SDPI ಮಂಗಳೂರು ವಿಧಾನಸಭಾ ಕ್ಷೇತ್ರದ ಸಮಾವೇಶ ➤ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮೈಸೂರು ಭಾಗಿ

(ನ್ಯೂಸ್ ಕಡಬ) newskadaba.com ಮಂಗಳೂರು, ಜು. 10.  ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಮಂಗಳೂರು (ಉಳ್ಳಾಲ) ಕ್ಷೇತ್ರ ಸಮಿತಿಯ ವತಿಯಿಂದ ಎಸ್‌ಡಿಪಿಐ ಪಕ್ಷದ ಸಮಾವೇಶವು ಭಾನುವಾರದಂದು ದೇರಳಕಟ್ಟೆಯ ಬಿಸಿಸಿ ಆಡಿಟೋರಿಯಂನ ಸಭಾಂಗಣದಲ್ಲಿ ನಡೆಯಿತು.

ಅಧ್ಯಕ್ಷತೆಯನ್ನು ಮಂಗಳೂರು ಕ್ಷೇತ್ರ ಸಮಿತಿಯ ಅಧ್ಯಕ್ಷರಾದ ಇರ್ಶಾದ್ ಅಜ್ಜಿನಡ್ಕ ವಹಿಸಿದರು. ಸಮಾವೇಶದ ಪ್ರಾಸ್ತಾವಿಕ ಭಾಷಣವನ್ನು ಮಾಡಿದ ಎಸ್‌ಡಿಪಿಐ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಅನ್ವರ್ ಸಾದಾತ್ ಬಜತ್ತೂರು ಶೋಷಿತ ಮತ್ತು ಅಲ್ಪಸಂಖ್ಯಾತ, ಹಿಂದುಳಿದ ಸಮುದಾಯಗಳನ್ನು ರಾಜಕೀಯ ಹಾಗೂ ಸಾಮಾಜಿಕವಾಗಿ ದೇಶದ ಮುಖ್ಯವಾಹಿನಿಗೆ ತಂದು ಅವರ ಕೈಗಳಿಗೆ ಅಧಿಕಾರ ಹಸ್ತಾಂತರ ಮಾಡುವ ದಿನದವರೆಗೂ SDPI ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರು ವಿರಮಿಸುವುದಿಲ್ಲ. ಅದಕ್ಕಾಗಿ ಎಲ್ಲಾ ತ್ಯಾಗಕ್ಕೂ ನಾವು ಸಜ್ಜಾಗಿ ನಿಲ್ಲಬೇಕು ಎಂದು ಕರೆ ನೀಡಿದರು.

