ಬಸ್ ಪಾಸ್ ತೋರಿಸಲು ಹೇಳಿದ್ದಕ್ಕೆ ತಗಾದೆ ➤ ವಿಚಾರಣೆ ನಡೆಸಿದ ಪಿಎಸ್ಐ ಮುಖಕ್ಕೆ ಹೊಡೆದ ವಿದ್ಯಾರ್ಥಿ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜೂ. 14. BMTC ಬಸ್‍ನಲ್ಲಿ ಟಿಕೆಟ್ ತೆಗೆದುಕೊಳ್ಳಲು ನಿರಾಕರಿಸಿ ತಕರಾರು ಮಾಡಿದ್ದ ಯುವಕನೋರ್ವ ಚಾಲಕ ಹಾಗೂ ನಿರ್ವಾಹಕನೊಂದಿಗೆ ಜಗಳ ಮಾಡಿದ್ದು ಬಳಿಕ ಪೊಲೀಸ್ ಠಾಣೆಯಲ್ಲಿ ಎಎಸ್‍ಐ ಮತ್ತು ಪಿಎಸ್‍ಐ ಮೇಲೆಯೂ ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ವಿದ್ಯಾರಣ್ಯಪುರಂನ ನಿವಾಸಿ ಮೌನೇಶ್ ಎಂಬಾತ ಪೀಣ್ಯ ಸಮೀಪ ಬಸ್ಸು ಹತ್ತಿದ್ದನು. ಆತನಲ್ಲಿ ಟಿಕೆಟ್ ಕೇಳಿದಾಗ ತಮ್ಮ ಬಳಿ ವಿದ್ಯಾರ್ಥಿ ಪಾಸ್ ಇದೆ ಎಂದಾಗ, ನಿರ್ವಾಹಕರು ಪಾಸ್ ತೋರಿಸುವಂತೆ ಸೂಚಿಸಿದ್ದಾರೆ. ಆದರೆ ಯುವಕ ಪಾಸ್ ಮೊಬೈಲ್‍ನಲ್ಲಿದೆ ಎಂದು ಹೇಳುತ್ತಲೇ ಪಾಸ್ ತೋರಿಸಲು ತಗಾದೆ ತೆಗೆದಿದ್ದಾನೆ. ಈ ವೇಳೆ ಚಾಲಕ ಹಾಗೂ ನಿರ್ವಾಹಕರೊಂದಿಗೆ ಆತ ವಾಗ್ವಾದ ನಡೆಸಿದಲ್ಲದೇ, ಬಸ್‍ನಲ್ಲಿದ್ದವರು ಮದ್ಯ ಪ್ರವೇಶಿಸಿ ಪಾಸ್ ತೋರಿಸಬೇಕು ಇಲ್ಲವೇ ಟಿಕೆಟ್ ತೆಗೆದುಕೊಳ್ಳಬೇಕೆಂದು ತಾಕೀತು ಮಾಡಿದ್ದಾರೆ. ಆದರೆ, ಆತ ಯಾವುದಕ್ಕೂ ಜಗ್ಗದೇ ಇದ್ದಾಗ ಚಾಲಕ ಬಸ್ ನ್ನು ಪೀಣ್ಯ ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋಗಿದ್ದು, ಆದರೆ ಆತ ಅಲ್ಲಿ ವಿಚಾರಣೆ ನಡೆಸಿದ ಎಎಸ್‍ಐ ಮೇಲೂ ಹಲ್ಲೆ ನಡೆಸಿದ್ದಾನೆ. ತಕ್ಷಣವೇ ಠಾಣೆಗೆ ಬಂದ ಪಿಎಸ್‍ಐ ಸಿದ್ದು ಹೂಗಾರ್, ಯುವಕನನ್ನು ವಿಚಾರಿಸಿದಾಗ ಅವರಿಗೂ ಹೊಡೆದಿದ್ದಾನೆ ಎನ್ನಲಾಗಿದೆ. ಘಟನೆಯ ಕುರಿತು ಪೊಲೀಸರು ಯುವಕನ ತಂದೆ-ತಾಯಿಗೆ ಮಾಹಿತಿ ನೀಡಿದ್ದು, ಪ್ರಕರಣ ದಾಖಲಿಸಿದ ಪೊಲೀಸರು ಯುವಕನನ್ನು ವಶಕ್ಕೆ ಪಡೆದಿದ್ದಾರೆ.

error: Content is protected !!

Join the Group

Join WhatsApp Group