ಅನಧಿಕೃತ ಸಂಪರ್ಕ ಕಡಿತಗೊಳಿಸಲು ಸೂಚನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜು. 12. ಇಲ್ಲಿನ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿರುವ ಹಲವು ಬಹುಮಹಡಿ ವಸತಿ ಕಟ್ಟಡಗಳು ತಮ್ಮ ಕಟ್ಟಡದಲ್ಲಿ ಶೇಖರಣೆಯಾಗುವ ಮಳೆ ನೀರನ್ನು ಚರಂಡಿಗೆ ಬಿಡದೇ ಪಾಲಿಕೆಯ ಒಳಚರಂಡಿ ಸಂಪರ್ಕ ಜಾಲಕ್ಕೆ ಸಂಪರ್ಕಿಸಿರುವುದು ಕಂಡುಬಂದಿರುತ್ತವೆ. ಇದರಿಂದಾಗಿ ಒಳಚರಂಡಿ ಜಾಲದ ಸಾಮರ್ಥ್ಯಕ್ಕಿಂತ ಹೆಚ್ಚಾಗಿ ದೃಶ್ಯ ತ್ಯಾಜ್ಯವು ಹರಿಯುತ್ತಿದ್ದು, ಮ್ಯಾನ್ ಹೋಲ್‍ಗಳಲ್ಲಿ ದ್ರವ್ಯ ತ್ಯಾಜ್ಯವು ಹೊರಸೂಸಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಆದ ಕಾರಣ ಇದೇ ಜು. 27ರೊಳಗೆ ಅನಧಿಕೃತವಾಗಿ ಮಳೆ ನೀರನ್ನು ಒಳಚರಂಡಿ, ಜಾಲಕ್ಕೆ ಸಂಪರ್ಕಿಸಿರುವುದನ್ನು ತೆರವುಗೊಳಿಸುವಂತೆ ಅಂತಿಮ ಎಚ್ಚರಿಕೆ ನೀಡಲಾಗಿದೆ. ತಪ್ಪಿದ್ದಲ್ಲಿ ಕರ್ನಾಟಕ ಮುನ್ಸಿಪಲ್ ಕಾಯ್ದೆ 1976 ಸೆಕ್ಷನ್ 252 ಮತ್ತು 431 (ಎ) ರಂತೆ ರೂಪಾಯಿ ಹತ್ತು ಸಾವಿರದಿಂದ ಒಂದು ಲಕ್ಷದವರೆಗೆ ದಂಡ ವಿಧಿಸಿ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು.


ಸಾರ್ವಜನಿಕರು ಈ ಸಂಬಂಧ ಯಾರಾದರೂ, ಅನಧಿಕೃತವಾಗಿ ಒಳಚರಂಡಿ ಜಾಲಕ್ಕೆ ಮಳೆ ನೀರನ್ನು ಸಂಪರ್ಕಿಸಿರುವುದು ಕಂಡುಬಂದರೆ ಪಾಲಿಕೆಯು ವಾಟ್ಸಪ್ ಸಹಾಯವಾಣಿ ಸಂಖ್ಯೆ: 9449007722 ಗೆ ಛಾಯಾಚಿತ್ರದೊಂದಿಗೆ ಮಾಹಿತಿ ನೀಡಬೇಕೆಂದು ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!

Join the Group

Join WhatsApp Group