ಪಕ್ಷದ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಎಸ್‌ಡಿಪಿಐ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ಮೈಸೂರು ಮಾತನಾಡಿ, “ಬಿಜೆಪಿಯ ಹಾಗೂ ಸಂಘಪರಿವಾರದ ಕೋಮುವಾದದ ಅಜೆಂಡವನ್ನು ನಾವು ಎದುರಿಸಬೇಕು, ಅದೇ ರೀತಿ ಸರಕಾರಗಳು ಜನವಿರೋಧಿ ನೀತಿಯನ್ನು ಜಾರಿಗೆ ತಂದರೆ ಅಥವಾ ತಾರತಮ್ಯ ನೀತಿ ಅನುಸರಿಸಿದರೆ ಅದರ ವಿರುದ್ಧ ಕೂಡ ನಾವು ದ್ವನಿಯೆತ್ತುವ ಕೆಲಸ ಮಾಡಬೇಕು. ಯಾಕೆಂದರೆ ನಾವು ಜನರ ಪರ ರಾಜಕೀಯವನ್ನು ಮಾಡುವ ಜನಪರವಾದ ರಾಜಕೀಯ ಪಕ್ಷ. ಹಾಗಾಗಿ  ನಾವು ಪರ್ಯಾಯ ವಿರೋಧಪಕ್ಷವಾಗಿ ಕೆಲಸ ಮಾಡಬೇಕು. ಕರ್ನಾಟಕ ರಾಜ್ಯವು ಸಾಮರಸ್ಯ ಮತ್ತು ಸಹೋದರತೆಗೆ ಹೆಸರು ವಾಸಿಯಾದ ನಾಡಾಗಿತ್ತು. ಆದರೆ ದಕ್ಷಿಣ ಭಾರತದಲ್ಲಿ ಪ್ರಥಮವಾಗಿ ಕರ್ನಾಟಕದಲ್ಲಿ ಅದಿಕಾರಕ್ಕೆ ಬಂದ ಬಿಜೆಪಿ ನಾಡಿನ ಸಾಮರಸ್ಯಕ್ಕೆ ಕೊಳ್ಳಿ ಇಟ್ಟಿದೆ, ದರ್ಮದ ಹೆಸರಿನಲ್ಲಿ ಕೊಳಕು ರಾಜಕೀಯ ಮಾಡಿ ರಾಜ್ಯಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ಕಳಂಕ ತಂದಿದೆ, ಇದರಿಂದ ಬೇಸತ್ತ ಜನರು ಇಂದು ಕಾಂಗ್ರೆಸ್ ಪಕ್ಷವನ್ನು ಅಧಿಕಾರದಲ್ಲಿ ಕೂರಿಸಿದರು ಆದರೆ ಕಾಂಗ್ರೆಸ್ ಸರಕಾರ ಫ್ಯಾಸಿಸಂ ವಿರುದ್ಧ ಕ್ರಮ ಕೈಗೊಳ್ಳುವ ಬದಲು ಸಂವಿಧಾನ ವಿರೋಧಿಗಳಿಂದಲೇ ಶಾಸಕರಿಗೆ ನೈತಿಕತೆಯ ಪಾಠ ಮಾಡಿಸಲು ಹೊರಟದ್ದು ವಿಪರ್ಯಾಸವಾಗಿದೆ. ಕಾಂಗ್ರೆಸ್ ಪಕ್ಷ ಬಿಜೆಪಿ ಪಕ್ಷವನ್ನು ಮತಗಳಿಂದ ಸೋಲಿಸಿರಬಹುದು ಆದರೆ ದೇಶದಲ್ಲಿ ಅಪಾಯಕಾರಿಯಾಗಿ ಬೆಳೆಯುತ್ತಿರುವ ಫ್ಯಾಸಿಸಂ ಸಿದ್ದಾಂತವನ್ನು ಸೋಲಿಸಲು ಕಾಂಗ್ರೆಸ್‌ ಸರಕಾರಕ್ಕೆ ಸಾದ್ಯವಿಲ್ಲ. ಅದು ಸಾದ್ಯವಿದ್ದರೆ ಸಾಮಾಜಿಕ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇರುವಂತಹ SDPI ಪಕ್ಷದಿಂದ ಮಾತ್ರ. ಅದಕ್ಕಾಗಿ ನಾವೆಲ್ಲರೂ ಹೋರಾಟದ ರಾಜಕೀಯದಲ್ಲಿ ದೃಢವಾಗಿ ನಿಲ್ಲಬೇಕು ಎಂದು ಕಾರ್ಯಕರ್ತರಿಗೆ ಕರೆಕೊಟ್ಟರು.

 

ಕಾರ್ಯಕ್ರಮದಲ್ಲಿ ಎಸ್ಡಿಪಿಐಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಮಾಲ್ ಜೋಕಟ್ಟೆ, ಇನ್ನೋಳಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಅನ್ಸಾರ್, ಸಜಿಪನಡು ಗ್ರಾಮ ಪಂಚಾಯತ್ ಸದಸ್ಯರಾದ ಮಮ್ತಾಜ್, ಮುನ್ನೂರು ಬ್ಲಾಕ್ ಸಮಿತಿಯ ಅಧ್ಯಕ್ಷರಾದ ಬಶೀರ್ ಎಸ್ ಎಂ, ಹಾಗೂ ಕುತ್ತಾರ್ ಬ್ಲಾಕ್ ಸಮಿತಿಯ ಕಾರ್ಯದರ್ಶಿ ನವಾಝ್ ಮತ್ತು ಬೆಲ್ಮಾ ಗ್ರಾಮ ಸಮಿತಿಯ ಅಧ್ಯಕ್ಷರಾದ ಅಶ್ರಫ್ DA ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಮಂಗಳೂರು ಕ್ಷೇತ್ರ ಸಮಿತಿಯ ಜೊತೆ ಕಾರ್ಯದರ್ಶಿ ಉಬೈದ್ ಅಮ್ಮೆಂಬಳ ಸ್ವಾಗತಿಸಿ, ಆರಿಫ್ ಬೋಳಿಯಾರು ಧನ್ಯವಾದ ಸಮರ್ಪಿಸಿದರು. ಅಶ್ರಫ್ ಮೋನು ನಿರೂಪಣೆಗೈದರು.

error: Content is protected !!

Join the Group

Join WhatsApp Group