಗೆ ಗಂಭೀರ ಗಾಯವಾಗಿತ್ತು. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟರು ಎಂದು ತಿಳಿದು ಬಂದಿದೆ. ಈ ಕುರಿತು ತೇಜಸ್ ನೀಡಿರುವ ದೂರಿನಂತೆ ಮೂಡಬಿದ್ರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

error: Content is protected !!

Join the Group

Join WhatsApp Group