ಪ್ರಕರಣ ಇತ್ಯರ್ಥವಾಗದೇ ಹೊಸ ಪಿಎಸ್ಐ ನೇಮಕ ಇಲ್ಲ- ಗೃಹ ಸಚಿವ ಡಾ. ಜಿ.ಪರಮೇಶ್ವರ್

(ನ್ಯೂಸ್ ಕಡಬ) newskadaba.com  ಬೆಂಗಳೂರು, ಜು. 11. ಪಿಎಸ್‍ಐ ನೇಮಕಾತಿಗೆ ಸಂಬಂಧಿಸಿ ಹೈಕೋರ್ಟ್ ನಲ್ಲಿ ಬಾಕಿಯಿರುವ ಪ್ರಕರಣಗಳು ಇತ್ಯರ್ಥವಾಗದೇ ಹೊಸ ಪಿಎಸ್‍ಐ ನೇಮಕಾತಿಗೆ ಕ್ರಮ ಕೈಗೊಳ್ಳುವುದಿಲ್ಲ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ತಿಳಿಸಿದ್ದಾರೆ.

ವಿಧಾನಸಭೆಯಲ್ಲಿ ಶಾಸಕ ಸಿದ್ದು ಪಾಟೀಲ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ಹುಮ್ನಾಬಾದ್ ವಿಧಾನಸಭಾ ಕ್ಷೇತ್ರದಲ್ಲಿ 8 ಪೊಲೀಸ್ ಠಾಣೆಗಳಿದ್ದು, 16 ಪಿಎಸ್‍ಐ, 36 ಎಸ್‍ಐ, 104 ಹೆಡ್ ಕಾನ್ಸ್ಟೇಬಲ್ ಹಾಗೂ 211 ಕಾನ್ಸ್‍ಟೇಬಲ್ ಹುದ್ದೆಗಳು ಖಾಲಿ ಇವೆ. 2022ರ ಜೂ. 15ರಂದು ಕಾನ್ಸ್‍ಟೇಬಲ್‍ಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದ್ದು, ಅದು ಪೂರ್ಣಗೊಂಡ ಬಳಿಕ ಖಾಲಿ ಹುದ್ದೆಗೆ ಸಿಬ್ಬಂದಿಗಳನ್ನು ನಿಯೋಜಿಸಲಾಗುವುದು. ಉಳಿದಂತೆ 545 ಪಿಎಸ್‍ಐ ಗಳ ನೇಮಕಾತಿಗಳ ಪ್ರಕರಣ ಹೈಕೋರ್ಟ್ ನ ವಿಚಾರಣೆಯಲ್ಲಿದ್ದು, ಅದು ಇತ್ಯರ್ಥವಾಗದೇ ಹೆಚ್ಚುವರಿ 400 ಪಿಎಸ್‍ಐಗಳ ನೇಮಕಾತಿಯನ್ನು ಕೈಗೆತ್ತಿಕೊಳ್ಳಲಾಗುವುದಿಲ್ಲ. ಒಂದು ವೇಳೆ 545 ಪಿಎಸ್‍ಐಗಳ ನೇಮಕಾತಿಯನ್ನು ಪೂರ್ಣಗೊಳಿಸದೆ 2ನೇ ಹಂತದ ನೇಮಕಾತಿಯನ್ನು ಕೈಗೆತ್ತಿಕೊಂಡರೆ ಗೊಂದಲಗಳು ಸೃಷ್ಟಿಯಾಗುತ್ತವೆ ಎಂದು ಹೇಳಿದರು.

Scroll to Top