‘ತುಳು ಭಾಷೆಯನ್ನು ರಾಜ್ಯದ 2ನೇ ಅಧಿಕೃತ ಭಾಷೆಯನ್ನಾಗಿ ಪರಿಗಣಿಸಿ’- ಕರಾವಳಿ ಶಾಸಕರ ಆಗ್ರಹ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜು. 19. ತುಳು ಭಾಷೆಯನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯನ್ನಾಗಿ ಘೋಷಿಸಲು ಕರಾವಳಿಯ ಶಾಸಕರು ಆಗ್ರಹಿಸಿದ್ದು, ಇದಕ್ಕೆ ಸ್ವೀಕರ್ ಯು.ಟಿ. ಖಾದರ್‌ ಕೂಡ ಧ್ವನಿಗೂಡಿಸಿದ್ದಾರೆ.

ಈ ಕುರಿತು ವಿಧಾನಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಪುತ್ತೂರು ಕಾಂಗ್ರೆಸ್ ಶಾಸಕ ಅಶೋಕ್‌ ಕುಮಾರ್‌ ರೈ, 1994ರಲ್ಲಿ ಡಾ. ಎಂ. ವೀರಪ್ಪ ಮೊಯಿಲಿ ಅವರು ಸಿಎಂ ಆಗಿದ್ದಾಗ ತುಳು ಅಕಾಡೆಮಿ ಸ್ಥಾಪಿಸಿದ್ದು, ಕೇರಳದಲ್ಲಿ ಕೂಡಾ ತುಳು ಭಾಷಾ ಅಕಾಡೆಮಿ ಇದೆ. ಅಮೆರಿಕ ವಿಶ್ವವಿದ್ಯಾಲಯದಲ್ಲಿಯೂ ತುಳು ಭಾಷೆಯಲ್ಲಿ ಅರ್ಜಿ ನಮೂನೆ ಭರ್ತಿ ಮಾಡಲು ಅವಕಾಶ ಕಲ್ಪಿಸಲಾಗಿದ್ದು, ಕರ್ನಾಟಕದಲ್ಲಿ ತುಳು ಭಾಷೆಯನ್ನು ಎರಡನೇ ಅಧಿಕೃತ ಭಾಷೆಯನ್ನಾಗಿ ಘೋಷಿಸಬೇಕು ಎಂದು ಆಗ್ರಹಿಸಿದ್ದಾರೆ.

ಇನ್ನು ಇದಕ್ಕೆ ಬೆಂಬಲ ಸೂಚಿಸಿದ ಬಿಜೆಪಿ ಶಾಸಕ ವೇದವ್ಯಾಸ ಕಾಮತ್‌, ನಮ್ಮ ಸರಕಾರ ಇದ್ದಾಗ ತುಳು ಭಾಷೆಗೆ ಅಧಿಕೃತ ಭಾಷೆಯ ಸ್ಥಾನಮಾನ ನೀಡಲು ಎಲ್ಲ ಪ್ರಕ್ರಿಯೆಗಳನ್ನೂ ಪೂರೈಸಿತ್ತು. ಈಗಿನ ಸರಕಾರ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಂಡರೆ ಇದು ಸಾಧ್ಯವಾಗಲಿದೆ ಎಂದು ಗಮನ ಸೆಳೆದರು.

ತುಳು ಭಾಷೆಯನ್ನು ರಾಜ್ಯದ 2ನೇ ಅಧಿಕೃತ ಭಾಷೆ ಮಾಡಲು ಆರ್ಥಿಕ ಹೊಣೆಗಾರಿಕೆಯೂ ಬರುವುದಿಲ್ಲ ಎನ್ನುತ್ತಾ ಅಶೋಕ್ ರೈ ಅವರು ತುಳುವಿನಲ್ಲೇ ಮಾತು ಪ್ರಾರಂಭಿಸಿದ್ದು, ಮಧ್ಯಪ್ರವೇಶಿಸಿದ ವೇದವ್ಯಾಸ ಕಾಮತ್‌ ಸಹ ತುಳು ಭಾಷೆಯಲ್ಲೇ ಮಾತನಾಡಿದರು. ಇದಕ್ಕೆ ತುಳುವಿನಲ್ಲೇ ಉತ್ತರಿಸಿದ ಸ್ಪೀಕರ್‌ ಯುಟಿ ಖಾದರ್‌, ನೀವು ಹೇಳಬೇಕಾದ್ದನ್ನು ಹೇಳಿದ್ದೀರಿ. ಎಲ್ಲವನ್ನೂ ಕೇಳಿಯಾಗಿದೆ. ಸರಕಾರ ಉತ್ತರ ಕೊಡುತ್ತದೆ ಎಂದಿದ್ದಾರೆ.

error: Content is protected !!

Join the Group

Join WhatsApp Group